ಕರ್ನಾಟಕ ರಾಜ್ಯದಲ್ಲಿ ಒಂದಷ್ಟು ದಿನಗಳಿಂದ ಇದ್ದ ಗೊಂದಲ ಕಡಿಮೆಯಾಗಿದೆ. ಈ ಮೂಲಕವಾದರೂ ಒಂದಷ್ಟು ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ ಅಲ್ಲದೇ, ರಾಜ್ಯದ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲ ಇತ್ತು ಅದಕ್ಕೂ ತೆರೆ ಬಿದ್ದಿದೆ ಎಂದು ಜಾತ್ಯಾತೀತ ಜನತಾದಳದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ಜನಸಾಮಾನ್ಯರ ಆಸ್ತಿಪಾಸ್ತಿ ಸಾಕಷ್ಟು ನಷ್ಟವಾಗಿದೆ. ಇಷ್ಟು ದಿನ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಾಜ್ಯದ ಜನರ ಜೊತೆ ಸರಕಾರ ಆಟ ಆಡುತ್ತಿತ್ತು, ಇನ್ನಾದರೂ ಜನರ ನೆರವಿಗೆ ನಿಲ್ಲಲಿದೆ ಎಂದು ಕೊಂಡಿದ್ದೇನೆ ಅಲ್ಲದೇ ಎಲ್ಲಾ ಗೊಂದಲದಿಂದ ಬಿಜೆಪಿಯವರು ಹೊರಬಂದಿದ್ದಾರೆ ಎನಿಸುತ್ತಿದೆ ಇನ್ನಾದರೂ ಸಮಸ್ಯೆಗಳನ್ನು ಬಗೆಹರಿಸಲು ಗಮನ ಕೊಡಲಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಇರುವ ಸಮಸ್ಯೆಗಳನ್ನು ಸರಕಾರ ಎದುರಿಸಬೇಕು. ಪ್ರಸ್ತುತ ಎದುರಾಗಿರುವ ನೆರೆ ಸಂಕಷ್ಟವನ್ನು ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಕಷ್ಟದಲ್ಲಿ ಇರುವ ಜನರನ್ನು ಉಳಿಸುವ ಕೆಲಸ ಮೊದಲು ಮಾಡಬೇಕು ಎಂದು ಹೇಳಿದರು.
ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಾನು ಈ ಮೂಲಕ ಶುಭ ಹಾರೈಸುತ್ತೇನೆ. ಈ ಹಿಂದಿನ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಎರಡು ವರ್ಷಗಳ ಕಾಲ ಕೆಟ್ಟ ಪರಿಸ್ಥಿತಿಗೆ ರಾಜ್ಯ ಹೋಗಿತ್ತು, ಮುಂದಿನ ದಿನಗಳಲ್ಲಿಯಾದರೂ ಒಳಿತನ್ನು ಕಾಣಬಹುದೇ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ದ ಅಸಮಾಧಾನ ಹೊರಹಾಕಿದರು.
ಜನತಾ ಪರಿವಾರದಿಂದ ಬಂದ ನಾಯಕರಾದ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಜನತಾ ಪರಿವಾರದವರು ಎಂದರೆ ರಾಜ್ಯದ ಜನರಿಗೆ ಒಳ್ಳೆಯದನ್ನೇ ಮಾಡಲಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ನುಡಿದರು.
ಜೆಡಿಎಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಮೂಲೆಗುಂಪಾಗುತ್ತಿರುವ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಅವರು ಮುಂದಿನ ದಿನಗಳಲ್ಲಿ ಬಿಜೆಪಿಯ ಕದ ತಟ್ಟಲಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈ ಊಹಾಪೋಹಗಳಿಗೆ ರೆಕ್ಕೆ ನೀಡುವಂತೆ ರೇವಣ್ಣ ಅವರು ಬಿಎಲ್ ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಹರಡಿದ್ದ ವದಂತಿಗೆ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.
ಕೆಲ ಮಾಧ್ಯಮಗಳು ಈ ರೀತಿಯಾಗಿ ವರದಿ ಮಾಡಿವೆ ಅಷ್ಟೇ, ನಮ್ಮ ತಂದೆ ರೇವಣ್ಣ ಅವರು ಬಿ.ಎಲ್ಸಂತೋಷ್ ಅವರನ್ನು ಭೇಟಿಯಾಗಿದ್ದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು, ಅವರು ಎಲ್ಲಿಯೂ ಹೋಗಿಲ್ಲ ದೆಹಲಿಯ ನಮ್ಮ ನಿವಾಸದಲ್ಲಿಯೇ ಉಳಿದುಕೊಂಡಿದ್ದರು. ನನ್ನ ಜೊತೆಯಲ್ಲಿಯೇ ರೇವಣ್ಣನವರು ಇದ್ದರು ಎಂದು ಹೇಳಿದರು.
ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದರೇ ಹೊರತು, ಮತ್ತಿನ್ಯಾವ ಬಿಜೆಪಿ ನಾಯಕರನ್ನು ರೇವಣ್ಣನವರು ಭೇಟಿ ಮಾಡಿಲ್ಲ ಎಂದು ಸ್ಪಷ್ಟಿಕರಣ ನೀಡಿದರು.
ಇದೇ ವೇಳೆ ಮಾಧ್ಯಮದವರು ಎತ್ತಿದ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯ ವಿಚಾರವಾಗಿ ಕರೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಹಾಸನ ಸಂಸದ ಕುಮಾರಣ್ಣ ಸಂಘಟನೆಗೆ ಕರೆ ನೀಡಿರುವುದು ನಿಜ, ನಾವು ಯಾರ ಜೊತೆಯಲ್ಲೂ ಒಪ್ಪಂದ ಮಾಡಿಕೊಂಡಿಲ್ಲ, ಇಂಡಿಪೆಂಡೆಂಟ್ ಆಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ’’ನಾನು ರಬ್ಬರ್ ಸ್ಟಾಂಪ್ ಅಲ್ಲ ಜನರ ಸ್ಟಾಂಪ್’’; ಅಧಿಕಾರಿಗಳ ಸಭೆಯಲ್ಲಿ ನೂತನ ಸಿಎಂ ಯಾರಿಗೆ ಕೊಟ್ಟರು ಈ ಸಂದೇಶ!?
ಕಳೆದ ಹತ್ತು ವರ್ಷದಲ್ಲಿ ಕರ್ನಾಟಕ ರಾಜಕೀಯವನ್ನು ಹಿಂದಕ್ಕೆ ಹೋಗಿ ನೋಡಿದರೆ ಕರ್ನಾಟಕವು ನಾಲ್ಕು ಜನ ಸಿಎಂ ಅವರನ್ನು ಕಂಡಿದೆ, ಈ ನಾಲ್ವರಲ್ಲಿ ಯಡಿಯೂರಪ್ಪ ಅವರನ್ನು ಹೊರತು ಪಡಿಸಿ ಮಿಕ್ಕ ಮೂವರು ಸಹ ಜನತಾ ಪರಿವಾರದ ನಾಯಕರು ಎನ್ನುವುದು ಉಲ್ಲೇಖಾರ್ಹ ವಿಚಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ