news18-kannada Updated:July 24, 2020, 2:41 PM IST
H Vishwanath
ಬೆಂಗಳೂರು (ಜುಲೈ 24); ವಿರೋಧ ಪಕ್ಷದವರು ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಿರಿ. ಅದಕ್ಕೂ ನನಗೂ ಸಂಬಂಧ ಇಲ್ಲ. ಆದರೆ, ವಿಧಾನ ಪರಿಷತ್ಗೆ ನನ್ನ ನಾಮ ನಿರ್ದೇಶನ ಕಾನೂನುಬದ್ಧವಾಗಿದೆ ಎಂದು ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಬಿಜೆಪಿ ಘಟಕ ಬುಧವಾರ 6 ಜನರನ್ನು ವಿವಿಧ ಕ್ಷೇತ್ರಗಳಿಂದ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಿತ್ತು. ಈ ಪೈಕಿ ಸಾಹಿತಿ ಕೋಟಾದ ಅಡಿಯಲ್ಲಿ ಹೆಚ್. ವಿಶ್ವನಾಥ್ ಹಾಗೂ ಸಿನಿಮಾ ಕೋಟಾದ ಅಡಿಯಲ್ಲಿ ಸಿ.ಪಿ. ಯೋಗೇಶ್ವರ್ ಅವರನ್ನು ನಾಮ ನಿರ್ದೇಶನ ಮಾಡಿತ್ತು. ಆದರೆ, ಈ ಇಬ್ಬರ ನಾಮ ನಿರ್ದೇಶನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ವಿಶ್ವನಾಥ್ ಸಾಹಿತಿ ಹೇಗಾದರು? ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದರು.
ಈ ಕುರಿತು ಇಂದು ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿರುವ ಹೆಚ್. ವಿಶ್ವನಾಥ್, " ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ಆದರೆ, ನನ್ನ ನಾಮ ನಿರ್ದೇಶನದ ಕುರಿತು ತೀರ್ಪು ಓದದೆ ಕೆಲವು ಕಾನೂನು ತಜ್ಞರು ಮಾತನಾಡಿದ್ದಾರೆ. ನನ್ನ ನಾಮ ನಿರ್ದೇಶನ ಕಾನೂನು ಬದ್ದವಾಗಿದೆ. ಅವರು ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ. ಇದಕ್ಕೂ ನನಗೂ ಸಂಬಂಧ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ನೋಡಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.
"ಎಸ್.ಎಲ್.ಬೈರಪ್ಪ ದೊಡ್ಡ ಸಾಹಿತಿಯೇ. ಅವರಿಗೆ ಸರಸ್ವತಿ ಸಮ್ಮಾನ್ ಸಿಕ್ಕಿದೆ. ಸಾರಸ್ವತ ಲೋಕ ತುಂಬಿದ್ದಾರೆ. ಅಂದಹಾಗೆ, ನಾನೂ ಸಹ ಸಾಹಿತಿಯೇ. ರಾಜಕಾರಣಕ್ಕೆ ಸಂಬಂಧಿಸಿದಂತೆ 8 ಪುಸ್ತಕಗಳನ್ನು ಬರೆದಿದ್ದೇನೆ. ರಾಜತಾಂತ್ರಿಕ ವಿಷಯಗಳನ್ನು ಒಳಗೊಂಡಂತೆ ರಾಜಕಾರಣದ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಹೀಗಾಗಿ ಸಾಹಿತ್ಯ ಕೋಟ ಅಡಿ ನನಗೆ ಈ ಸ್ಥಾನ ಸಿಕ್ಕಿದೆ. ಏನೂ ತಿಳಿಯದೆ ನನ್ನನ್ನು ಆಯ್ಕೆ ಮಾಡಕ್ಕೆ ಎಜಿ ದಡ್ಡರೇ? ಸರಕಾರಕ್ಕೆ ತಿಳಿಯುವುದಿಲ್ಲವೇ?" ಎಂದು ವಿಶ್ವನಾಥ್ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಕರ್ನಾಟಕ ವಿಧಾನ ಪರಿಷತ್ಗೆ ಎಚ್. ವಿಶ್ವನಾಥ್, ಸಿ.ಪಿ ಯೋಗೇಶ್ವರ್ ನಾಮನಿರ್ದೇಶನ
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಿರುದ್ಧವೂ ಕಟುವಾಗಿ ಕಿಡಿಕಾರಿರುವ ಅವರು, "ಸಾ.ರಾ.ಮಹೇಶ್ ನಂಥ ತಿಪ್ಪೆ ಗುಂಡಿಗೆ ಕಲ್ಲು ಎಸೆದು ನನ್ನ ಬಿಳಿ ಬಟ್ಟೆಯನ್ನು ಕೊಳೆ ಮಾಡಿಕೊಳ್ಳುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
Published by:
MAshok Kumar
First published:
July 24, 2020, 2:11 PM IST