ಮೈಸೂರು(ಫೆ.23): ರಾಜ್ಯದ ಮಹಾನಗರ ಪಾಲಿಕೆಗಳಲ್ಲೇ ಪ್ರತಿಷ್ಠಿತ ಪಾಲಿಕೆಯಾದ ಮೈಸೂರು ಮಹಾನಗರ ಪಾಲಿಕೆಗೆ ಇದೀಗ ಮತ್ತೆ ನೂತನ ಮೇಯರ್, ಉಪಮೇಯರ್ ಆಯ್ಕೆಯಾಗಬೇಕಿದೆ. ಈ ಬಾರಿ ಯಾವೊಂದು ಪಕ್ಷದಲ್ಲೂ ಬಹುಮತ ಇಲ್ಲದ ಕಾರಣ ಯಾವುದಾದರೂ ಎರಡು ಪಕ್ಷಗಳು ಹೊಂದಾಣಿಕೆಯಿಂದಲೇ ಪಾಲಿಕೆಯಲ್ಲಿ ಆಡಳಿತ ನಡೆಸಬೇಕಿದೆ. ಆದ್ರೆ ಈ ಬಾರಿ ಪಾಲಿಕೆಯಲ್ಲಿ ಯಾರು ಯಾರ ಜೊತೆ ಮೈತ್ರಿಯಾಗುತ್ತಾರೆ ಎನ್ನುವುದೇ ಕುತೂಹಲಕಾರಿ ವಿಚಾರವಾಗಿದೆ.
ಕಳೆದೊಂದು ವಾರದಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಮೈತ್ರಿ ಕಸರತ್ತು ಮುಂದುವರೆದಿದೆ. ಹಲವು ರಾಜಕೀಯ ಲೆಕ್ಕಾಚಾರದೊಂದಿಗೆ ಒಬ್ಬೊಬ್ಬರು ಮೈತ್ರಿಯ ಪ್ರಸ್ತಾಪ ಮುಂದಿಡುತ್ತಿದ್ದಾರೆ. ಆದ್ರೆ ಎಲ್ಲಾ ಪಕ್ಷಗಳು ಯಾವುದೇ ರಾಜಕೀಯ ತಂತ್ರಗಾರಿಕೆ ಮಾಡಿದರೂ, ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಜೆಡಿಎಸ್ ಸಹಕಾರವಿಲ್ಲದೆ ಯಾರೊಬ್ಬರೂ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲದಂತಾಗಿದೆ. ಆದ್ರೆ ಜೆಡಿಎಸ್ ಮಾತ್ರ ತನ್ನ ನಡೆಯನ್ನು ತಿಳಿಸದೆ ಎಲ್ಲರ ಕುತೂಹಲ ತೆನೆಯೊತ್ತ ಮಹಿಳೆಯತ್ತ ನೋಡುವಂತೆ ಮಾಡಿದೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ವಿಚಾರವಾಗಿ, ಇಂದು ಮೈಸೂರು ಪಾಲಿಕೆಯಲ್ಲಿ ದೋಸ್ತಿ ನಿರ್ಧಾರವಾಗುವ ಸಾಧ್ಯತೆ ಇದೆ. ಚುನಾವಣೆಗೆ ಇನ್ನೊಂದೆ ದಿನ ಬಾಕಿ ಇರುವುದರಿಂದ (ಫೆ.24) ಜೆಡಿಎಸ್ ನಡೆ ಮೇಲೆ ಈ ಬಾರಿಯ ಪಾಲಿಕೆ ಮೈತ್ರಿ ಭವಿಷ್ಯ ನಿಂತಿದೆ. ಗದ್ದುಗೆ ಹಿಡಿಯಲು ಈ ಬಾರಿ ದಳಪತಿಗಳೆ ಕಿಂಗ್ಮೇಕರ್ ಆಗಿದ್ದು, ಮೂರನೇ ಸ್ಥಾನದಲ್ಲಿದ್ದರೂ ಸಹ ಜೆಡಿಎಸ್ ಪಾತ್ರವೇ ಮಹತ್ವದ್ದಾಗಿದೆ. ತೆನೆಯೊತ್ತ ಮಹಿಳೆಗೆ ಕಮಲ ಕೊಡಲು ಸಜ್ಜಾಗಿರುವ ಬಿಜೆಪಿ ಜೊತೆ ಹೋಗ್ತಾರಾ? ನಮ್ಮನ್ನ ಕೈ ಬಿಡಬೇಡಿ ಎನ್ನುತ್ತಿರುವ ಕಾಂಗ್ರೆಸ್ ಜೊತೆ ಹೋಗ್ತಾರಾ? ಅಥವ ಅವಕಾಶದ ಲಾಭ ಪಡೆದುಕೊಂಡು ಮೇಯರ್ ಸ್ಥಾನವನ್ನ ತಮ್ಮಲ್ಲೆ ಉಳಿಸಿಕೊಳ್ತಾರಾ ಅನ್ನೋ ಕುತೂಹಲ ಮೂಡಿದೆ.
ಜಿಲೆಟಿನ್ ಸ್ಫೋಟ ಪ್ರಕರಣ: ಸರ್ಕಾರದ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?; ಡಿ.ಕೆ.ಶಿವಕುಮಾರ್ ಆಕ್ರೋಶ
ಜೆಡಿಎಸ್ ಸಹಕಾರವಿಲ್ಲದೆ ಯಾವ ಪಕ್ಷವು ಮೇಯರ್ ಸ್ಥಾನಕ್ಕೇರಲು ಸಾಧ್ಯವೇ ಇಲ್ಲ, ಪಾಲಿಕೆಯಲ್ಲಿರುವ 65 ಸಂಖ್ಯಾಬಲದಲ್ಲಿ, 22 ಸ್ಥಾನ ಬಿಜೆಪಿ, 19 ಸ್ಥಾನ ಕಾಂಗ್ರೆಸ್, 18 ಸ್ಥಾನ ಜೆಡಿಎಸ್ ಇದ್ದರೂ 4 ಪಕ್ಷೇತರರು, 1 ಬಿಎಸ್ಪಿ ಸಹ ಇಲ್ಲಿ ಬಹು ಮುಖ್ಯಪಾತ್ರ ವಹಿಸಲಿದೆ. ಫೆ.24 ರಂದು ನಡೆಯಲಿರುವ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮೂರು ಸ್ಪಷ್ಟ ಬಹುಮತ ಇಲ್ಲದ ಕಾರಣ ಮೈತ್ರಿಯಾಗಿಯೇ ಅಧಿಕಾರ ನಡೆಸಬೇಕಿರುವ ಪಾಲಿಕೆ ಸದಸ್ಯರು, ಮೇಯರ್ಗಿರಿಗಾಗಿ ಟವಲ್ ಹಾಕಿ ರಾಜಕೀಯ ಆರಂಭಿಸಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಉಳಿಸಿಕೊಳ್ಳಲು ಕೈ ನಾಯಕರ ಕಸರತ್ತು ಮಾಡುತ್ತಿದ್ದರೆ, ನಮಗೂ ಸಿಂಪಥಿ ತೋರಿ ಮೇಯರ್ ಸ್ಥಾನ ಕೊಡಿ ಎನ್ನುತ್ತಿರುವ ಬಿಜೆಪಿ ನಾಯಕರು ಜೆಡಿಎಸ್ ಬೆನ್ನು ಬಿದ್ದಿದ್ದಾರೆ. ಅವಕಾಶದ ಲಾಭ ಬಳಸಿಕೊಂಡು ಮೇಯರ್ ಸ್ಥಾನ ನಮ್ಮಲ್ಲೇ ಉಳಿಸಿಕೊಳ್ಳೋಣ ಎನ್ನುತ್ತಿರುವ ಜೆಡಿಎಸ್ ಪಾಲಿಕೆ ಸದಸ್ಯರ ನಡೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್-ಬಿಜೆಪಿ ಮೈತ್ರಿಗೆ ಸಾ.ರಾ.ಮಹೇಶ್ ಬಿಎಸ್ವೈ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಾ.ರಾ.ಮಹೇಶ್ ತನ್ವೀರ್ ಸೇಠ್ ಮಾತುಕತೆ ನಡೆಸಿ ಆಗಿದೆ. ಇತ್ತ ಸಿದ್ದರಾಮಯ್ಯ ಸಹ ಮೈತ್ರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಆದ್ರೆ ಇನ್ನು ಯಾರೊಂದಿಗೂ ಮಾತುಕತೆ ಫೈನಲ್ ಮಾಡದ ಜೆಡಿಎಸ್ ವರಿಷ್ಠರು, ಇಂದು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಪಾಲಿಕೆ ಚುನಾವಣೆ ಸಭೆಗಾಗಿ ಮೈಸೂರಿಗೆ ಆಗಮಿಸುತ್ತಿರುವ ಕುಮಾರಸ್ವಾಮಿ, ಇಂದು ಸಂಜೆಯೊಳಗೆ ಯಾರ ಜೊತೆ ದೋಸ್ತಿ ಎಂದು ಘೋಷಣೆ ಮಾಡಲಿದ್ದಾರೆ. ಆ ನಿಟ್ಟಿನಲ್ಲಿ ಈ ಬಾರಿ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿರೋದಂತು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ