ಮೈಸೂರು(ಮಾ.21): ಮಳೆ ನಿಂತರೂ ಮರದನಿ ನಿಲ್ಲಲ್ಲ ಎನ್ನುವ ಮಾತಿದೆ. ಇದೀಗ ಮೈಸೂರು ಮೇಯರ್ ಚುನಾವಣೆ ವಿಚಾರ ಇದೇ ಸ್ಥಿತಿಯಾಗಿದೆ. ತನ್ವೀರ್ ಸೇಠ್ ಬೆಂಬಲಿಗರನ್ನು ಅಮಾನತು ಮಾಡಿದ್ರು ಅಂತ ಇಂದು ಅವರ ಬೆಂಬಲಿಗರು ಪಕ್ಷಕ್ಕೆ ರಾಜೀನಾಮೆ ನೀಡಿ ಟಕ್ಕರ್ ಕೊಟ್ಟಿದ್ದಾರೆ. ದಿನೇ ದಿನೇ ಮೈಸೂರಿನ ಕೈ ಪಾಳಯದಲ್ಲಿ ಆಕ್ರೋಶದ ಕಿಚ್ಚು ಹೆಚ್ಚಾಗುತ್ತಿದ್ದು, ಶನಿವಾರ ತನ್ವೀರ್ ಸೇಠ್ ಅವರ ಹಲವು ಬೆಂಬಲಿಗರು ಕಾಂಗ್ರೆಸ್ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಮೈಸೂರಿನ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು ಮೈಸೂರಿನ ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡಿರುವ ಮುಖಂಡರು, ಶಾಹಿದ್ ಅವರ ಅಮಾನತು ಆದೇಶ ಹಿಂಪಡೆಯದಿದ್ದರೆ ಮುಂದೆ ಮತ್ತಷ್ಟು ಕಾರ್ಯಕರ್ತರು ಮುಖಂಡರು ರಾಜೀನಾಮೆ ನೀಡುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಎನ್.ಆರ್.ಕ್ಷೇತ್ರದ ಹಲವು ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಏಕಾಏಕಿ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ನಗರಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದರು. ಯಾರಪ್ಪ ನೀನು, ನೀನ್ಯಾವ ಹುದ್ದೆಯಲ್ಲಿದ್ದೆ ಅಂತ ಕೇಳುತ್ತಿದ್ದ ನಗರಾಧ್ಯಕ್ಷ ಮೂರ್ತಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಇಂದು ಗುರುತು ಸಿಗಲಿಲ್ಲ. ಹೌದು, ಮೈಸೂರಿನ ಮಹಾನಗರ ಪಾಲಿಕೆಯಲ್ಲಿನ ದೋಸ್ತಿ ರಾಜಕಾರಣದ ಎಫೆಕ್ಟ್ ಕಾಂಗ್ರೆಸ್ ಪಕ್ಷದಲ್ಲಿ ಬೂದಿಮುಚ್ಚಿದ ಕೆಂಡದಂತಾಗಿದೆ.
ಪ. ಬಂ. ಚುನಾವಣೆ ಬಳಿಕ ಹರಿಯಾಣ ಮತ್ತು ಕರ್ನಾಟಕ ಸಿಎಂ ಬದಲಾವಣೆ; ಶಾಸಕ ಯತ್ನಾಳ್ ಹೊಸ ಬಾಂಬ್
ಸಿದ್ದರಾಮಯ್ಯನವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದ ಎನ್.ಆರ್.ಕ್ಷೇತ್ರದ ಕಾರ್ಯಕರ್ತರ ವಿರುದ್ಧ ಕೆಪಿಸಿಸಿ ಕ್ರಮ ಕ್ರಮ ಕೈಗೊಂಡಿದೆ. ಎನ್.ಆರ್ ಕ್ಷೇತ್ರದ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಸೇರಿದಂತೆ ಮೂವರನ್ನ ಅಮಾನತು ಮಾಡಿತ್ತು. ಇದನ್ನ ಖಂಡಿಸಿದ ಮೈಸೂರಿನ ಎನ್.ಆರ್ ಕ್ಷೇತ್ರದ ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪಕ್ಷದ ಜವಾಬ್ದಾರಿಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್ ಅವರ ಅಮಾನತು ಆದೇಶವನ್ನ ಮರು ಪರಿಶೀಲನೆ ನಡೆಸಬೇಕು. ನೋಟಿಸ್ ನೀಡಿ ಅದಕ್ಕೆ ಉತ್ತರ ಕೊಟ್ಟ ಮರುದಿನವೇ ಅವರನ್ನ ಪಕ್ಷದಿಂದ ಅಮಾನತು ಮಾಡಿರುವುದು ಬೇಸರವಾಗಿದೆ. ಈ ಕೂಡಲೇ ಶಾಹಿದ್ ಹಾಗೂ ಮೂವರ ಅಮಾನತು ಆದೇಶ ಹಿಂಪಡೆಯಬೇಕು. ಮತ್ತೆ ಪಕ್ಷದ ಜವಾಬ್ದಾರಿಗೆ ಆದ್ಯತೆ ಕೊಡಬೇಕು. ಇಲ್ಲವಾದರೆ ಮುಂದೆ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರು, ಮುಖಂಡರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಅತ್ತ ಸುದ್ದಿಗೋಷ್ಠಿ ನಡೆಸಿದ್ದ ಅಮಾನತ್ತಾದ ಕೆಪಿಸಿಸಿ ಸದಸ್ಯ ಪಿ.ರಾಜು ಎಂಬುವರು ಸಿದ್ದರಾಮಯ್ಯ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಪರಮೇಶ್ವರ್ಗೆ ಮೋಸ ಮಾಡಿದ್ರು, ಅಹಿಂದ ಹೆಸರಿನಲ್ಲಿ ದಲಿತ ನಾಯಕರ ಕಡೆಗಣನೆ ಮಾಡಿದರು. ಪರಮೇಶ್ವರ್ಗೆ ಸಿಎಂ ಪಟ್ಟ ತಪ್ಪಿಸಿದರು. ಶ್ರೀನಿವಾಸ್ ಪ್ರಸಾದ್ ಪಕ್ಷದಿಂದ ಆಚೆ ಹೋಗುವಂತೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆಯವರಿಗೂ ಅನ್ಯಾಯ ಮಾಡಿದ್ರು. ಪರಮಾಪ್ತ ಹೆಚ್.ಸಿ ಮಹದೇವಪ್ಪಗೆ ಡಿಸಿಎಂ ಮಾಡಬಹುದಿತ್ತು. ಆದರೂ ಮಾಡಲಿಲ್ಲ, ಆದ್ರೆ ಕೆ.ಜೆ ಜಾರ್ಜ್ ಮೇಲೆ ಮೃದು ಧೋರಣೆ ತೋರಿದರು. ಇಷ್ಟೆಲ್ಲಾ ಮಾಡಿದ ಸಿದ್ದರಾಮಯ್ಯನವರ ಮೇಲೆ ಕೆಪಿಸಿಸಿ ಕ್ರಮ ಕೈಗೊಳ್ಳಲಿಲ್ಲ. ನಾವು ತನ್ವೀರ್ ಪರ ನಿಂತಿದ್ದಕ್ಕೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಮಾನತ್ತಾದ ಕೈ ಮುಖಂಡ ರಾಜು ಆಕ್ರೋಶ ಹೊರಹಾಕಿದ್ದರು. ದಿನೇ ದಿನೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಪೋಟಗೊಳ್ಳುತ್ತಿದ್ದು, ಈ ಕೈಜಗಳ ಯಾವಾಗ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ