ಚಿಕ್ಕಮಗಳೂರು (ಫೆ.23): ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಕವಿತಾ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧ ಉಳಿಸಿಕೊಳ್ಳಲು ದಂತವೈದ್ಯ ಪತ್ನಿಯ ಪ್ರಾಣವನ್ನೇ ತೆಗೆದಿರುವ ವಿಚಾರ ಬೆಳಕಿಗೆ ಬಂದಿದೆ. ಈಗ, ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಫೆ.17ರಂದು ದಂತ ವೈದ್ಯ ಡಾ. ರೇವಂತ್ ಪತ್ನಿ ಕವಿತಾ ಬರ್ಬರವಾಗಿ ಹತ್ಯೆಯಾಗಿದ್ದಳು. ಈ ಕೊಲೆಯನ್ನು ಪತಿಯೇ ಮಾಡಿದ್ದ! ಕೊಲೆ ಮಾಡಿದ್ದು ಯಾರು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ‘ಚಿನ್ನಾಭರಣ ದೋಚಿ, ಪತ್ನಿಯನ್ನು ಕೊಲೆಗೈದಿದ್ದಾರೆ’ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಅಷ್ಟೇ ಅಲ್ಲ ಮೊಸಳೆ ಕಣ್ಣೀರು ಹಾಕಿದ್ದ. ಈ ಮೂಲಕ ಪೊಲೀಸರ ದಿಕ್ಕುತಪ್ಪಿಸಲು ಪ್ರಯತ್ನ ನಡೆಸಿದ್ದ.
ಆದರೆ, ಈಗ ಪೊಲೀಸರು ಅಸಲಿ ವಿಚಾರ ಭೇದಿಸಿದ್ದಾರೆ. ಕೊಲೆ ಮಾಡಿದ್ದು ರೇವಂತ್ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡುವ ಮೊದಲು ಕವಿತಾಳಿಗೆ ರೇವಂತ್ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ಚುಚ್ಚಿದ್ದ. ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ. ಈಗ ಪೊಲೀಸರು ಅಸಲಿ ವಿಚಾರ ಭೇದಿಸುತ್ತಿದ್ದಂತೆ ರೈಲಿಗೆ ತಲೆ ನೀಡಿ ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಲಾರಿ ಡಿಕ್ಕಿ: ಚಾಲಕ ಸಾವು
ಕೊಲೆಗೆ ಕಾರಣವೇನು?:
ರೇವಂತ್ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಉಳಿಸಿಕೊಳ್ಳಲು ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಕವಿತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಅನೇಕ ಬಾರಿ ವಾಗ್ವಾದ ಕೂಡ ಏರ್ಪಟ್ಟಿತ್ತು. ಪತ್ನಿ ಆಕ್ಷೇಪ ಹಿನ್ನೆಲೆಯಲ್ಲಿ ಕವಿತಾರನ್ನು ಕತ್ತು ಸೀಳಿ ಈತ ಕೊಲೆ ಮಾಡಿದ್ದಾನೆ. ಈಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ