ಮೈಸೂರು (ಮೇ 30); ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಮುಂದುವರೆದಿದೆ. ಈ ಹಿಂದೆ ಜಿಲ್ಲೆಯಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಡವಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟು ಪ್ರತಾಪ್ ಸಿಂಹ ಜಿಲ್ಲಾಧಿಕಾರಿಯ ವಿರುದ್ಧ ಕಿಡಿಕಾರಿದ್ದರು. ಆದರೆ, ಇಂದು ಸ್ವಿಮ್ಮಿಂಗ್ ಪೂಲ್ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಕಿಡಿಕಾರಿರುವ ಪ್ರತಾಪ್ ಸಿಂಹ, "ನಾವು ಅಧಿಕಾರಿಗಳಿಂದ ಪಾಠ ಕಲಿಯಬೇಕಿಲ್ಲ" ಎಂದು ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಇಂದು ಹುಟ್ಟುಹಬ್ಬ. ಆದರೆ, ಹುಟ್ಟುಹಬ್ಬದ ದಿನದಂದೂ ಸಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿರುವ ಪ್ರತಾಪ್ ಸಿಂಹ, "ಕೊರೋನಾ ವೈರಸ್ ಸಾಂಕ್ರಾಮಿಕ ಬಂದಿರುವ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಬೊಕ್ಕಸ ಬರಿದಾಗಿದೆ, ಜನರಿಗೆ ಕಷ್ಟ ಇದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎನ್ನುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ವೈಯಕ್ತಿಕ ಮೋಜಿಗೋಸ್ಕರ ಸರ್ಕಾರದ 28 ಲಕ್ಷ ರೂಪಾಯಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ಅನ್ನು ಕಟ್ಟಿಸಿಕೊಳ್ಳುವ ಅಗತ್ಯವೇನಿತ್ತು" ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ವೈಯಕ್ತಿಕ ಮೋಜಿ ಗೋಸ್ಕರ ಸರ್ಕಾರದ ಹಣವನ್ನು ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳಿಂದ ಜನಪ್ರತಿನಿಧಿಗಳು ಪಾಠ ಕಲಿಯುವ ಅಗತ್ಯವಿಲ್ಲ. ಕೊರೋನಾ ವೈರಸ್ ನಿರ್ವಹಣೆ ಗೆಂದು ಜಿಲ್ಲಾ ಉಸ್ತುವಾರಿ ಸಚಿವರು 41 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅದರಲ್ಲಿ ಇನ್ನು ಎರಡೇ ಕೋಟಿ ಉಳಿದಿರುವುದು ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ, ಹಾಗಾದರೆ 39 ಕೋಟಿ ರೂಪಾಯಿ ಎಲ್ಲಿಗೆ ಖರ್ಚಾಯಿತು, ಯಾವ ಗುತ್ತಿಗೆಗೆ, ಕೆಲಸಕ್ಕೆ ನೀಡಿದ್ದಾರೆ, ಏನು ಸಾಮಗ್ರಿಗಳನ್ನು ತಂದಿದ್ದಾರೆ, 39 ಕೋಟಿ ರೂಪಾಯಿಗೆ ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಮತ್ತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿದ ಪ್ರತಾಪ್ ಸಿಂಹ
ನಿನ್ನೆ 25 ಲಕ್ಷ ರೂಪಾಯಿ ವೈದ್ಯಕೀಯ ಸೌಲಭ್ಯ ಖರೀದಿಗೆ ದುಡ್ಡಿಲ್ಲ ಎಂದರು, ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಹಾಗಾದರೆ ದುಡ್ಡಿದೆಯೇ, ವೈದ್ಯಕೀಯ ಸೌಲಭ್ಯ ನೀಡಲು ಆ ಕಾಯ್ದೆ, ಈ ಕಾಯ್ದೆ ಅಡ್ಡಿ ಇದೆ ಎನ್ನುತ್ತಾರೆ, ಸ್ಮಿಮ್ಮಿಂಗ್ ಪೂಲ್ ಕಟ್ಟಲು ಕಾಯ್ದೆ, ಕಾನೂನು, ಟೆಂಡರ್ ಮಾಡಿದ್ದಾರೆಯೇ, ನೀವು ಮಾಧ್ಯಮ ಪ್ರತಿನಿಧಿಗಳು ಅವರನ್ನು ಹೋಗಿ ಕೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Covid Vaccine: ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್ಗಳು ಒಂದಾಗಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ; ಕೇಂದ್ರ ಸರ್ಕಾರ
ಸರ್ಕಾರ ಕೋವಿಡ್ ನಿರ್ವಹಣೆಗೆ ಮೈಸೂರು ಜಿಲ್ಲೆಗೆ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮೊದಲು ಇದರ ಲೆಕ್ಕ ಕೊಡಿ. ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಅಂತೀರಾ? ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಟೆಂಡರ್ ಕಾಯ್ದೆ ನೋಡಿದ್ರಾ ? ಪಾರಂಪರಿಕ ನಿಯಮ ಪಾಲಿಸಿದ್ದೀರಾ ? ಮೈಸೂರು ಮಹಾನಗರ ಪಾಲಿಕೆಯಿಂದ ಪರ್ಮಿಷನ್ ಪಡೆದಿದ್ದೀರಾ ? ಇದಾವುದಕ್ಕೂ ನಿಯಮ ಪಾಲಿಸಿಲ್ಲವೆಂದ ಮೇಲೆ, ಔಷಧಿ ಖರೀದಿಗೆ ಟೆಂಡರ್ ಕಾಯ್ದೆ ಬೇಕಾ ಎಂದು ಕೇಳಿದರು. ಅಲ್ಲದೆ 16 ಸ್ಟೆಪ್ ಡೌನ್ ಆಸ್ಪತ್ರೆ ತೆರೆಯಲು ಕಮಿಟಿ ವರಿದಿ ನೀಡಿದೆಯಾ, ಬಡವರಿಗೆ ಔಷಧಿ ಕೊಡಿಸಲು ನಿಮ್ಮ ಬಳಿ ದುಡ್ಡಿಲ್ಲವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ