ಬಾಗಲಕೋಟೆ: ರಾಜ್ಯದಲ್ಲಿ ಹಲವು ವಾದ ವಿವಾದಗಳ ಮಧ್ಯೆ ಅಸ್ತಿತ್ವಕ್ಕೆ ಬಂದಿದ್ದ ಪಂಚಮಸಾಲಿ ಸಮುದಾಯದ (Panchamsali Community) 3ನೇ ಪೀಠ (3rd Peetha) ಇದೀಗ ಮತ್ತೇ ಮುನ್ನಲೆಗೆ ಬಂದಿದೆ. ಮಠಾಧೀಶರ ನೇತೃತ್ವದಲ್ಲಿ ಮಹತ್ವದ ನಿರ್ಣಯಗಳನ್ನ ಕೈಗೊಳ್ಳುವ ಮೂಲಕ ಕುತೂಹಲ ಮೂಡಿಸಿದೆ. 3ನೇ ಪೀಠಕ್ಕೆ ಪಂಚರಾಜ್ಯಗಳಲ್ಲಿ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ. ಶಾಖಾಮಠಗಳನ್ನ (Branch) ಸ್ಥಾಪಿಸುವ ಮೂಲಕ ಪಂಚರಾಜ್ಯಗಳಲ್ಲಿ ಪೀಠ ವಿಸ್ತರಣೆ ಮುನ್ನಡಿ ಬರೆದಿರುವ ಬಗ್ಗೆ ಸ್ವಾಮೀಜಿಗಳು ಸುಳಿವು ನೀಡಿದ್ದಾರೆ.
ಹೌದು ಸಾಕಷ್ಟು ಪರ ವಿರೋಧದ ನಡುವೆ ಸ್ಥಾಪನೆಯಾದ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಮತ್ತೆ ಈಗ ಮುನ್ನೆಲೆಗೆ ಬಂದಿದೆ. ಜಮಖಂಡಿ ನಗರದ ಜಿಎಲ್ ಬಿಸಿ ಪ್ರವಾಸಿ ಮಂದಿರದಲ್ಲಿ 3ನೇ ಪೀಠದ ಅಧ್ಯಕ್ಷ ಮಹದೇವ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ, 20 ಅಧಿಕ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ.
ಉಸ್ತುವಾರಿಗಳ ನೇಮಕ ಮಾಡಲು ನಿರ್ಧಾರ
ಎರಡು ಗಂಟೆಗಳು ನಡೆದ ಸಭೆಯಲ್ಲಿ ಪ್ರಮುಖವಾಗಿ ಐದು ರಾಜ್ಯಗಳಲ್ಲಿ ಮೂರನೇ ಪೀಠದಿಂದ ಪಂಚಮಸಾಲಿ ಸಮುದಾಯದ ಉಸ್ತುವಾರಿಗಳ ನೇಮಕ ಮಾಡಲು ನಿರ್ಧರಿಸಲಾಯಿತು.
ಇನ್ನು ಉಸ್ತುವಾರಿಗಳ ಆಯ್ಕೆ ಕುರಿತು ಮಾಹಿತಿ ನೀಡಿದ್ರಲ್ಲದೇ, ಹಿಂದಿನ ಎರಡು ಪೀಠಗಳು ರಾಜ್ಯಕ್ಕೆ ಮಾತ್ರ ಸೀಮಿತವಾಗಿವೆ. ಆ ಎರಡು ಪೀಠಗಳು ಮಾಡಲಾಗದ ಕೆಲಸಗಳನ್ನ ಭಕ್ತರೊಂದಿಗೆ ಸೇರಿ ಹೊರ ರಾಜ್ಯದಲ್ಲಿ ಸಮಾಜ ಸಂಘಟನೆಗೆ ಮೂರನೇ ಪೀಠ ಮುಂದಾಗಿದೆ ಎಂದು ಪಂಚಮಸಾಲಿ 3ನೇ ಪೀಠದ ಅಧ್ಯಕ್ಷ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದ್ರು.
ಇದನ್ನೂ ಓದಿ: Hubballi: ಹೆತ್ತ ಮಕ್ಕಳಿಂದಲೇ ಅಪ್ಪನ ಕೊಲೆ! ಆಸ್ತಿಗಾಗಿ ಮರ್ಡರ್ ಸ್ಕೆಚ್ ಹಾಕಿದ ಮಗಳು
ಮತ್ತೆರಡು ಪೀಠದ ಸ್ಥಾಪನೆಯ ಸುಳಿವು
ಪಂಚಮಸಾಲಿ 3ನೇ ಪೀಠದ ಸ್ವಾಮೀಜಿಗಳ ನೇತೃತ್ವದ ಸಭೆಯಲ್ಲಿ ಉಸ್ತುವಾರಿಗಳ ನೇಮಕ ಬೆನ್ನಲ್ಲೇ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂದ್ರ, ತೆಲಂಗಾಣದಲ್ಲಿ 3ನೇ ಪೀಠದ ಶಾಖಾಮಠಗಳು ಅಥವಾ ಇನ್ನೂ ಎರಡು ಪೀಠಗಳ ಸ್ಥಾಪನೆ ಮಾಡುವ ಮುನ್ಸೂಚನೆಯನ್ನ ಸ್ವಾಮಿಜಿಗಳು ನೀಡಿದ್ರಾ ಎಂಬ ವಿಷಯ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಒಕ್ಕೂಟ ಸ್ಥಾಪನೆಯಾದ ವೇಳೆಯೂ ಐದು ಪೀಠಗಳು ಆದರೆ ತಪ್ಪೇನು. ನಮ್ಮ ಹಿರಿಯ ಮಠಾಧೀಶರ ಆಶಯ ಕೂಡ ಪಂಚಮಸಾಲಿ ಸಮುದಾಯಕ್ಕೆ ಐದು ಪೀಠಗಳು ಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದ ಮಾತುಗಳ ಈ ಸಂಧರ್ಭದಲ್ಲಿ ನೆನೆಪಿಸುತ್ತಿವೆ.
5 ರಾಜ್ಯಗಳಲ್ಲಿ ಸಮುದಾಯದ ಸಂಘಟನೆ
ಈ ಮಧ್ಯೆ ಹಂತ ಹಂತವಾಗಿ 5 ರಾಜ್ಯಗಳಲ್ಲಿರುವ ಪಂಚಮಸಾಲಿ ಸಮುದಾಯವನ್ನ ಬಲಗೊಳಿಸಿ ಸಮಾಜ ಸಂಘಟನೆ ಜೊತೆಗೆ ಶಕ್ತಿ ಪ್ರದರ್ಶನ ಮಾಡುವ ಉದ್ದೇಶವಿದೆ ಎನ್ನಲಾಗುತ್ತಿದೆ.
ಯತ್ನಾಳ ಹೇಳಿಕೆಗೆ ತಿರುಗೇಟು
ಸಭೆಯ ನಂತರ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ಮಾತನಾಡಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ 3ನೇ ಪೀಠ ಮುರುಗೇಶ ನಿರಾಣಿಗೆ ಸೀಮಿತವಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿ, ನೀವು ನಮ್ಮವರು, ನಾವು ನಿಮ್ಮವರು. ಈ ಪೀಠ ನಿರಾಣಿಯವರಿಗೆ ಸೀಮಿತ ಅಲ್ಲ.
ಈ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ, ಮೂರನೇ ಪೀಠ ಸ್ಥಾಪನೆ ವೇಳೆ ವಿಜಯಪುರ, ಬಾಗಲಕೋಟೆ, ಬೆಳಗಾವಿಯಿಂದ ಜನರು ನೋಡಿ ಖುಷಿ ಪಟ್ಟಿದ್ದಾರೆ ಎಂದರಲ್ಲದೆ, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಕುರಿತು ಎರಡು ಪೀಠದ ಜೊತೆಗೆ ಸಮುದಾಯಕ್ಕೆ ಬೆಂಬಲ ನೀಡೋದಾಗಿ ತಿಳಿಸಿದ್ರು.
ಇದನ್ನೂ ಓದಿ: Viral Video: ಚಕ್ ಚಕ್ ಅಂತ ಟಿಕೆಟ್ ಕೊಡೋ ರೈಲ್ವೆ ಉದ್ಯೋಗಿ! ಸ್ಪೀಡ್ ನೋಡಿ ವಾವ್ ಎಂದ ನೆಟ್ಟಿಗರು
ಒಟ್ಟಿನಲ್ಲಿ ಮೂರನೇ ಪೀಠದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಗಿದ್ದು, ರಾಜ್ಯಕ್ಕೆ ಸೀಮಿತವಾಗಿದ್ದ ಪಂಚಮಸಾಲಿ ಹೋರಾಟ ಹೊರ ರಾಜ್ಯಗಳಿಗೂ ಪಸರಿಸುವ ಲಕ್ಷಣ ಗೋಚರಿಸ್ತಿದೆ. ಪಂಚರಾಜ್ಯಗಳಲ್ಲಿ ಜೈ ಪಂಚಮಸಾಲಿ, ಜೈ ಜೈ ಪಂಚಮಸಾಲಿ ಅನ್ನೋ ಕೂಗು ಮೊಳಗಿಸಲು ವೇದಿಕೆ ಸಿದ್ಧಗೊಂಡಂತಾಗಿದೆ.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ