ಬಳ್ಳಾರಿ (ಏ.17): ವ್ಯಾಪಕವಾಗಿ ಕೋವಿಡ್–19 ಹರಡುತ್ತಿರುವುದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್ಐ), ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಿದ್ದರಿಂದ ಶುಕ್ರವಾರ ವಿಶ್ವ ಪಾರಂಪರಿಕ ತಾಣ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಹಂಪಿ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು, ಆದರೆ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಈಗಾಗಲೇ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ನಿಷೇಧ ಹೇರಿದೆ. ಹೀಗಾಗಿ ಯಾವುದೇ ಪ್ರವಾಸಿಗರು ಕೂಡ ಇತ್ತ ಸುಳಿಯುತ್ತಿಲ್ಲ, ಪ್ರವಾಸಿಗರಿಲ್ಲದೆ ಹಂಪಿ ಬಣಗುಡುತ್ತಿದೆ.
ಕಮಲಾಪುರದ ವಸ್ತು ಸಂಗ್ರಹಾಲಯ, ಹಂಪಿಯ ವಿಜಯ ವಿಠಲ ದೇವಸ್ಥಾನ, ಕಮಲ ಮಹಲ್, ರಾಣಿ ಸ್ನಾನಗೃಹ, ಸಾಸಿವೆಕಾಳು ಗಣಪ, ಕಡಲೆಕಾಳು ಗಣೇಶ ಸೇರಿದಂತೆ ಇತರೆ ಸ್ಮಾರಕಗಳ ಪ್ರವೇಶ ದ್ವಾರದಲ್ಲಿ ಪ್ರವೇಶದ ಮೇಲೆ ನಿರ್ಬಂಧ ಹೇರಿದ ಪತ್ರ ಅಂಟಿಸಲಾಗಿತ್ತು. ಪ್ರವೇಶ ದ್ವಾರಕ್ಕೆ ಬೀಗ ಜಡಿದು, ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಒಂದು ವೇಳೆ ಮಾಹಿತಿ ಕೊರತೆಯಿಂದ ಪ್ರವಾಸಿಗರು ಹಂಪಿ ಕಡೆ ಧಾವಿಸಿದರೆ, ಅವರಿಗೆ ಮಾಹಿತಿ ನೀಡಲೆಂದು ಅಲ್ಲಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ ತಿಳಿಸಲಾಗಿದೆ.
ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಹಂಪಿಗೆ ಪ್ರವಾಸಿಗರನ್ನು ನಿಷೇಧಿಸಿ, ಆದೇಶ ಹೊರಡಿಸಿದ್ದರೂ ಸಹ ಕೆಲವೊಂದಿಷ್ಟು ಪ್ರವಾಸಿಗರು ಬಂದು, ಹಂಪಿ ನೋಡದೆ ನಿರಾಸೆಯಿಂದ ವಾಪಾಸ್ ಆಗಿರುವುದು ಕಂಡುಬರುತ್ತಿತ್ತು.
ಹಂಪಿ ವೀಕ್ಷಣೆಗೆಂದು ಗುರುವಾರ ಸಂಜೆ ದೂರದ ಊರುಗಳಿಂದ ನಗರಕ್ಕೆ ಬಂದು ವಿವಿಧ ಹೋಟೆಲ್ಗಳಲ್ಲಿ ತಂಗಿದ ಜನ ಶುಕ್ರವಾರ ಬೆಳಿಗ್ಗೆ ಸ್ಮಾರಕಗಳನ್ನು ನೋಡಲಾಗದೆ ನಿರಾಸೆಯಿಂದ ಹಿಂತಿರುಗಿದರು.
ಅತ್ತೆಯ ವೈಟ್ ಗೌನ್ ಮೇಲೆ ಬಿಸಿ ಗ್ರೇವಿ ಚೆಲ್ಲಿದಾಕೆಗೆ 5,500 ರೂ ಟಿಪ್ ನೀಡಿದ ನವವಧು: ಯಾಕೆ ಗೊತ್ತಾ?
‘ವಾರಾಂತ್ಯದ ಮೂರು ದಿನ ಹಂಪಿಯಲ್ಲಿ ಕಳೆಯಬೇಕೆಂದು ಯೋಜನೆ ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಗುರುವಾರ ಸಂಜೆ ಹೊಸಪೇಟೆಗೆ ಬಂದು, ಹೋಟೆಲ್ನಲ್ಲಿ ಉಳಿದುಕೊಂಡಿದ್ದೆವು. ಆದರೆ, ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ ಹೇರಿರುವ ವಿಚಾರ ಶುಕ್ರವಾರ ಬೆಳಿಗ್ಗೆ ಗೊತ್ತಾಯಿತು. ಅನಿವಾರ್ಯವಾಗಿ ಹಿಂತಿರುಗುತ್ತಿದ್ದೇವೆ. ಹೋಟೆಲ್, ಕಾರು ಬಾಡಿಗೆಗೆ ಸಾಕಷ್ಟು ಹಣ ಖರ್ಚಾಗಿದೆ’ ಎಂದು ಬೆಂಗಳೂರಿನ ನಿವಾಸಿ ರಾಜೇಶ ತಿಳಿಸಿದರು.
ಸ್ಮಾರಕಗಳ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವಿರೂಪಾಕ್ಷೇಶ್ವರ ದೇವಸ್ಥಾನದ ದ್ವಾರದ ಬಳಿ ಪತ್ರ ಅಂಟಿಸಲಾಗಿತ್ತು. ಆದರೆ, ಬೆರಳೆಣಿಕೆಯಷ್ಟು ಭಕ್ತರು ಎಂದಿನಂತೆ ದೇವರ ದರ್ಶನ ಪಡೆದರು.
ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಿದೆ ಆದರೆ ವಿರೂಪಾಕ್ಷ ದೇವರಿಗೆ ಎಂದಿನಂತೆಯೇ ಎಲ್ಲ ಪೂಜೆ ಪುರಸ್ಕಾರಗಳು ನಡೆಯುತ್ತವೆ ಆಚರಣೆಗೆ ಯಾವುದೇ ರೀತಿ ಅಡ್ಡಿ ಪಡಿಸಲಾಗಿಲ್ಲ ಆದರೆ ಕೋವಿಡ್ ನಿಯಮಾವಳಿ ಪ್ರಕಾರ ಜನರಿಗೆ ಮಾತ್ರ ಪ್ರವೇಶವಿಲ್ಲ.
‘ಪುರಾತತ್ವ ಇಲಾಖೆಯ ಸ್ಮಾರಕಗಳ ವೀಕ್ಷಣೆಗೆ ಸಂಬಂಧಿಸಿದಂತೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅಲ್ಲ. ಭಕ್ತರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ದರ್ಶನ ಪಡೆಯಬಹುದು. ಈ ತಾತ್ಕಾಲಿಕ ನಿಯಮ ಸರ್ಕಾರದ ಮುಂದಿನ ಆದೇಶದ ವರಗೆ ಜಾರಿಯಲ್ಲಿರುತ್ತದೆ’ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ