news18-kannada Updated:January 15, 2021, 5:01 PM IST
ಸಂಸದ ರಮೇಶ ಜಿಗಜಿಣಗಿ
ವಿಜಯಪುರ (ಜ. 15): ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ನಮ್ಮ ಜೊತೆ ದಕ್ಕುವುದಿಲ್ಲ ಎಂದು ಬಿ ಎಸ್ ವೈ ಗೆ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದಾಗ ಹೇಳಿದ್ದೆ. ಆದರೆ ಅವರು ಕೇಳಲಿಲ್ಲ. ಈಗ ಅನುಭವಿಸುತ್ತಿದ್ದಾರೆ ಎಂದು ವಿಜಯಪುರ ಬಿಜೆಪಿ ಸಂಸದ ಮತ್ತು ಕೇಂದ್ರ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರು ಯತ್ನಾಳ ಅವರ ಹೆಸರು ಹೇಳದೆ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಯಿಗೆ ಹಂಗಿಲ್ಲದಂತೆ ಮಾತನಾಡಬಾರದು. ಇವರು ಯಾಕೆ ಈ ರೀತಿ ಮಾತನಾಡುತ್ತಾರೆ ಅರ್ಥವಾಗುತ್ತಿಲ್ಲ. ಮಂತ್ರಿಯಾಗಲಿಲ್ಲ ಎಂಬುದು ಇವರ ಮನಸ್ಸಿನಲ್ಲಿರಬಹುದು. ಅದನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು. ಸಿಡಿ ವಿಚಾರ ಗೊತ್ತಿಲ್ಲ. ಏನೇ ನೋವಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತಬಾಡಬೇಕು. ರಸ್ತೆಯಲ್ಲಿ ಮಾತನಾಡಿದರೆ ತಲೆ ಕೆಟ್ಟಿದೆ ಎಂದು ಮತದಾರರು ಹೇಳುತ್ತಾರೆ. ಇವರಿಗೆ ಮತ ಹಾಕಿದವರು ಈಗ ಬೈಯ್ಯುತ್ತಿದ್ದಾರೆ. ನಾನೂ ಹಿಂದೆ ಕೇಂದ್ರ ಸಚಿವನಾಗಿದ್ದೆ. ಆದರೆ, ಈ ಬಾರಿ ಬೇರೆಯವರಿಗೆ ಅವಕಾಶ ನೀಡಿದರು. ನಾನೇನೂ ರಸ್ತೆಯಲ್ಲಿ ನಾಯಿಯಂತೆ ಬೊಗಳುತ್ತ ತಿರುಗಲಿಲ್ಲ ಎಂದು ಕುಟುಕಿದರು.
ಯಡಿಯೂರಪ್ಪ ಹಿರಿಯರಿದ್ದಾರೆ. ಹಿರಿಯ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಇದೇ ವೇಳೆ ತಿಳಿಸಿದರು
ಒಂದಿಲ್ಲೊಂದು ದಿನ ದಲಿತರು ರಾಜ್ಯದ ಸಿಎಂ ಆಗುತ್ತಾರೆ; ಅದು ಬಸವಣ್ಣನವರ ಕನಸು
ಇದೇ ವೇಳೆ, ದಲಿತ ಸಿಎಂ ವಿಚಾರ ಕುರಿತು ಮಾತನಾಡಿದ ರಮೇಶ ಜಿಗಜಿಣಗಿ, ರಾಜ್ಯದಲ್ಲಿ ಒಂದಿಲ್ಲೊಂದು ದಿನ ದಲಿತರು ಸಿಎಂ ಆಗುತ್ತಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಅದು ಆಗದಿದ್ದರೆ ಬಿಡುವುದಿಲ್ಲ. 70 ವರ್ಷ ಬೇರೆ ಬೇರೆ ಸಮುದಾಯದವರು ಸಿಎಂ ಆಗಿದ್ದಾರೆ. ಶೇ.1, ಶೇ.2 ರಷ್ಟಿರುವ ಸಮುದಾಯದವರು ಸಿಎಂ ಆಗಿದ್ದಾರೆ. ಶೇ. 23 ರಷ್ಟಿರುವ ದಲಿತರು ಸಿಎಂ ಆಗಿಲ್ಲ. ನೀವು ನಿಮ್ಮಲ್ಲಿಯೇ ಎಡ, ಬಲ, ಹಿಂದೆ, ಮುಂದೆ ಸುಡಗಾಡು ಮಾಡಿ ನೀವು ಮಜಾ ಮಾಡುತ್ತಿದ್ದೀರಿ. ಒಂದಿಲ್ಲೋಂದು ದಿನ ಉಳಿದವರಂತೆ ಒಗ್ಗಟ್ಟಾಗಲಿದ್ದಾರೆ. ಆದರೆ, ಕೆಲವರು ಪಕ್ಷದ ವಿಷಯದಲ್ಲಿ ಮಾತಾಡುತ್ತಾರೆ. ಎಲ್ಲ ಸಮುದಾಯದವರಂತೆ ದಲಿತರಿಗೂ ಸ್ಥಾನಮಾನ ಸಿಗಬೇಕು. ಇದು ಬಸವಣ್ಣನವರ ಕನಸಾಗಿತ್ತು. 800 ವರ್ಷಗಳ ಹಿಂದೆಯೇ ಬಸವಣ್ಣನವರು ಈ ಕುರಿತು ಕನಸು ಕಂಡಿದ್ದರು. ಅವರು ಕನಸು ನನಸಾಗುತ್ತದೆ. ರಾಜ್ಯದಲ್ಲಿ ಒಂದಿಲ್ಲ ಒಂದು ದಿನ ದಲಿತ ಸಮುದಾಯದವರು ಸಿಎಂ ಆಗಿಯೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published by:
Seema R
First published:
January 15, 2021, 5:01 PM IST