ವಿಜಯಪುರ: ವಿಧಾನಸಭಾ ಚುನಾವಣೆ ಸಮಯದಲ್ಲಿ (Karnataka Assembly Elections) ಬಿಜೆಪಿ ಹಿರಿಯ ನಾಯಕರಾಗಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ (MP Ramesh Jigajinagi) ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ರಮೇಶ್ ಜಿಗಜಿಣಗಿ, ಬಿಜೆಪಿ ನಾಯಕರಿಗೆ (BJP Leaders) ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ ಸಂಸದರು, ಬೊಮ್ಮಾಯಿ ಸರ್ಕಾರದ (Bommai Government) ಬಗ್ಗೆ ಅಸಮಾಧಾನ ಹೊರ ಹಾಕಿದರು. ನಾವು ಜನತಾ ಪರಿವಾರ ಬಿಟ್ಟು ಬಿಜೆಪಿಗೆ ಬಂದಿದಕ್ಕೆ ನಿಮಗೆ ಸಿಕ್ಕಿದೆ. 2004ರಲ್ಲಿ ರಾಮಕೃಷ್ಣ ಹೆಗಡೆ (Ramakrishna Hegde) ನಿಧನ ನಂತರ ನಾನು ಮೊಟ್ಟ ಮೊದಲ ಬಿಜೆಪಿಗೆ ಸೇರ್ಪಡೆಯಾದ ವ್ಯಕ್ತಿ. ಆಗ ಇಡೀ ರಾಜ್ಯದ ದಲಿತ ಜನ ನನ್ನನ್ನು ತೆಗಳಿದರು.ಯಾಕೆ ಬಿಜೆಪಿಗೆ (BJP) ಹೋಗ್ತೀರಿ ಅದು ಜಾತಿವಾದಿ ಪಕ್ಷ, ಅಂತಹದ್ದು ಇಂತಹದ್ದು ಎಂದು ಬೈದರು. ನನ್ನ ಸಮಾಜದ ತೆಗಳಿಕೆ ಮೀರಿ ಬಿಜೆಪಿಗೆ ಸೇರ್ಪಡೆಯಾದೆ ಎಂದರು.
ಅಲ್ಲಿವರೆಗೆ ಒಬ್ಬರಾದರೂ ಬಿಜೆಪಿಗೆ ಸೇರ್ಪಡೆ ಆಗಿದ್ರಾ? ದಲಿತರಷ್ಟೇ ಅಲ್ಲ ಯಾವ ಲಿಂಗಾಯತರು ಬಿಜೆಪಿಗೆ ಸೇರ್ಪಡೆ ಆಗಿರಲಿಲ್ಲ. ಇದೆಲ್ಲ ಮೀರಿ ಬಿಜೆಪಿಗೆ ಸೇರ್ಪಡೆಯಾಗಿದ್ದು ನನ್ನ ದೊಡ್ಡ ಕೊಡುಗೆ ಅಲ್ವಾ ಎಂದು ಪ್ರಶ್ನೆ ಮಾಡಿದರು.
ಸರ್ಕಾರದ ಕಾರ್ಯವೈಖರಿಗೆ ಬೇಸರ
ಒಂದು ವೇಳೆ ನಾನು ದೇವೇಗೌಡರ ಪಕ್ಷ ಸೇರ್ಪಡೆ ಆಗಿದ್ದರೆ ಇಂದು ಬಿಜೆಪಿ ಅಧಿಕಾರ ಪಡೆಯುತ್ತಿತ್ತಾ? ಇಂದು ಪಕ್ಷದಲ್ಲಿ, ಸರ್ಕಾರದಲ್ಲಿ ಸರಿಯಾಗಿ ನಿರ್ಧಾರ ಕೈಗೊಳ್ಳದ ಕಾರಣ ದೂರವಿದ್ದೇನೆ ಎಂದು ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಸೋಲಿನ ಭೀತಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿದಾಗೊಮ್ಮೆ ರಾಜ್ಯ ಕಾಂಗ್ರೆಸ್ ನಾಯಕರು ಆತಂಕಕ್ಕೆ ಒಳಗಾಗುವುದು ನೋಡಿದರೆ ಈಗಲೇ ಕಾಂಗ್ರೆಸ್ಗೆ ಸೋಲಿನ ಭೀತಿ ಶುರುವಾಗಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಹೇಳಿದೆ.
ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು ಏನು ಅನ್ನುವುದು ರಾಜ್ಯದ ಜನತೆಯ ಕಣ್ಣ ಮುಂದಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯದ ಜನತೆ ತೀರ್ಮಾನಿಸಿದ್ದು, ಬಿಜೆಪಿ ಪರ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿದೆ.
ಸಿದ್ದರಾಮಯ್ಯನವರೇ ಕ್ಷೇತ್ರ ಹುಡುಕಿಕೊಳ್ಳಿ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನು ಅಂತ ಈಗಾಗಲೇ ಚುನಾವಣೆಗೆ ಕ್ಷೇತ್ರ ಹುಡುಕಲು ಪರದಾಡುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಮೊದಲು ಚುನಾವಣೆಗೆ ಕ್ಷೇತ್ರ ಹುಡುಕಿಕೊಳ್ಳಿ ನಂತರ ಅಧಿಕಾರದ ಆಸೆ ಬೆಳೆಸಿಕೊಳ್ಳಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
ಮೋದಿ ನಾವು ಮಾಡಿದ ಕೆಲಸವನ್ನೇ ಯಾವಾಗಲು ಉದ್ಘಾಟನೆ ಮಾಡುತ್ತಾರೆ. ಎಚ್ಎಎಲ್ ಯುಪಿಎ ಸರ್ಕಾರದಲ್ಲಿ ಮಾಡಿರುವುದಾಗಿದೆ. ಲಂಬಾಣಿ ಜನರನ್ನು ಕಂದಾಯ ಗ್ರಾಮ ಮಾಡಿರೋದು ನಾವು, ಕಾನೂನು ಮಾಡಿರುವುದು, ನಾವು ಹಕ್ಕು ಪತ್ರ ಹಂಚಿಕೆ ಮಾಡಲು ಬಿಜೆಪಿಯವರು ಮೋದಿಯನ್ನ ಕರೆದುಕೊಂಡು ಬಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ
ನಾವು ಅಡುಗೆ ಮಾಡ್ತೀವಿ, ಮೋದಿ ಬಂದು ಬಡಿಸ್ತಾರೆ. ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ, ಏನು ಕೆಲಸ ಮಾಡಿಲ್ಲವಲ್ಲ. ಏಕೆಂದರೆ ಇದು ಜನ ವಿರೋಧಿ ಸರ್ಕಾರ 40% ಸರ್ಕಾರ. ಪ್ರಧಾನಿ ಮೋದಿ ಬಂದರೆ ವೋಟ್ ಬರುತ್ತೆ ಅಂತ ಬಿಜೆಪಿ ಅಂದುಕೊಂಡಿದೆ. ಆದರೆ ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ. ಬಿಜೆಪಿಯನ್ನು ಸೋಲಿಸಬೇಕು, ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಅಂತ ನಿರ್ಧಾರ ಮಾಡಿದ್ದಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ