news18-kannada Updated:October 9, 2020, 9:18 AM IST
ಮೈಸೂರಿಗೆ ಆಗಮಿಸಿರುವ ದಸರಾ ಆನೆಗಳು
ಮೈಸೂರು (ಅ. 9): ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವಾರವೇ ಅರಮನೆಗೆ ಗಜಪಡೆ ಆಗಮಿಸಿದ್ದು, ಇಂದಿನಿಂದ ಗಜಪಡೆಗಳಿಗೆ ಮರಳಿನ ಮೂಟೆ ಹೊರುವ ತಾಲೀಮು ಶುರುವಾಗಲಿದೆ. ಅಭಿಮನ್ಯು ನೇತೃತ್ವದ 5 ಆನೆಗಳಿಂದ ಮರಳು ಮೂಟೆ ಹೊರುವ ತಾಲೀಮು ನಡೆದಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾತ್ರ ಗಜಪಡೆಗಳ ತಾಲೀಮು ನಡೆಯಲಿದೆ. ಇಂದು ಬೆಳಗ್ಗೆ ಅರಮನೆಯ ಸುತ್ತ ಒಂದು ಸುತ್ತು ಹಾಕಿದ ದಸರಾ ಆನೆಗಳ ತಾಲೀಮು ಆರಂಭಕ್ಕೂ ಮುನ್ನ ಮಾವುತ, ಕಾವಾಡಿಗಳಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು. ವಿಕ್ರಮ ಆನೆಗೆ ಮರಳು ಮೂಟೆ ಹೊರಿಸಿ ಅದರ ಮೇಲೆ ತೊಟ್ಟಿಲು ಇಟ್ಟು ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳಾದ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಹಾಗೂ ವಿಜಯ ಮೊದಲ ದಿನದ ತಾಲೀಮು ನಡೆಸಿದವು. ಕೇವಲ 20 ನಿಮಿಷದಲ್ಲಿ ಗಜಪಡೆ ತಾಲೀಮು ಮುಗಿಸಿತು.
759 ಕೆ.ಜಿ. ತೂಕವಿರುವ ಚಿನ್ನದ ಅಂಬಾರಿಯನ್ನು ಇದೇ ಮೊದಲ ಬಾರಿಗೆ ಹೊರಲಿರುವ ಅಭಿಮನ್ಯುವಿಗೆ ಮರಳಿನ ಮೂಟೆ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು. ನಾಲ್ಕು ದಿನಗಳ ಹಿಂದೆ ಮೈಸೂರು ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಕುಶಾಲು ತೋಪು ಸಿಡಿಸುವ ತಾಲೀಮು ನಡೆಸಲಾಗಿತ್ತು. ದಸರಾ ವೇಳೆ ಕುಶಾಲತೋಪುಗಳನ್ನು ಸಿಡಿಸುವಾಗ ಆನೆಗಳು ಹೆದರಿ, ಓಡದಿರಲಿ ಎಂಬ ಉದ್ದೇಶದಿಂದ ಈ ತಾಲೀಮು ನಡೆಸಲಾಗುತ್ತದೆ.
ಇದನ್ನೂ ಓದಿ: ವಠಾರ ಶಾಲೆಗೂ ವಕ್ಕರಿಸಿದ ಕೊರೋನಾ; ಶಾಲೆ ಪುನರಾರಂಭಿಸಲು ಮುಂದಾದ ಸರ್ಕಾರಕ್ಕೆ ಆರಂಭಿಕ ವಿಘ್ನ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. 2020ರ ನಾಡಹಬ್ಬ ದಸರಾ ಸಿಂಪಲ್ ಆಗಿ ಆಚರಿಸುತ್ತಿದ್ದರೂ ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲಾಗಿದೆ. ಸರಳ ದಸರಾ ಮಾಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, 15 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಳೆದ ವರ್ಷವೂ 15 ಕೋಟಿ ರೂ. ಬಿಡುಗಡೆ ಮಾಡಿದ್ದ ರಾಜ್ಯ ಸರ್ಕಾರ ಈ ವರ್ಷದ ಸರಳ ದಸರಾಗೂ 15 ಕೋಟಿ ರೂ. ಬಿಡುಗಡೆ ಮಾಡಿರುವುದು ಟೀಕೆಗೆ ಕಾರಣವಾಗಿದೆ.
Published by:
Sushma Chakre
First published:
October 9, 2020, 9:18 AM IST