ಶಿವಮೊಗ್ಗ(ಮಾ.15): ಮಾರಣಾಂತಿಕ ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನಂತರ ಅವರು ಮಾತನಾಡಿದರು. ಕೊರೋನಾದಿಂದ ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಮಾತ್ರವಲ್ಲ ಆರ್ಥಿಕವಾಗಿ ನಲುಗಿ ಹೋಗಿವೆ. ಕೆಲವು ರಾಷ್ಟ್ರಗಳು ಅನೇಕ ಸವಾಲುಗಳನ್ನು ಎದುರಿಸ ಬೇಕಾಗಿರುವುದು ಬೇಸರದ ಸಂಗತಿ ಎಂದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಸೋಂಕನ್ನು ನಿಯಂತ್ರಿಸುವ ಲಸಿಕೆ ಕಂಡುಹಿಡಿಯಲು ಅವಿರತವಾಗಿ ಶ್ರಮಿಸಿದವು. ವಿಶೇಷವಾಗಿ ನಮ್ಮ ದೇಶದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದ ಔಷಧವನ್ನು ದೇಶದ ಜನತೆಗೆ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಮೊದಲ ಹಂತವಾಗಿ ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಈಗಾಗಲೇ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 14,246 ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದ್ದು ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ಎರಡನೇ ಹಂತವಾಗಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ ವಿವಿಧ ಕಾಯಿಲೆಗಳಿಂದ ಬಾದಿತರಾಗಿರುವ 45 ವರ್ಷ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದ ಅವರು ಈ ಲಸಿಕೆಯು ಜಿಲ್ಲೆಯ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಬ್ಯವಿದ್ದು, ಸ್ಥಳದಲ್ಲಿಯೇ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅನ್ನ, ಆಶ್ರಯ ನೀಡಿದ ಗುರುಗಳ ಪುಣ್ಯಸ್ಮರಣೆಗೆ ಲಕ್ಷಾಂತರ ರೂಪಾಯಿ ಹೂವಿನ ಅಲಂಕಾರ, ಬೆಳ್ಳಿ ಗದ್ದುಗೆ ನೀಡಿದ ವಿದ್ಯಾರ್ಥಿಗಳು..!
ಮುಂದಿನ ಕೆಲವೇ ದಿನಗಳಲ್ಲಿ ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ತಲುಪಿಸಲು ಯತ್ನಿಸಲಾಗುವುದು.ಜಿಲ್ಲೆಯಲ್ಲಿ ಲಸಿಕೆ ವಿತರಿಸುವಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಿದರು.
ಇನ್ನು ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಒಂದಾಗಿರುವ ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಯತ್ನಿಸಲಾಗಿದ್ದು, ಈ ಸಂಬಂಧ ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು ಸಚಿವರು ಪೂರಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದರು.
ವಿಶೇಷವಾಗಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ರಸ್ತೆ ಸುಗಮ ಸಂಚಾರಕ್ಕಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಈಗಾಗಲೇ ಮಂಜೂರಾಗಿ ಮುಕ್ತಾಯ ಹಂತದಲ್ಲಿರುವ ತುಮಕೂರು - ಶಿವಮೊಗ್ಗ, ಚಿತ್ರದುರ್ಗ - ಶಿವಮೊಗ್ಗ ಚತುಷ್ಪಥ ರಸ್ತೆ ಯೋಜನೆಗಳಲ್ಲದೆ ಹೊಸದಾದ 10 ಕ್ಕೂ ಹೆಚ್ಚಿನ ಸಹಸ್ರಾರು ಕೋಟಿ ರೂ.ಗಳ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದರು.
ಚಿತ್ರದುರ್ಗ - ಶಿವಮೊಗ್ಗ (ರಾ.ಹೆ.13) ಬಾಕಿ ಉಳಿದ ರಸ್ತೆ ನಿರ್ಮಾಣ ಕಾಮಗಾರಿಗೆ 516 ಕೋಟಿ, ವಿದ್ಯಾನಗರದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 44 ಕೋಟಿ, ತೀರ್ಥಹಳ್ಳಿ - ಕೊಪ್ಪ - ಶೃಂಗೇರಿ ದ್ವಿಪಥದ ರಸ್ತೆ ನಿರ್ಮಾಣಕ್ಕೆ 96 ಕೋಟಿ, ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ತುಂಗಾ ನದಿಯ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ 20 ಕೋಟಿ, ನಿಟ್ಟೂರು ಮತ್ತು ಹೊಸನಗರ ಭಾಗದ ಶರಾವತಿ ಹಿನ್ನೀರಿನ ಜೊತೆ ಸಂಪರ್ಕವಿರುವ ಶಿಥಿಲಗೊಂಡಿರುವ ಸೇತುವೆಗಳಿಗೆ ಪರ್ಯಾಯವಾಗಿ 7 ಸೇತುವೆಗಳ ನಿರ್ಮಾಣಕ್ಕೆ 20 ಕೋಟಿ, ನಾಗೋಡಿ ಬಳಿಯ ಘಾಟಿ ತಿರುವಿನಲ್ಲಿ ಗೇಬಿಯನ್ ತಡೆಗೋಡೆ ಹಾಗೂ ರಸ್ತೆ ನಿರ್ಮಾಣಕ್ಕೆ 4.22ಕೋಟಿ, ಸಾಗರ ನಗರ ವ್ಯಾಪ್ತಿಯಲ್ಲಿ ಚತುಷ್ಫಥ ರಸ್ತೆ ನಿರ್ಮಾಣಕ್ಕೆ 77.19ಕೋಟಿ, ತೀರ್ಥಹಳ್ಳಿ ಪಟ್ಟಣದಲ್ಲಿ ಧ್ವಿಪಥದ ಬೃಹತ್ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣಕ್ಕೆ 55.62ಕೋಟಿ, ರೂ.ಗಳಿಗೆ ಮಂಜೂರಾತಿ ದೊರೆತಿದೆ ಎಂದರು.
ಸಿಗಂಧೂರು ಬಳಿ ಶರಾವತಿ ಹಿನ್ನೀರಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಕೇಬಲ್ ಅಳವಡಿಸಿ ನಿರ್ಮಾಣ ಮಾಡುವ ವಿನೂತನ ವಿನ್ಯಾಸದ ಆಕರ್ಷಣೀಯ ಸೇತುವೆ ನಿರ್ಮಾಣಕ್ಕಾಗಿ 423.15 ಕೋಟಿ, ಈಗಾಗಲೇ ಸೇತುವೆ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ