ಮೈಸೂರು(ಸೆ.07): ಒಂದು ವೇಳೆ ಕೊರೋನಾ ಎಂಬ ಮಹಾಮಾರಿ ಈ ಜಗತ್ತಿಗೆ ಕಾಲಿಟ್ಟಿರದಿದ್ದರೆ ಇಷ್ಟೊತ್ತಿಗೆ ಸಾಂಸ್ಕೃತಿಕ ನಗರಿ ಮೈಸೂರು ದಸರಾ ಸಂಭ್ರಮದಲ್ಲಿ ಮುಳುಗಿರುತ್ತಿತ್ತು. ಗಜಪಡೆ ಇಷ್ಟೊತ್ತಿಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿ, ರಾಜಬೀದಿಯಲ್ಲಿ ಗಾಂಭೀರ್ಯದಿಂದ ತಾಲೀಮು ನಡೆಸುತ್ತಿದ್ದವು. ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಹ ದಸರಾ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ ಕೊರೋನಾ ಕಾರಣದಿಂದಾಗಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಚಟುವಟಿಕೆಗಳು ಕಳೆಗುಂದಿವೆ. ಇನ್ನೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ. ಈ ಬಾರಿಯ ದಸರೆಯಲ್ಲಿ ಜಂಬೂ ಸವಾರಿ ಇರಲಿದೆಯಾ ಎಂಬ ಬಗ್ಗೆ ನಾಳೆ ಅಂತಿಮ ತೀರ್ಮಾನವಾಗಲಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ದಸರಾ ಹೈಪವರ್ ಮೀಟಿಂಗ್ ನಡೆಯಲಿದೆ. ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಾಳೆ ನಡೆಯುವ ಸಭೆಯಲ್ಲಿ ದಸರಾ ಆಚರಣೆಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.
ಈ ಬಾರಿಯ ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಇರಲಿದೆಯಾ? ಇದ್ದರೂ ಸಹ ಕೇವಲ ಅರಮನೆಗೆ ಮಾತ್ರ ಸೀಮಿತವಾಗಲಿದೆಯಾ? ಈ ಬಾರಿಯ ದಸರಾ ಉದ್ಘಾಟಕರು ಯಾರು? ಈ ಸಲ ದಸರಾ ಬಜೆಟ್ ಎಷ್ಟು? ಈ ಬಾರಿಯ ದಸರಾ ಮಹೋತ್ಸವದಲ್ಲಿ ಎಷ್ಟು ಆನೆಗಳು ಇರಬೇಕು. ಎಲ್ಲಾ ವಿಚಾರಗಳ ಬಗ್ಗೆಯೂ ನಾಳೆಯೇ ಅಂತಿಮ ತೀರ್ಮಾನವಾಗಲಿದೆ. ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೊರೋನಾ ನಡುವೆ ನಾಡಹಬ್ಬ ದಸರಾ ಆಚರಣೆ ಮಾಡಬೇಕಾ? ಇಲ್ಲವೇ? ಎಂಬುದು ನಾಳೆ ನಿರ್ಧಾರವಾಗಲಿದೆ.
Gadag: ಗದಗದಲ್ಲಿ ಪ್ರಾಣಿಗಳಂತೆ ಗಿಡ-ಮರಗಳನ್ನು ದತ್ತು ಪಡೆಯುವ ಯೋಜನೆ
ಇನ್ನು, ಮೈಸೂರು ದಸರಾದ ಕೇಂದ್ರ ಆಕರ್ಷಣೆಯ ಬಿಂದು ಎಂದರೆ ಅದು ಜಂಬೂ ಸವಾರಿ. ಜಂಬೂ ಸವಾರಿಯೇ ದಸರಾ ಮಹೋತ್ಸವದ ಕಳಶ. ಪ್ರತಿ ವರ್ಷ ಈ ಜಂಬೂ ಸವಾರಿ ನೋಡಲೆಂದೇ ದೇಶ-ವಿದೇಶ ಸೇರಿದಂತೆ, ರಾಜ್ಯದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಲಕ್ಷಾಂತರ ಮಂದಿ ಜಂಬೂ ಸವಾರಿಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈವರೆಗೆ ಅರ್ಜುನ ಆನೆ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಿತ್ತು. ಇದನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆದರೆ ಈ ಬಾರಿಯ ದಸರೆಯಲ್ಲಿ ಈ ಭಾಗ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ