ಚನ್ನಪಟ್ಟಣ(ಜು.01): ಸಂಕಷ್ಟದಲ್ಲಿ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ತೆಂಗು (Coconut Tree) ಬೆಳೆಗಾರರು ಸಿಲುಕಿದ್ದಾರೆ. ನುಸಿಪೀಡೆ ರೋಗದಿಂದ ಸಾವಿರಾರು ತೆಂಗಿನ ಮರಗಳ ಸುಳಿಗಳು ಒಣಗಿ ಹೋಗುತ್ತಿದೆ. ಬೃಹತ್ತಾಗಿ ತೆಂಗಿನ ಮರಗಳು ಬೆಳೆದರೂ, ಕಾಯಿ ಇಲ್ಲದೆ ನುಸಿರೋಗಕ್ಕೆ ತುತ್ತಾಗಿ ಬಳಲುತ್ತಿವೆ. ಇದರಿಂದ ರೈತರಿಗೆ (Farmers)ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ. ಒಂದು ತೆಂಗಿನ ಸಸಿ ಬೆಳೆಸಿದ್ರೆ 70 ವರ್ಷದ ತರುವಾಯ ಅದು ನಮ್ಮನ್ನು ಸಾಕುತ್ತದೆ ಎಂಬ ನಾನ್ಮುಡಿ ಇದೆ. ಆದರೆ, ಇತ್ತೀಚಿಗೆ ಈ ನಾನ್ಮುಡಿ ಕೇವಲ ನಾನ್ಮುಡಿಯಾಗಿಯೇ ಉಳಿದುಕೊಂಡಿದೆ.
ಪ್ರಕೃತಿಯೇ ಮಾನವನ ಮೇಲೆ ಮುನಿಸಿಕೊಂಡಿದ್ದು, ಒಂದೆಡೆ ಸರಿಯಾದ ಸಮಯದಲ್ಲಿ ಮಳೆಯಾಗದೆ ಕುಡಿಯಲು ನೀರಿಲ್ಲದೆ ಬರಗಾಲ ತಾಂಡವವಾಡುತ್ತಿದೆ. ಆದರೆ ಚನ್ನಪಟ್ಟಣಕ್ಕೆ ನೀರಿನ ಕೊರತೆ ಇಲ್ಲ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೀರಾವರಿ ಯೋಜನೆ ಅನುಷ್ಠಾನ ಮಾಡಿದ ನಂತರ ಇಡೀ ಚನ್ನಪಟ್ಟಣ ತಾಲೂಕು ಸಮೃದ್ಧವಾಗಿ ನೀರಾವರಿಯಾಗಿದೆ. ಅದರೆ ತೆಂಗಿಗೆ ನುಸಿರೋಗ ಬಂದು ಇದನ್ನ ನಂಬಿಕೊಂಡು ಬಂದಿದ್ದ ರೈತ ಸಂಕುಲವನ್ನ ನಾಶ ಮಾಡಲು ಹೊರಟಿದೆ. ಇದಕ್ಕೆ ಚನ್ನಪಟ್ಟಣ ಕೂಡ ಹೊರತಾಗಿಲ್ಲ. ಜಿಲ್ಲೆಯ ರೈತರ ಜೀವನಾಡಿ ಬೆಳೆ ಎಂದ್ರೆ ಅದು ತೆಂಗು.
ಶೇ.40ರಷ್ಟು ಕುಟುಂಬ ತೆಂಗು ಬೆಳೆ ಅವಲಂಬನೆ:
ಜಿಲ್ಲೆಯ ಶೇ. 35ರಿಂದ 40ರಷ್ಟು ಕುಟುಂಬ ಈ ತೆಂಗು ಬೆಳೆಯನ್ನ ಆಶ್ರಯಿಸಿಕೊಂಡಿದೆ. ಜಿಲ್ಲೆಯಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.
ನುಸಿಪೀಡೆ ರೋಗ
ಮೊದ ಮೊದಲು ತೆಂಗು ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿದ್ದ ರೈತನಿಗೆ, ಇತ್ತೀಚಿನ ದಿನಗಳಲ್ಲಿ ತೆಂಗಿನ ಬೆಳೆ ಎಂದರೆ ಬೆಚ್ಚಿ ಬೀಳುತ್ತಾನೆ. ಕಾರಣ ತೆಂಗಿಗೆ ಮುಕ್ತವಾಗದ ನುಸಿಪೀಡೆ ರೋಗ. ಈ ರೋಗದಿಂದ ತೆಂಗಿನ ಸುಳಿಯೇ ಸಂಪೂರ್ಣವಾಗಿ ಒಣಗಲಾರಂಭಿಸಿದೆ. ಸುಮಾರು 50 ರಿಂದ 60 ಅಡಿ ಎತ್ತರವಾಗಿ ಬೆಳೆದ ತೆಂಗು ಕಾಯಿ ಇಲ್ಲದೆ ಬೆಳೆಯೆಲ್ಲಾ ಸಂಪೂರ್ಣವಾಗಿ ಒಣಗಿ ಯಾವುದೇ ಉಪಯೋಗಕ್ಕೆ ಬಾರದೆ ನಿಂತಿದೆ.
ಇದನ್ನೂ ಓದಿ: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ ಮೇಲೆ ಟೆಂಡರ್ ಯಾಕೆ ಸ್ವಾಮಿ?
ತಾಲೂಕಿನ ಹೊಂಗನೂರು, ಬಿ.ವಿ.ಹಳ್ಳಿ, ಸಿಂಗರಾಜೀಪುರ, ಹನುಮಂತಪುರ, ಹನಿಯೂರು, ಕೂಡ್ಲುರು ಸೇರಿದಂತೆ ಹಲವು ಗ್ರಾಮದಲ್ಲಿ ತೆಂಗಿನ ಬೆಳೆಗೆ ನುಸಿರೋಗ ಬಂದಿದೆ. ಸಾವಿರಾರು ತೆಂಗಿನ ಮರಗಳಿಗೆ ನೀರಿಲ್ಲದೆ ಸುಳಿಯೇ ಒಣಗಲಾರಂಭಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸುವಂತೆ ತೆಂಗು ಬೆಳೆಗಾರರು ಒತ್ತಾಯಿಸಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ:
ಒಟ್ಟಾರೆ ನುಸಿ ರೋಗದಿಂದಾಗಿ ತೆಂಗು ಗಿಡವೇ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಗೊತ್ತಿಲ್ಲ. ತೆಂಗಿನ ಬೆಳೆ ರೈತರ ಸಂಕಷ್ಟವನ್ನ ಕೇಳುವವರೇ ಇಲ್ಲದಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನುಸಿರೋಗಕ್ಕೆ ಶಾಶ್ವತ ಪರಿಹಾರ ಹುಡುಕಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.
ನುಸಿರೋಗ ಬಂದರೆ ತೆಂಗು ಸಂಪೂರ್ಣ ನಾಶ :
ತೆಂಗಿಗೆ ನುಸಿರೋಗ ಅಂಟಿಕೊಂಡ್ರೆ ಸಾಕು ತೆಂಗಿನ ಮರವನ್ನೆ ಸಂಪೂರ್ಣ ಹಾನಿಗೊಳಿಸಲಿದೆ. ಕೆಲವು ತೆಂಗಿನ ಮರಗಳು ನುಸಿರೋಗದಿಂದ ತೆಂಗಿನ ಗರಿಯೆಲ್ಲಾ ಒಣಗಿ ಬೀಳುತ್ತಿದ್ದು, ಮರದಲ್ಲಿ ಕಾಯಿ ಸಂಖ್ಯೆ ಕೂಡ ಕಡಿಮೆಯಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಕಾಯಿ ಬಾರದ ಹಿನ್ನೆಲೆ ತೆಂಗಿನ ಮರಗಳನ್ನು ಕಡಿದು ಕಟ್ಟಿಗೆಗೆ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿಯಲ್ಲಿ ವರುಣನ ಅಬ್ಬರ; 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಎಷ್ಟೋ ಕುಟುಂಬಗಳು ಇಂದೂ ಬೀದಿಗೆ ಬಂದಿದ್ದು, ದಿಕ್ಕು ಕಾಣದೆ ಕಂಗಾಲಾಗಿದ್ದಾರೆ. ಹಾಗಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ