ರಾಯಚೂರು: ಕಳೆದ ಕೆಲ ದಿನಗಳಿಂದ ಜೆಡಿಎಸ್ ನಾಯಕ (JDS), ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ರಾಜಕೀಯ ಸಮರಕ್ಕೆ ಬ್ರೇಕ್ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಇದೀಗ ಮತ್ತೆ ಸಮರ ಸಾರಿದ್ದಾರೆ. ರಾಯಚೂರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮನುವಾದಿಗಳ ಸರ್ಕಾರ ಬರಲು ಎಚ್ಡಿ ಕುಮಾರಸ್ವಾಮಿಯೇ ಕಾರಣ ಎಂದು ಟೀಕಿಸಿದ್ದಾರೆ.
2006 ರಲ್ಲಿ 20 ತಿಂಗಳು ಅಧಿಕಾರ ಅಂತ ಬಿಜೆಪಿಗೆ ಮೋಸ ಮಾಡಿದ್ಯಾರು? ಬಿಎಸ್ ಯಡಿಯೂರಪ್ಪನಿಗೆ ಮೋಸ ಮಾಡಿದ್ದು ಯಾರ್ರೀ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೋಸ ಮಾಡಿದ್ದು ಇದೇ ಎಚ್ಡಿ ಕುಮಾರಸ್ವಾಮಿ. ಕುಮಾರಸ್ವಾಮಿ ಸುಳ್ಳು ಹೇಳ್ತಿದ್ದಾರೆ. ಒಂದು ವೇಳೆ ಎಚ್ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡದೇ ಇರುತ್ತಿದ್ದರೆ ಇಂದು ಬಿಜೆಪಿ ಅಧಿಕಾರಕ್ಕೆ ಬರ್ತಿರ್ಲಿಲ್ಲ. ಮನುವಾದಿಗಳ ಸರ್ಕಾರ ಬರಲು ಎಚ್ಡಿ ಕುಮಾರಸ್ವಾಮಿಯೇ ಕಾರಣ. ನೀನು ಬಿಜೆಪಿ ಜೊತೆ ಸರ್ಕಾರ ಮಾಡಿ ಈಗ ಕಾಂಗ್ರೆಸ್, ಬಿಜೆಪಿಯ ಬಿ ಟೀಂ ಅಂತಿಯಲ್ಲಪ್ಪ ನಾಚಿಕೆಯಾಗಲ್ವ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Siddaramaiah: ಸಿಎಂ ಆಗಿ ಅಂಕಲ್ ಎಂದು ಸಿದ್ದರಾಮಯ್ಯಗೆ ತಾನು ಕೂಡಿಟ್ಟ ₹5000 ದೇಣಿಗೆ ಕೊಟ್ಟ ಪುಟ್ಟ ಬಾಲಕಿ!
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ಗೆ ಬರ್ತಾರೆ
ಇನ್ನು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಹೌದು ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ಗೆ ಬರ್ತಾರೆ. 100% ಕಾಂಗ್ರೆಸ್ಗೆ ಬರ್ತಾರೆ ಎಂದು ಹೇಳಿದರು. ಆ ಮೂಲಕ ಶಿವಲಿಂಗೇಗೌಡ ಅವರು ಜೆಡಿಎಸ್ ಬಿಡ್ತಾರೋ? ಕಾಂಗ್ರೆಸ್ ಸೇರ್ತಾರೋ ಎನ್ನುವ ವಿಚಾರಕ್ಕೆ ಸಂಬಂಧಿಸಿದ ಗೊಂದಲಕ್ಕೆ ಸ್ಪಷ್ಟೀಕರಣ ನೀಡಿದರು.
ಹೊಸ ಪಕ್ಷ ಕಟ್ಟಿದವರ್ಯಾರೂ ಉಳಿದಿಲ್ಲ
ಇನ್ನು ಜನಾರ್ದನ ರೆಡ್ಡಿ ಮುಸ್ಲಿಂ ಸಮುದಾಯದ ಒಲವು ಪಡೆಯುತ್ತಿರೊ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಹೊಸ ಪಕ್ಷ ಕಟ್ಟಿದೋರ್ಯಾರೂ ಉಳಿದಿಲ್ಲ. ಪಾಪ ಜನಾರ್ದನ ರೆಡ್ಡಿ ದುಡ್ಡು ಇದೆ ಅಂತ ಪಕ್ಷ ಕಟ್ಟಿದ್ದಾರೆ. ಶ್ರೀ ರಾಮುಲು, ಬಂಗಾರಪ್ಪ, ಯಡಿಯೂರಪ್ಪ ಸೇರಿ ಹಲವರು ಪಕ್ಷ ಕಟ್ಟಿದ್ರು. ಆದರೆ ನಂತರ ಏನಾಯ್ತು? ಈ ಬಾರಿಯ ಚುನಾವಣೆಯಲ್ಲಿ ನಾವು ಕನಿಷ್ಠ 130 ಸೀಟು, ಮ್ಯಾಕ್ಸಿಮಮ್ 150 ಸೀಟು ಗೆಲ್ಲುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Siddaramaiah: ತೇಜಸ್ವಿ ಸೂರ್ಯನನ್ನು ಅಮವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಸಿದ್ದರಾಮಯ್ಯ ವ್ಯಂಗ್ಯ
ಸದ್ಯಕ್ಕೆ ಕೋಲಾರ ಕ್ಷೇತ್ರವೇ ಫೈನಲ್
ಇನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂದಿನ 15 ದಿನಗಳಲ್ಲಿ ರಿಲೀಸ್ ಮಾಡುತ್ತೇವೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಬಾದಾಮಿ, ವರುಣಾ, ಕೋಲಾರದಲ್ಲಿ ನಿಂತ್ರೂ ಗೆಲ್ತೀನಿ. ಹಿಂದೆ ಬಾದಾಮಿ ದೂರ ಆಗ್ತಿತ್ತು. ಕೋಲಾರ ಹತ್ತಿರ ಆಗುತ್ತೆ ಅಂತ ಅಲ್ಲಿರೋ ಕಾರ್ಯಕರ್ತರು ಕರೆದ್ರು. ಹಾಗಾಗಿ ಅಲ್ಲಿ ನಿಲ್ಲೋಕೆ ತೀರ್ಮಾನಿಸಿದ್ದೀನಿ. ಹೈಕಮಾಂಡ್ ತೀರ್ಮಾನ ಕೊಟ್ರೆ ಕೋಲಾರದಲ್ಲೇ ಸ್ಪರ್ಧೆ ಮಾಡ್ತೀನಿ. ಪಾಪ ಬಾದಾಮಿ ಜನರು ನಿಮಗೆ ದೂರ ಆದ್ರೆ ಹೆಲಿಕಾಪ್ಟರ್ ಕೊಡಿಸ್ತೀವಿ ಅಂದ್ರು. ಸದ್ಯಕ್ಕೆ ಕೋಲಾರವೇ ಫೈನಲ್. ನನ್ನ ಮಗ ವರುಣಾದಲ್ಲಿ ಗೆದ್ದಿದ್ದಾನೆ. ಆತ ನನಗೆ ವರುಣಾದಲ್ಲಿ ನಿಲ್ಲಲೂ ಹೇಳಿದ್ದಾನೆ. ಆದರೆ ನಾನು ಕೋಲಾರದಲ್ಲಿ ಸ್ಪರ್ಧೆಗೆ ತೀರ್ಮಾನಿಸಿದ್ದೇನೆ ಎಂದು ಹೇಳಿದರು.
ಇನ್ನು ರಾಜ್ಯ ರಾಜಕೀಯಕ್ಕೆ ಸಂಸದ ಡಿಕೆ ಸುರೇಶ್ ಪ್ರವೇಶ ಮಾಡುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಆ ಬಗ್ಗೆ ನನಗೆ ಗೊತ್ತಿಲ್ಲ. ಅವರ ಜೊತೆಗೆ ನಾನು ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ