ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಬಿಜೆಪಿ ಹೊಸ ರಣತಂತ್ರ ರಚನೆ ಮಾಡಿದ್ದು, ಅದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಬಿಜೆಪಿ (BJP) ಪ್ರಾಬಲ್ಯ ಇಲ್ಲದ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಕಮಲ ನಾಯಕರು, ಅಲ್ಲಿಯೇ ಸಾಲು ಸಾಲು ಸಭೆ, ಬೃಹತ್ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದೆ. ಹಳೆ ಮೈಸೂರು (Mysuru Karnataka) ಭಾಗ ಮತ್ತು ಉತ್ತರ ಕರ್ನಾಟಕದ (North Karnataka) ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ (BJP) ಇದೇ ಕ್ಷೇತ್ರಗಳಿಗೆ ತನ್ನ ಮೊದಲ ಆದ್ಯತೆಯನ್ನ ನೀಡುತ್ತಿದೆ. ಈಗಾಗಲೇ ಮಂಡ್ಯಕ್ಕೆ ಎರಡು ಬಾರಿ ಭೇಟಿ ನೀಡಿ, ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ (Congress Vs JDS) ಸಾಂಪ್ರದಾಯಿಕ ವೈರಿಗಳು. ಆದರೆ ಈ ಬಾರಿ ರಾಜಕೀಯ ಸನ್ನಿವೇಶ ಕೊಂಚ ಬದಲಾಗಿದೆ. ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಬಿಜೆಪಿ ಬಲಿಷ್ಠ ಆಗ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈ ಭಾಗದಲ್ಲಿಯೇ ಹೆಚ್ಚು ಸ್ಥಾನ ಗೆಲ್ಲೋದು. ಫಲಿತಾಂಶದಲ್ಲಿ ಯಾರಿಗೂ ಬಹುಮತ ಸಿಗದಿದ್ರೆ ಜೆಡಿಎಸ್ ಕಿಂಗ್ ಮೇಕರ್ ಆಗಿ ಬದಲಾಗುತ್ತದೆ. ಆದ್ದರಿಂದ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇನ್ನು ಅದರಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಕಮಲ ಬಾವುಟ ಹಾರಿಸಲು ಪಣ ತೊಟ್ಟಿದ್ದಾರೆ ಎನ್ನಲಾಗಿದೆ.
ಮಂಡ್ಯ ಮೇಲೆ ಕಣ್ಣಿಟ್ಟ ಶಾಗೆ ಶಾಕ್
ಹೌದು, ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ ಅವರಿಗೆ ಆರಂಭದಲ್ಲಿಯೇ ಶಾಕ್ ಎದುರಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಸ್ಥಾನ ಮಂಡ್ಯ ಉಸ್ತುವಾರಿಯಿಂದ ಹೊರ ಬಂದಿದ್ದಾರೆ. ಕಳೆದ ಎರಡು ವಾರಗಳಿಂದ ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರು ಇಲ್ಲದಂತಾಗಿದೆ. ಇತ್ತ ಮಂಡ್ಯ ಜಿಲ್ಲೆಯ ಉಸ್ತುವಾರಿ ತೆಗೆದುಕೊಳ್ಳಲು ಸಚಿವರು ಸಹ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕಮಲ ಅಂಗಳದಲ್ಲಿ ಕೇಳಿ ಬರುತ್ತಿವೆ.
ಯಾರಿಗೆ ಉಸ್ತುವಾರಿ ಸಿಗುತ್ತೆ?
ಮಂಡ್ಯ ಜೆಡಿಎಸ್ ಭದ್ರಕೋಟೆ ಅಂತಾನೇ ಬಿಂಬಿತವಾಗಿದೆ. ಆದ್ರೆ ಕಳೆದ ಬಾರಿ ನಡೆದ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಸಚಿವ ಕೆ.ಆರ್.ನಾರಾಯಣಗೌಡ ಮತ್ತು ಕೆ.ಗೋಪಾಲಯ್ಯ ಮೂಲ ಜೆಡಿಎಸ್ನವರು. ಹಾಗಾಗಿ ಜೆಡಿಎಸ್ ಕಾರ್ಯತಂತ್ರಗಳನ್ನು ಹತ್ತಿರದಿಂದ ತಿಳಿದವರಾಗಿದ್ದಾರೆ. ಆದ್ದರಿಂದ ಇಬ್ಬರ ಹೆಸರು ಮುನ್ನಲೆಯಲ್ಲಿದ್ದಾರೆ.
ಇನ್ನು ಮತ್ತೊಂದು ಹೆಸರು ಸಚಿವ ಅಶ್ವತ್ಥ್ ನಾರಾಯಣ್. ರಾಮನಗರದಲ್ಲಿ ಸಕ್ರಿಯರಾಗಿರುವ ಅಲ್ಲಿಯ ಡಿಕೆ ಬ್ರದರ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಒಕ್ಕಲಿಗರಾಗಿರುವ ಅಶ್ವಥ್ ನಾರಾಯಣ್ ತಮ್ಮ ಸಮುದಾಯದ ಮತಗಳನ್ನು ಸುಲಭವಾಗಿ ಸೆಳೆಯಬುಹುದು ಎಂಬುವುದು ಬಿಜೆಪಿಯ ಲೆಕ್ಕಾಚಾರ ಆಗಿದೆ.
ಈ ಹಿಂದೆ ಉಸ್ತುವಾರಿ ಆಗಿದ್ದ ಆರ್.ಅಶೋಕ್ ಸಹ ಒಕ್ಕಲಿಗ ನಾಯಕರು. ಆದ್ದರಿಂದ ಅಶೋಕ್ ಸ್ಥಾನಕ್ಕೆ ಅದೇ ಸಮುದಾಯದ ನಾಯಕರಾಗಿರುವ ಅಶ್ವತ್ಥ್ ನಾರಾಯಣ್ ಅವರನ್ನ ತಂದ್ರೆ ಬಿಜೆಪಿಗೆ ಲಾಭ ಆಗಲಿದೆ ಎಂಬುವುದು ಮತ್ತೊಂದು ಲೆಕ್ಕಾಚಾರವಾಗಿದೆ.
ಇದನ್ನೂ ಓದಿ: Mandya: ಈ ಮೂವರಲ್ಲಿ ಯಾರಿಗೆ ಸಿಗುತ್ತೆ ಮಂಡ್ಯ ಉಸ್ತುವಾರಿ? ಬಿಜೆಪಿ ಒಳ ಲೆಕ್ಕಾಚಾರ ಏನು?
ವಿಜಯೇಂದ್ರ ಎಂಟ್ರಿಯಿಂದ ಸಿಗುತ್ತಾ ವಿಜಯ?
ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಡ್ಯ ರಾಜಕಾರಣಕ್ಕೆ ಮತ್ತೊಮ್ಮೆ ಎಂಟ್ರಿ ಪಡೆದುಕೊಂಡಿದ್ದಾರೆ. ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಕಮಲ ಹಾರಿಸಿತ್ತು. ಮಂಡ್ಯದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ವಿಜಯೇಂದ್ರ ಅವರಿಗೆ ಸಲ್ಲುತ್ತೆ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳುತ್ತಾರೆ.
ಈಗ ಉಸ್ತುವಾರಿ ಸಚಿವರು ಇಲ್ಲದ ಮಂಡ್ಯ ಕ್ಷೇತ್ರದಲ್ಲಿ ವಿಜಯೇಂದ್ರ ಕಮಾಲ್ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ