ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಸಚಿವ ಆರ್. ಅಶೋಕ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇದೀಗ ದಿಢೀರ್ ಬೆಳವಣಿಗೆಯಲ್ಲಿ ಆರ್. ಅಶೋಕ್ ಬಳಿಯಿದ್ದ ಖಾತೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಗಿದೆ. ಈ ಬೆಳವಣಿಗೆ ಬಳಿಕ ಸಚಿವ ಆರ್. ಅಶೋಕ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಎಂಟಿಬಿ ನಾಗರಾಜ್ ಅವರನ್ನು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದಕ್ಕೆ ತನ್ನ ಅಭ್ಯಂತರವೇನೂ ಇಲ್ಲ ಎಂದು ಪತ್ರದಲ್ಲಿ ಅಶೋಕ್ ಅವರು ಉಲ್ಲೇಖಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರು ನನ್ನನ್ನು ಭೇಟಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ನಿರ್ವಹಿಸುವುದಾಗಿ ಕೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಸಚಿವರ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಿರುತ್ತೇನೆ. ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಆರ್. ಅಶೋಕ್ ಪತ್ರ ಬರೆದಿದ್ದಾರೆ.
ಬಳಿಕ ಈ ವಿಷಯವಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಕರೆತಂದಿದ್ದೇ ನಾನು. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದರು. ಅವರಿಗೆ ನ್ನ ಬಳಿ ಇದ್ದ ಉಸ್ತುವಾರಿ ಸ್ಥಾನ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೆ. ನನ್ನ ವಿನಂತಿಯಂತೆ ಸಿಎಂ ಆ ಸ್ಥಾನವನ್ನು ಎಂಟಿಬಿ ನಾಗರಾಜ್ ಅವರಿಗೆ ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಇದರಲ್ಲಿ ನನ್ನ ತ್ಯಾಗದ ಪ್ರಶ್ನೆ ಬರುವುದಿಲ್ಲ. ಸಿಎಂ ಅವರು ಬೆಂಗಳೂರು ಉಸ್ತುವಾರಿ ಇದ್ದಾರೆ. ಅವರೇ ಮುಂದುವರಿಯಲಿ ಎಂದು ಹೇಳಿದರು.
ಇದನ್ನು ಓದಿ: ಸಚಿವ ಆರ್ ಅಶೋಕ್ ಬಳಿ ಇದ್ದ ಬೆಂಗಳೂರು ಗ್ರಾಮಾಂತರ ಉಸ್ತುವಾರಿಯನ್ನು ಎಂಟಿಬಿಗೆ ನೀಡಿ ಸಿಎಂ ಆದೇಶ
ದೇಶದಲ್ಲಿ ಎ, ಬಿ, ಸಿ ಕಾಂಗ್ರೆಸ್ ಇದೆ. ಕರ್ನಾಟಕದಲ್ಲಿ ಇದೀಗ ಡಿ ಮತ್ತು ಎಸ್ ಕಾಂಗ್ರೆಸ್ ಆರಂಭ ಆಗಿದೆ. ಸಿಎಂ ಸ್ಥಾನ ಚರ್ಚೆ ಕೂಸು ಹುಟ್ಟು ಮೊದಲೇ ಕುಲಾವಿ ಎಂಬಂತಾಗಿದೆ. ಯಾರ ಕೈ ಮೇಲೆ ಯಾರದ್ದು ಕೆಳಗಡೆ ಎಂದು ನಿರ್ಧಾರ ಆಗುವ ಸಮಯ ಬಂದಿದೆ. ಕಾಂಗ್ರೆಸ್ ಹೈ ಕಮಾಂಡ್ ವೀಕ್ ಆಗಿದೆ. ಆ ಕಾರಣಕ್ಕೆ ಸಿದ್ದರಾಮಯ್ಯ ಮುಂದಿನ ಸಿಎಂ ಹೌದೋ ಅಲ್ಲವೋ ಎಂದು ಹೇಳಲು ಆಗುತ್ತಿಲ್ಲ. ಹಲವು ಶಾಸಕರು ಸಿದ್ದರಾಮಯ್ಯ ಆಗಲಿ ಎನ್ನುತ್ತಿದ್ದಾರೆ. ನಮ್ಮ ಪಕ್ಷದಿಂದ ಮುಂದೆ ಯಾರು ಮುಂದಿನ ಸಿಎಂ ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ