ಕಲಬುರ್ಗಿ: ಭೀಮಾ ತೀರ ಮತ್ತೊಮ್ಮೆ ಚರ್ಚೆಯಲ್ಲಿದೆ. ಪ್ರತಿ ಬಾರಿ ಬಂದೂಕಿನಿಂದ ಗುಂಡು ಹಾರಿದಾಗ ಭೀಮಾ ತೀರ ಸದ್ದಾಗುತ್ತಿತ್ತು. ಆದರೆ ಈ ಬಾರಿ ತಲ್ವಾರ್ ಝಳಪಿಸಿ, ಶತ್ರು ಸಂಹಾರ ಯಾಗ ಮಾಡಿರುವುದರಿಂದ ಸುದ್ದಿಯಲ್ಲಿದೆ. ಇಷ್ಟಕ್ಕೂ ಹೀಗೆ ತಲ್ವಾರ್ ಝಳಪಿಸಿ ಶತ್ರು ಸಂಹಾರ ಯಾಗ ಮಾಡಿದವರು ಯಾರಂತೀರಾ..? ಭೀಮಾ ತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನನ ಅಳಿಯ ಭಾಗಪ್ಪ ಹರಿಜನ.
ಹೌದು, ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕ ಭಾಗಪ್ಪ ಹರಿಜನನ ಹವಾ ಕಂಡುಬಂದಿದೆ. ಬಂದೂಕು ಹಿಡಿದು ಮೆರೆದಾಡಿದವನ ಕೈಯಲ್ಲಿ ತಲ್ವಾರ್ ಕಾಣಿಸಿಕೊಂಡಿದೆ. ಶತ್ರು ನಾಶಕ್ಕಾಗಿ ವಿಶೇಷ ಪೂಜೆ ನಡೆಸಿದ್ದಾನೆ. ಅಫಜಲಪುರ ತಾಲೂಕಿನ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ ಪೂಜೆ ಸಲ್ಲಿಸಿದ್ದಾನೆ.
ಬಬಲಾದ ಗ್ರಾಮದೇವಿ ಯಲ್ಲಮ್ಮ ದೇಗುಲದಲ್ಲಿ ಶತೃ ಸಂಹಾರ ಪೂಜೆ ಮಾಡಿದ್ದು, ಕೈಯಲ್ಲಿ ತಲ್ವಾರ್ ಹಿಡಿದು ಭಾಗಪ್ಪ ಹರಿಜನ್ ಆರ್ಭಟ ಮಾಡಿದ್ದಾನೆ. ಇದೇ ವೇಳೆ ತಲ್ವಾರ್ ಬೀಸಿ ಬಾಳೆ ದಿಂಡನ್ನು ಒಂದೇ ಏಟಿಗೆ ಕತ್ತರಿಸಿದ್ದಾನೆ. ನಂತರ ಕುಂಬಳಕಾಯಿ ಕತ್ತರಿಸಿ ಶತ್ರು ನಾಶಕ್ಕೆ ಭಾಗಪ್ಪ ಪಣ ತೊಟ್ಟಿದ್ದಾನೆ. ಬೆಂಬಲಿಗರೊಂದಿಗೆ ಕಾಣಿಸಿಕೊಂಡ ಭಾಗಪ್ಪ ಅವರ ವೇಶ ಭೂಷಣ, ಹಾವ ಭಾವ, ಆಕ್ರೋಶ, ಭಾವಾವೇಶದ ಪೂಜೆ ಕಂಡು ಭೀಮಾತೀರದ ಜನ ಬೆಚ್ಚಿ ಬಿದ್ದಿದ್ದಾರೆ.
ಇತ್ತೀಚೆಗೆ ಇಂಡಿ ಚಿನ್ನದ ವ್ಯಾಪಾರಿ ಶಿ.ಡಾಂಗೆ ಎಂಬವರಿಗೆ ಬೆದರಿಕೆ ಹಾಕಿದ್ದ ಕೇಸ್ನಲ್ಲಿ ಭಾಗಪ್ಪ ಜೈಲು ಸೇರಿದ್ದರು. ಇದೀಗ ಹೊರಬಂದಿರುವ ಭಾಗಪ್ಪ ಶತ್ರು ಸಂಹಾರ ಪೂಜೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಈ ಪೂಜೆ ಒಂದು ವಾರದ ಹಿಂದೆ ನಡೆದಿದೆ ಎನ್ನಲಾಗಿದ್ದು, ಇದರ ವೀಡಿಯೋ ವೈರಲ್ ಇದೀಗ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ