ಬೆಂಗಳೂರು: ಆಮ್ ಆದ್ಮಿ ಪಕ್ಷದ ಮುಖಂಡ, (Aam Aadmi) ಹಿರಿಯ ನಟ ಮುಖ್ಯಮಂತ್ರಿ ಚಂದ್ರು (Mukhyamantri Chandru) ಅವರು ವಿಕಲಚೇತನರ (Apology) ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ತನ್ನ ಭಾಷಣದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ವಿಶೇಷಚೇತನ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು, ಇದೀಗ ತನ್ನ ಹೇಳಿಕೆಗೆ ಸಂಬಂಧಿಸಿದಂತೆ ವಿಶೇಷಚೇತನರ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ‘ನಾನು ಕೂಡ ಅಂಗವಿಕಲ’ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಫೆಬ್ರವರಿ 1ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ನಾನು ಮಾಡಿದ ಭಾಷಣ ಉದ್ದೇಶವು ಜನರು ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು ಹಾಗೂ ಈ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಬೇಕು ಎಂಬುದಾಗಿತ್ತು. ಆದರೆ ಯಾರನ್ನೂ ಕೂಡ ನಿಂದನೆ ಮಾಡುವ ಉದ್ದೇಶ ನನಗಿರಲಿಲ್ಲ. ಸ್ವತಃ ನನನಗೆ ದೃಷ್ಟಿದೋಷವಿದೆ. ಒಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mukhyamantri Chandru: ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರು! ಬಂಧನಕ್ಕೆ ಆಗ್ರಹ
'ನನಗೂ ದೃಷ್ಟಿದೋಷ ಇದೆ'
ತನಗೆ ದೃಷ್ಟಿದೋಷ ಇರುವ ಬಗ್ಗೆಯೂ ಉಲ್ಲೇಖ ಮಾಡಿದ ಮುಖ್ಯಮಂತ್ರಿ ಚಂದ್ರು ಅವರು, ಮೂರು ದಶಕಗಳ ಹಿಂದೆ ಶೂಟಿಂಗ್ ಸಮಯದಲ್ಲಿ, ನನ್ನ ಕಣ್ಣಿನ ಬಲ ರೆಟಿನಾಗೆ ಸರಿ ಪಡಿಸಲಾಗದ ರೀತಿ ಹಾನಿ ಉಂಟಾಗಿತ್ತು. ಅದು ನನ್ನನ್ನು ಬಲಗಣ್ಣಿನ ಕುರುಡನನ್ನಾಗಿ ಮಾಡಿದೆ ಎಂದು ಅನೇಕರಿಗೆ ತಿಳಿದಿಲ್ಲ. ಅಂಗವಿಕಲರ ಕಾಯ್ದೆಯಡಿ ನಾನೇ ವಿಕಲಚೇತನ. ಈ ವಿಷಯದಲ್ಲಿ ನಾನು ಸಮುದಾಯವನ್ನು ಅವಹೇಳನ ಮಾಡುವ ಹೇಳಿಕೆಗಳನ್ನು ಕೊಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ, ಯಾರೊಬ್ಬರ ಭಾವನೆಗಳನ್ನು ನಾನು ನೋಯಿಸಿದ್ದರೆ, ಖಂಡಿತಾ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?
ಮುಖ್ಯ ಮಂತ್ರಿ ಚಂದ್ರು ಅವರು ಫೆ.1 ರಂದು ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿವಹಿಸಿದ್ದರು. ಈ ವೇಳೆ ತಾನು ವೇದಿಕೆಯಲ್ಲಿ ಭಾಷಣ ಮಾಡತ್ತಿದ್ದ ಸಂದರ್ಭದಲ್ಲಿ ಚುನಾವಣೆಯಲ್ಲಿ ಎಂತಹ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಜನರಿಗೆ ಸಲಹೆ ನೀಡುತ್ತಿದ್ದರು. ಆಗ ಅವರು ‘ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ಕುಂಟನೇ, ಕುರುಡನೇ, ಹೆಳವನೇ, ಹುಚ್ಚನೋ, ಭ್ರಷ್ಟಾಚಾರಿಯೋ, ಕೊಲೆಗಡುಕನೋ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು’ ಎಂದು ಜನರನ್ನು ಉದ್ದೇಶಿಸಿ ಮಾತನಾಡಿದ್ದರು.
ಮುಖ್ಯಮಂತ್ರಿ ಚಂದ್ರು ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಶೇಷ ಚೇತನ ಸಮುದಾಯದ ಬೇಸರಕ್ಕೆ ಕಾರಣವಾಗಿತ್ತು. ಅಲ್ಲದೇ, ನಟ ಮುಖ್ಯಮಂತ್ರಿ ಚಂದ್ರು ಅವರ ಹೇಳಿಕೆ ವಿಶೇಷ ಚೇತನರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ರೀತಿಯಲ್ಲಿದೆ. ಈ ರೀತಿ ವಿಶೇಷಚೇತನರನ್ನು ನಿಂದಿಸಿದ ಕಾರಣಕ್ಕೆ ಅವರನ್ನು ಬಂಧಿಸಬೇಕು ಎಂದು ಮದ್ದೂರಿನ ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘ, ತಹಶೀಲ್ದಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿತ್ತು.
ಅಲ್ಲದೇ ಒಂದು ವರ್ಗಕ್ಕೆ ನೋವುಂಟಾಗುವ ಈ ರೀತಿಯ ಪದಗಳನ್ನು ಬಳಕೆ ಮಾಡುವುದು ಸರಿಯಲ್ಲ. ಅದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ, ಅವರ ಮಾತುಗಳು ವಿಕಲಚೇತನರ ಭಾವನೆಗೆ ನೋವುಂಟು ಮಾಡಿದೆ ಎಂದು ಕೆಲ ವಿಕಲಚೇತನ ಸಂಸ್ಥೆಗಳು ಬೇಸರ ವ್ಯಕ್ತಪಡಿಸಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ