ಕೋಲಾರದಲ್ಲಿ ನವಜಾತ ಶಿಶುವನ್ನು ರಸ್ತೆ ಬದಿ ಬಿಸಾಡಿ ಹೋದ ಪಾಪಿ ಪೋಷಕರು
ಆಗ ತಾನೆ ಹುಟ್ಟಿರುವ ಕರುಳು ಬಳ್ಳಿಯನ್ನೇ ಬಿಟ್ಟು ಹೋಗಿರುವ ತಾಯಿಯ ಕೃತ್ಯಕ್ಕೆ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಪೋಷಕರಿಗಾಗಿ ಹುಡುಕಾಟವನ್ನ ಆರಂಭಿಸಿದ್ದಾರೆ.
ಕೋಲಾರ(ಸೆ.26): ಸಮಾಜದಲ್ಲಿ ಹೆಣ್ಣು-ಗಂಡು ಮಕ್ಕಳೆಂಬ ತಾರತಮ್ಯ ಹೋಗಲಾಡಿಸಲು, ಸರ್ಕಾರ ಹಲವು ಪರಿಣಾಮಕಾರಿ ರೀತಿಯಲ್ಲಿ ಯೋಜನೆ ರೂಪಿಸಿದೆ. ಆದರೂ ಸಹ ಆಗಾಗ ಹೆಣ್ಣು ನವಜಾತ ಶಿಶುವಿನ ಮರಣ ಹಾಗೂ ಮಕ್ಕಳನ್ನು ರಸ್ತೆಗೆ ಎಸೆಯುವ ನೀಚ ಕೃತ್ಯಗಳು ನಡೆಯುತ್ತಲೇ ಇವೆ. ಬಯಲುಸೀಮೆ ಕೋಲಾರದಲ್ಲಿ ಇಂತಹದೊಂದು ಕರುಣಾಜನಕ ಘಟನೆ ನಡೆದಿದ್ದು ತಾಯಿಯ ಗರ್ಭದಿಂದ ಹೊರಬಂದು, ಪ್ರಪಂಚ ನೋಡುವಷ್ಟರಲ್ಲೆ ತಾಯಿ ಮಗುವನ್ನೆ ಬಿಟ್ಟು ಪರಾರಿಯಾಗಿದ್ದಾಳೆ. ಹೌದು, ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯಲ್ಲೆ ಎಸೆದು ಹೋಗಿರುವ ಅಮಾನವೀಯ ಘಟನೆ ಕೋಲಾರ ತಾಲೂಕಿನ ಅಲೇರಿ ಗ್ರಾಮದ ಗೇಟ್ ಬಳಿ ನಡೆದಿದೆ. ಶುಕ್ರವಾರ ಬೆಳಗ್ಗೆ ಜನಿಸಿರುವ ಮುದ್ದಾದ ಹೆಣ್ಣು ಮಗವನ್ನು ದುರುಳರು ಬಟ್ಟೆಯಲ್ಲಿ ಸುತ್ತಿ ಅಲೇರಿ ಗ್ರಾಮದ ಗೇಟ್ ಸಮೀಪ ಬಿಟ್ಟುಹೋಗಿದ್ದಾರೆ. ಮಗು ಆಳುತ್ತಿರುವುದನ್ನು ನೋಡಿದ ಗ್ರಾಮಸ್ಥರು, ಪಕ್ಕದಲ್ಲೆ ಇರುವ ಸುಗುಟೂರು ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಕೇಂದ್ರದ ವೈದ್ಯೆ ಡಾ. ಕಾವ್ಯ ಅವರು, ಮಗವನ್ನು ರಕ್ಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೋಲಾರದ ಜಿಲ್ಲಾಸ್ಪತ್ರೆ ಕೇಂದ್ರಕ್ಕೆ ರವಾನಿಸಿ ಮಗುವಿನ ಆರೈಕೆ ಮಾಡಲಾಗುತ್ತಿದೆ.
ಇನ್ನು ಹುಟ್ಟಿದ ಮಗು ಹೆಣ್ಣೆಂದು ಚಿಂತಿಸಿ, ಕಠೋರ ಹೃದಯದ ಪಾಪಿ ತಂದೆ ತಾಯಿ ಮಗವನ್ನು ರಸ್ತೆಯಲ್ಲಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಆಗ ತಾನೆ ಹುಟ್ಟಿರುವ ಕರುಳು ಬಳ್ಳಿಯನ್ನೇ ಬಿಟ್ಟು ಹೋಗಿರುವ ತಾಯಿಯ ಕೃತ್ಯಕ್ಕೆ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಪೋಷಕರಿಗಾಗಿ ಹುಡುಕಾಟವನ್ನ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಹೆಣ್ಣು ನವಜಾತ ಶಿಶು ಜನಿಸಿದ ಕೂಡಲೇ ಹಲವು ಬಾರಿ, ಮಕ್ಕಳನ್ನ ಹೀಗೆ ಬಿಟ್ಟು ಪರಾರಿಯಾಗುವ ಪೋಷಕರು ಮಾನವೀಯತೆ ದೃಷ್ಟಿಯಿಂದಾದರೂ ಮಕ್ಕಳನ್ನ ಆರೈಕೆ ಮಾಡಬೇಕಿದೆ. ಇದೀಗ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಗು ಕ್ಷೇಮವಾಗಿದ್ದು, ಪೋಷಕರು ಯಾರು ಬಾರದೆ ಇದ್ದಲ್ಲಿ ಶಿಶು ಪಾಲನಾ ಕೇಂದ್ರಕ್ಕೆ ರವಾನಿಸಿ ಮಗುವನ್ನ ಬೆಳೆಸಲು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಆದರೆ ಮಗುವನ್ನ ಹೀಗೆ ಬಿಟ್ಟು ಹೋಗಿರುವ ಪೋಷಕರ ವಿರುದ್ದ ಕಾನೂನು ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿನ್ನೆ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಹೊರಭಾಗದ ನಿರ್ಜನ ಪ್ರದೇಶದಲ್ಲಿ ನವಜಾತ ಗಂಡು ಮಗುವನ್ನು ಎಸೆದು ಹೋಗಿದ್ದರು. ಆ ಮಗು ಹೆತ್ತಮ್ಮನ ಮಡಿಲಲ್ಲಿ ಇರಲು ರೋಧಿಸುತಿತ್ತು. ಹೆತ್ತಮ್ಮನ ಮಡಿಲಲ್ಲಿದ್ದು ಆರೈಕೆ ಕಾಣಬೇಕಾದ ಮಗು ಜಾಲಿ ಕಂಟಿಯಲ್ಲಿ ರೋಧಿಸುವುದನ್ನು ಸ್ಥಳೀಯರು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಆ ಮಗುವನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದರು.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ