ಬೆಂಗಳೂರು(ಆ.13): ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಜಿಲ್ಲಾ ಮತ್ತು ಮಂಡಲ ಕಾರ್ಯಾಲಯ ಭವನಗಳ ಭೂಮಿಪೂಜೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನಾಳೆ ವರ್ಚುವಲ್ ರ್ಯಾಲಿ ಮೂಲಕ ನೆರವೇರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 10.50 ರಿಂದ 12.20 ರವರೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ನವದೆಹಲಿಯಿಂದ ಜೆ ಪಿ ನಡ್ಡಾ ವರ್ಚುವಲ್ ರ್ಯಾಲಿ ಮೂಲಕ ಎಲ್ಲಾ ಎಂಟು ಕಟ್ಟಡಗಳ ಭೂಮಿ ಪೂಜೆಯನ್ನು ಏಕಕಾಲಕ್ಕೆ ನೆರವೇರಿಸಲಿದ್ದಾರೆ ಎಂದರು.
ದೆಹಲಿಯಿಂದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್, ಕೇಂದ್ರ ಸಚಿವರಾದ ಡಿ ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಸರ್ಕಾರಿ ನಿವಾಸದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚುವಲ್ ರ್ಯಾಲಿ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್, ಅಶೋಕ್, ಜಿಲ್ಲಾ ಕಟ್ಟಡ ನಿರ್ಮಾಣ ಸಮಿತಿ ರಾಜ್ಯ ಸಂಚಾಲಕ ಮಾ. ನಾಗರಾಜ್ ಭಾಗಿಯಾಗಲಿದ್ದಾರೆ. ಎಲ್ಲಾ ಜಿಲ್ಲೆಗಳ ಕಟ್ಟಡಗಳು ಶಿಲಾನ್ಯಾಸ ಸಮಾರಂಭ ಏಕಕಾಲಕ್ಕೆ ವರ್ಚುವಲ್ ರ್ಯಾಲಿ ಮೂಲಕ ನೆರವೇರಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಬಿಜೆಪಿ ಕಾರ್ಯಕರ್ತರಿಗೆ ಕಾರ್ಯಾಲಯ ಕಛೇರಿ ಎಂದರೆ ಅದೊಂದು ಭಾವನಾತ್ಮಕ ಶ್ರದ್ಧಾಕೇಂದ್ರ. ಕೇವಲ ಇಟ್ಟಿಗೆ, ಮರಳು ಸಿಮೆಂಟ್ ಮಿಶ್ರಿತ ಜಡ ಗೋಡೆಗಳಿಂದಾದ ಆಸರೆ ಮಾತ್ರವಲ್ಲದೆ, ಅವರ ಭಾವನೆಗಳ ದೇವಾಲಯದಂತೆ ರೂಪಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಪ್ರತಿಯೊಬ್ಬ ಕಾರ್ಯಕರ್ತರಿಂದ ಜಿಲ್ಲಾ ಕಾರ್ಯಾಲಯ ಕಟ್ಟಡ ನಿಧಿ ಅರ್ಪಣೆ ಮೂಲಕ ಸಂಗ್ರಹಿಸಲಾಗುತ್ತಿದೆ. ರಾಜ್ಯ ಸಮಿತಿಯಿಂದ ಆರ್ಥಿಕ ನೆರವು ನೀಡುತ್ತಿದೆ. ಅದರೆ ಅದರ ಅಗತ್ಯತೆ ಇಲ್ಲ, ಜಿಲ್ಲಾ ಸಮಿತಿಗಳು ಹಣ ಹೊಂದಿಸಿ ಕೊಳ್ಳುವಷ್ಟು ಸದೃಢವಾಗಿವೆ ಎಂದರು.
ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ರಾಜ್ಯ ಸಮಿತಿ ಸಂಚಾಲಕ ಡಾಮಾ ನಾಗರಾಜ್ ಮಾತನಾಡಿ, 12 ಸಾವಿರದಿಂದ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಡಿಜಿಟಲ್ ಲೈಬ್ರರಿ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ವರ್ಚುವಲ್ ರ್ಯಾಲಿ ಮೂಲಕ ಸಂವಹನ ಸಂವಾದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಾರ್ಯಕರ್ತರಿಗೆ ಪ್ರಶಿಕ್ಷಣಕ್ಕೆ ಸಭಾಂಗಣ, ಮಾಧ್ಯಮ-ಸಂವಾದ ಸಭಾಂಗಣ, ಸಾರ್ವಜನಿಕ ಅಹವಾಲು ಆಲಿಸಲು ಉಪಯುಕ್ತವಾಗುವಂತೆ ಜಿಲ್ಲಾ ಸಂಸದರು ಶಾಸಕರಿಗೆ ಪ್ರತ್ಯೇಕವಾದ ಸಂವಾದ ಕೊಠಡಿ, ಸಂಘಟನೆಯ ಕಾರ್ಯಕರ್ತರಿಗೆ ವಸತಿ ವ್ಯವಸ್ಥೆ ಒಳಗೊಂಡಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ