ಕಲಬುರಗಿ: ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಕಬ್ಬಿಣ, ಹಾಲು, ಮೊಸರು, ಔಷಧಿ ಇವುಗಳ ಬೆಲೆ ಮಿತಿಮೀರಿದೆ. ಇದನ್ನೇ ಅಚ್ಚೇದಿನ್ (Acche Din) ಎಂದು ಕರೆಯಬೇಕಾ ಮೋದಿಜೀ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. ಕಲಬುರಗಿ (Kalaburagi) ಜಿಲ್ಲೆಯ ಅಳಂದದಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಇಂಥವರಿಗೆ ಮತ ಹಾಕ್ತೀರಾ? ಈ ಬೆಲೆಯೇರಿಕೆಯಿಂದ ನೊಂದಿರುವ ಬಡ ಜನರಿಗೆ ನೆರವಾಗಲು ನಮ್ಮ ಪಕ್ಷವು ಮುಂದೆ ಅಧಿಕಾರಕ್ಕೆ ಬಂದಾಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತದೆ. ಇದಕ್ಕೆ ನಾನು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಅನುಮಾನವೇ ಬೇಡ ಎಂದು ಭರವಸೆ ವ್ಯಕ್ತಪಡಿಸಿದರು.
'10 ಕೆಜಿ ಅಕ್ಕಿ ಉಚಿತವಾಗಿ ನೀಡ್ತೇವೆ'
ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು ಬಿಜೆಪಿಯವರು 5 ಕೆ.ಜಿ ಗೆ ಇಳಿಸಿದ್ದಾರೆ. ಬಡವರಿಗೆ ಅಕ್ಕಿ ನೀಡಿದ್ರೆ ಇವರ ಅಪ್ಪನ ಮನೆಯ ಗಂಟೇನು ಹೋಗುತ್ತಿತ್ತಾ? ಎಂದು ಹರಿಹಾಯ್ದ ಸಿದ್ದರಾಮಯ್ಯ, ನಾವು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿದವರನ್ನು ಅಧಿಕಾರದಿಂದ ಇಳಿಸಬೇಕಲ್ವಾ? ನಾವು ಬಸವಾದಿ ಶರಣರಂತೆ ನುಡಿದಂತೆ ನಡೆದವರು. ಇದೇ ಕಾರಣಕ್ಕೆ ನನ್ನ ಯಾತ್ರೆಯನ್ನು ಬಸವಕಲ್ಯಾಣದಿಂದ ಆರಂಭ ಮಾಡಿದ್ದು. ಬಸವಾದಿ ಶರಣರ ಕಾಲದ ಸಮಾನತೆಯ ಸಂಕೇತವಾದ ಅನುಭವ ಮಂಟಪವನ್ನು ಮರು ನಿರ್ಮಾಣ ಮಾಡಿದ್ದು ನಮ್ಮ ಸರ್ಕಾರ. ನಾವು ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಅಗತ್ಯ ಅನುದಾನ ನೀಡಿ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Congress: ಟಿಕೆಟ್ಗಾಗಿ ಜನಾರ್ದನ ಪೂಜಾರಿ ಮೂಲಕ ಡಿಕೆಶಿಗೆ ಒತ್ತಡ ಹಾಕಿಸಿದ ಮಂಗಳೂರಿನ ಯುವ ಕಾಂಗ್ರೆಸ್ ನಾಯಕ
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಅವರು 2018ರಲ್ಲಿ 600 ಭರವಸೆಗಳನ್ನು ನೀಡಿ ಅದರಲ್ಲಿ 50 ರಿಂದ 60 ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ನಾವು 2013ರಲ್ಲಿ 165 ಭರವಸೆಗಳನ್ನು ನೀಡಿದ್ದೆವು ಅದರಲ್ಲಿ ಅಧಿಕಾರಕ್ಕೆ ಬಂದ ಮೇಲೆ 158 ಭರವಸೆಗಳನ್ನು ಈಡೇರಿಸುವ ಜೊತೆಗೆ 30 ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಜಾರಿ ಮಾಡಿದ್ದೆವು. ಇಂದಿರಾ ಕ್ಯಾಂಟೀನ್ ಕೂಡ ನಮ್ಮ ಹೆಚ್ಚುವರಿ ಕಾರ್ಯಕ್ರಮದಲ್ಲಿ ಒಂದಾಗಿತ್ತು. ಇವತ್ತು ಇಂದಿರಾ ಕ್ಯಾಂಟೀನ್ ಇದೆಯಾ? ಮುಚ್ಚಿದ್ದಾರೆ ಅಲ್ವಾ? ಮುಚ್ಚಿದ್ದು ಯಾಕೆಂದರೆ ಅವರಿಗೆ ತಿನ್ನಲು ಸಾಲಲ್ಲ, ಇನ್ನು ಬಡವರ ಹೊಟ್ಟೆ ತುಂಬಿಸುತ್ತಾರ? ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಬೊಮ್ಮಾಯಿಯವರು ಈ ಬಗ್ಗೆ ಮಾತಾಡುವುದೇ ಇಲ್ಲ ಎಂದು ಟೀಕಿಸಿದರು.
ಬಿಜೆಪಿಗೆ ಜನರ ಆಶೀರ್ವಾದ ಇಲ್ಲ
ಇನ್ನು ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಇವರು ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಎರಡು ಬಾರಿ ಕೂಡ ಆಪರೇಷನ್ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಆಪರೇಷನ್ ಕಮಲ ಎಂಬ ಹೆಸರು ಕೇಳಿರಲಿಲ್ಲ, ರಾಜ್ಯದಲ್ಲಿ ಈ ಆಪರೇಷನ್ ಕಮಲ ಆರಂಭವಾದುದ್ದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರರಿಂದ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇನ್ನು, ನಾನು ಮುಖ್ಯಮಂತ್ರಿಯಾಗಿರುವಾಗ 15 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದೆ. ಈ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ ಎಂದ ಸಿದ್ದರಾಮಯ್ಯ, ನಾವು ಕಟ್ಟಿಸಿಕೊಟ್ಟ ಮನೆಯನ್ನು ಪೂರ್ತಿಗೊಳಿಸಲು ಅನುದಾನ ನೀಡಿಲ್ಲ. ಈಗ ಅಷ್ಟು ಕಟ್ಟಿದ್ವಿ ಇಷ್ಟು ಕಟ್ಟಿದ್ವಿ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂಥವರ ಮಾತನ್ನು ನಂಬಬೇಡಿ. ಬಡವರಿಗೆ ಸೂರು ಕಟ್ಟಿಸಿಕೊಡದ ಈ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು. ನಾವು ಪ್ರಜಾಧ್ವನಿಯನ್ನು ಹಮ್ಮಿಕೊಂಡಿರುವುದು ನಿಮ್ಮ ಧ್ವನಿಯನ್ನು ಕೇಳಿ, ನಿಮ್ಮ ಧ್ವನಿಗೆ ಅನುಗುಣವಾಗಿ ಸರ್ಕಾರ ನಡೆಸಲು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ