ಮೈಸೂರು(ಆ.27): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಾಕ್ಷಿ ಸಂಗ್ರಹಿಸುತ್ತಿರುವ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳನ್ನೂ ತನಿಖೆ ಮಾಡುತ್ತಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲು ಇಂದು ಡಿಜಿಪಿ ಪ್ರವೀಣ್ ಸೂದ್ ಅವರು ಕೂಡ ಮೈಸೂರಿಗೆ ತೆರಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪೊಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಅವರು ಎಲ್ಲಾ ಮಾಹಿತಿಯೊಂದಿಗೆ ಮುಂದುವರೆಯುತ್ತಿದ್ದಾರೆ. ಯಾವ ಹಂತದಲ್ಲಿ ಇದೆ ಅಂತಾ ಅವರು ಇನ್ನೂ ಹೇಳಿಲ್ಲ. ಆದರೆ ತನಿಖೆ ಕುರಿತ ವರದಿಯನ್ನು ಖುದ್ದು ನನಗೆ ಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಪ್ರಕರಣ ಭೇದಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿಜಿಪಿ ಪ್ರವೀಣ್ ಸೂದ್ ಕೂಡ ಇಂದು ಮೈಸೂರಿಗೆ ಹೋಗ್ತಿದ್ದಾರೆ ಎಂದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಇಂದು ಮೈಸೂರಿಗೆ ಭೇಟಿ ನೀಡುವುದಾಗಿ ಹೇಳಿದ್ಧಾರೆ. ನಿನ್ನೆ ಕಾಂಗ್ರೆಸ್ ಹಾಲಪ್ಪ ಆಚಾರ್ ನಾಪತ್ತೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿತ್ತು. ವಿರೋಧ ಪಕ್ಷದ ನಾಯಕರ ಟೀಕೆ ಬೆನ್ನೆಲ್ಲೆ ಎಚ್ಚೆತ್ತ ಸಚಿವ, ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಮೈಸೂರು ಪ್ರಕರಣ ಕುರಿತು ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇವತ್ತು ಮೈಸೂರಿಗೆ ಹೋಗುತ್ತಿದ್ದೇನೆ. ಹಿರಿಯ ಅಧಿಕಾರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚೆ ಮಾಡ್ತೇನೆ. ಅತ್ಯಾಚಾರ ಪ್ರಕರಣ ಬಗ್ಗೆ ನಮ್ಮ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Gold Price Today: ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ..!
ಸಾಂಸ್ಕೃತಿಕ ನಗರದಲ್ಲಿ ನಿರೀಕ್ಷೆ ಮಾಡದ ಘಟನೆ ನಡೆದಿದೆ. ನಾವೆಲ್ಲರೂ ಆ ಘಟನೆಯ ಸಂತ್ರಸ್ಥೆಗೆ ಸಾಂತ್ವನ ಹೇಳಬೇಕಿದೆ. ಆ ಯುವತಿಗೆ ನ್ಯಾಯ ಕೊಡಿಸಬೇಕಿದೆ. ಅಪರಾಧಿಗಳಿಗೆ ಕಠಿಣ ಕ್ರಮ ಆಗಬೇಕು. ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ತಿದೆ. ಸಿಎಂ ಪೊಲೀಸ್ ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನ ಕೊಟ್ಟಿದ್ದಾರೆ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಘಟನಾ ಸ್ಥಳಕ್ಕೆ ಭೇಟಿ ಮಾಡಲು ಯಾರಿಗೂ ಅವಕಾಶ ಕೊಡ್ತಿಲ್ಲ. ನಾನು ಇವತ್ತು ಮೈಸೂರಿಗೆ ಹೋಗುತ್ತಿದ್ದೇನೆ. ನಿನ್ನೆಯೇ ನಮ್ಮ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿದ್ದೇನೆ ಎಂದು ಹೇಳಿದರು.
ಹಾಲಪ್ಪ ಆಚಾರ್ ನಾಪತ್ತೆ ಎಂದು ಕಾಂಗ್ರೆಸ್ ಆರೋಪ ಮಾಡಿದ ವಿಚಾರವಾಗಿ, ಅವರು ವಿರೋಧ ಪಕ್ಷದವರು, ಆರೋಪ ಮಾಡ್ತಾರೆ. ನಾನೆಲ್ಲೂ ಹೋಗಿಲ್ಲ. ಘಟನೆ ಆದಾಗ ನಾವು ಎಲ್ಲೋ ಇರ್ತಿವಿ. ತಕ್ಷಣ ನಾವು ಹೋಗೋದಕ್ಕೆ ಆಗಲ್ಲ. ಅದಕ್ಕಾಗಿ ಅಧಿಕಾರಿಗಳಿಗೆ ಹೇಳಿ, ಸ್ಥಳಕ್ಕೆ ಕಳುಹಿಸ್ತೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯವಿರುವ ಕ್ರಮಗಳನ್ನ ತೆಗೆದುಕೊಳ್ಳುವಂತೆ ಹೇಳಿರುತ್ತೇವೆ ಎಂದು ತಿರುಗೇಟು ನೀಡಿದರು.
ಇನ್ನು ಘಟನೆ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಿಸಿಟಿವಿ, ಟವರ್ ಲೊಕೇಷನ್ ಮೂಲಕ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ಇವತ್ತು ಅಥವಾ ನಾಳೆಯೊಳಗೆ ಆರೋಪಿಗಳ ಪತ್ತೆ ಬಗ್ಗೆ ತನಿಖಾ ತಂಡದಿಂದ ಗೃಹ ಸಚಿವರಿಗೆ ಮಾಹಿತಿ ನೀಡಲಾಗುತ್ತದೆ. ಒಟ್ಟು ಆರು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ಆರೋಪಿಗಳು ಕೃತ್ಯ ಎಸಗಿ ಬೈಕ್ಗಳಲ್ಲಿ ಎಸ್ಕೇಪ್ ಆಗಿರೋ ಮಾಹಿತಿ ಲಭ್ಯವಾಗಿದೆ. ಪೊಲೀಸರು ಲಲಿತಾದ್ರಿ ಬೆಟ್ಟದ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿರುವ ಬಾರ್ ಹಾಗೂ ಹೋಟೆಲ್ನಲ್ಲಿರುವ ಸಿಸಿಟಿವಿ ಡಿವಿಆರ್ ಪಡೆದಿದ್ದಾರೆ. ಎರಡು ಟೀಂ ನಿಂದ ಟೆಕ್ನಿಕಲ್ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ನಡೆದ ಮೂರು ಗಂಟೆಗಳ ಅವಧಿಯಲ್ಲಿ ಸ್ಥಳದ ಟವರ್ ಲೊಕೇಷನ್ನ್ನು ಪೊಲೀಸರು ಡಂಪ್ ಮಾಡಿದ್ದಾರೆ.
ಇದನ್ನೂ ಓದಿ:Karnataka Weather Today: ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದು ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಸದ್ಯ ಯುವತಿ ಹಾಗೂ ಸ್ನೇಹಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ಥೆಯ ಸ್ನೇಹಿತನಿಗೆ ದುಷ್ಕರ್ಮಿಗಳು ಗಂಭೀರ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇಬ್ಬರೂ ಶಾಕ್ ಗೊಳಗಾಗಿ ತನಿಖೆ ವೇಳೆ ಅಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಕತ್ತಲಿನ ವಾತಾವರಣದಲ್ಲಿ ಯಾರೂ ಗುರುತು ಸಿಗಲಿಲ್ಲ. ಮಾಸ್ಕ್ ಹಾಕಿದ್ದರು. ಅತ್ಯಾಚಾರದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂತ್ರಸ್ಥೆಯ ಜೊತೆಗಿದ್ದ ಯುವಕ ಹೇಳಿದ್ದಾನೆ.. ಸ್ನೇಹಿತನ ಜೊತೆಗಿದ್ದ ವಿಡಿಯೋ ಜೊತೆಗೆ ಅವರ ಕೃತ್ಯದ ವಿಡಿಯೋ ಸಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ