• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BK Hariprasad: ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಭರವಸೆಗಳಲ್ಲಿ ಶೇಕಡ 90ರಷ್ಟು ಅನುಷ್ಠಾನಕ್ಕೆ ಬಂದಿಲ್ಲ: ಬಿಕೆ ಹರಿಪ್ರಸಾದ್

BK Hariprasad: ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಭರವಸೆಗಳಲ್ಲಿ ಶೇಕಡ 90ರಷ್ಟು ಅನುಷ್ಠಾನಕ್ಕೆ ಬಂದಿಲ್ಲ: ಬಿಕೆ ಹರಿಪ್ರಸಾದ್

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್

ಈ ಬಜೆಟ್ ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿ ಎಂದಿರುವ ಬಿಕೆ ಹರಿಪ್ರಸಾದ್, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಸವರಾಜ ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ‌ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಮಂಡಿಸಿರುವ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಕಡ 90ರಷ್ಟು ಅನುಷ್ಠಾನಕ್ಕೆ ಬಂದಿಲ್ಲ. ಈ ಬಜೆಟ್ ಕೂಡ ಅದೇ ರೀತಿ ಅನುಷ್ಠಾನದ ಬದ್ಧತೆ ಇಲ್ಲದ ಘೋಷಣೆಗಳ ಪುಸ್ತಕದಂತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅಭಿಪ್ರಾಯಪಟ್ಟಿದ್ದಾರೆ.


ಕಾರ್ಪೊರೇಟ್ ಬಂಡವಾಳ ಶಾಹಿಗಳಿಗೆ ಬೆಂಬಲ


ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಅವುಗಳನ್ನು ನಿವಾರಣೆ ಮಾಡುವ ದೂರದೃಷ್ಟಿಯ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಇಲ್ಲ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯದಲ್ಲಿ ಮುಂದುವರಿದಿರುವ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಬಜೆಟ್‌ನಲ್ಲಾದರೂ ಹೊರ ಬೀಳಬಹುದು ಎಂದು ರಾಜ್ಯದ ರೈತರು ಕಾಯುತ್ತಿದ್ದರು. ಆದರೆ, ಬೊಮ್ಮಾಯಿಯವರು ಕಾರ್ಪೊರೇಟ್ ಬಂಡವಾಳ ಶಾಹಿಗಳ ಬೆಂಬಲಕ್ಕೆ ನಿಂತು ಆ ಕಾನೂನುಗಳನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: BK Hariprasad: ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕಂತ ಹೇಳಲಿ: ಬಿ.ಸಿ ಪಾಟೀಲ್‌ಗೆ ಹರಿಪ್ರಸಾದ್ ಟಾಂಗ್


ರೈತರನ್ನು ವಂಚಿಸುವ ತಂತ್ರಗಾರಿಕೆ


ರಸಗೊಬ್ಬರದ ದರ ಏರಿಕೆ ನಿಯಂತ್ರಣ, ಸಹಾಯಧನ ವಿತರಣೆ ಸೇರಿದಂತೆ ರೈತರನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡುವ ಯಾವ ಕಾರ್ಯಕ್ರಮವೂ ಬಜೆಟ್ ನಲ್ಲಿ ಇಲ್ಲ ಎಂದಿರುವ ಬಿಕೆ ಹರಿಪ್ರಸಾದ್, ನೀರಾವರಿ ಯೋಜನೆಗಳಿಗೆ ₹25,000 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ, ಅದರ ಸರಿಯಾದ ಚಿತ್ರಣವೇ ಇಲ್ಲ. ಇದು ರಾಜ್ಯದ ರೈತರನ್ನು ವಂಚಿಸುವ ಬಿಜೆಪಿ ಸರ್ಕಾರದ ತಂತ್ರಗಾರಿಕೆಯ ಭಾಗ. ಗೃಹಿಣಿ ಶಕ್ತಿ ಯೋಜನೆ ಹೆಸರಿನಲ್ಲಿ ರಾಜ್ಯದ ಗೃಹಿಣಿಯರಿಗೆ ಮಾಸಿಕ ₹1500ರಿಂದ ₹2000 ನೆರವು ನೀಡುವುದಾಗಿ ಬೊಮ್ಮಾಯಿ ಸರ್ಕಾರ ಘೋಷಿಸಿತ್ತು. ಆದರೆ, ಈಗ ಕಾರ್ಮಿಕ ಮಹಿಳೆಯರಿಗೆ ಮಾತ್ರ ತಿಂಗಳಿಗೆ ₹500 ನೆರವು ಪ್ರಕಟಿಸಿದೆ‌. ಇದು ನುಡಿದಂತೆ ನಡೆಯದ ಸರ್ಕಾರ ಎಂಬುದಕ್ಕೆ‌ ಇನ್ನೇನು ಸಾಕ್ಷಿ ಬೇಕು? ಎಂದು ಪ್ರಶ್ನಿಸಿದ್ದಾರೆ.


ಬಜೆಟ್ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ


ಇನ್ನು, ಶಿಕ್ಷಣ, ಆರೋಗ್ಯ, ಸಮಾಜ‌ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳಲ್ಲಿ ಬಜೆಟ್ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿರುವ ಬಿಕೆ ಹರಿಪ್ರಸಾದ್, ಬಿಜೆಪಿಯ ಚುನಾವಣಾ ರಾಜಕಾರಣದ ಭಾಗವಾಗಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಮೇಕೆದಾಟು ಯೋಜನೆಗೆ ₹1,000 ಕೋಟಿ‌ ಅನುದಾನ ಒದಗಿಸುವುದಾಗಿ‌ ಮುಖ್ಯಮಂತ್ರಿ ಹಿಂದೆ ವಿಧಾನಮಂಡಲದಲ್ಲೇ ಭರವಸೆ ನೀಡಿದ್ದರು. ಈಗ ಅದರಿಂದ ಹಿಂದೆ ಸರಿದು ಮಾತು ತಪ್ಪಿದ್ದಾರೆ. ಎತ್ತಿನಹೊಳೆ ಯೋಜನೆ ವಿಚಾರದಲ್ಲೂ ಅವರ ಕಳಕಳಿ ಮಾತಿಗೆ ಸೀಮಿತ ಎಂಬುದು ಈಗ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: B Sriramulu: ಹರಿಪ್ರಸಾದ್ ಅವ್ರೇ ನೀವು ಯಾವ ಸೀಮೆ ನಾಯಕರು? ಶ್ರೀರಾಮುಲು ವಾಗ್ದಾಳಿ


ವಿದಾಯ ಭಾಷಣದ ಬಜೆಟ್‌


ಒಟ್ಟಾರೆಯಾಗಿ ಈ ಬಜೆಟ್ ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿ ಎಂದಿರುವ ಬಿಕೆ ಹರಿಪ್ರಸಾದ್, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಸವರಾಜ ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ‌. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವೂ ಬಜೆಟ್ ನಲ್ಲಿ ಇಲ್ಲ. ಸಂಪ್ರದಾಯದಂತೆ ಬಸವರಾಜ ಬೊಮ್ಮಾಯಿ ಅವರು ವಿದಾಯ ಭಾಷಣವನ್ನು ಬಜೆಟ್ ರೂಪದಲ್ಲಿ ಮಂಡಿಸಿದ್ದಾರೆ. ಜನರನ್ನು ವಂಚಿಸುವ ಈ ಪ್ರಯತ್ನದಲ್ಲಿ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿಗೆ ಯಶಸ್ಸು ದೊರೆಯದು ಎಂದು ಹೇಳಿದ್ದಾರೆ.

Published by:Avinash K
First published: