ಬೆಂಗಳೂರು (ಜು.25): ದೇಶದಲ್ಲಿ ಮಂಕಿಪಾಕ್ಸ್ (MonkeyPox) ಕಾಯಿಲೆ ಹರಡುತ್ತಿದ್ದು, ಕೇರಳದಲ್ಲಿ ಮಂಕಿಪಾಕ್ಸ್ ಕಾಯಿಲೆ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲೂ (Karnataka) ಟೆನ್ಷನ್ ಶುರುವಾಗಿದೆ. ಹೀಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿಭಾಗ ಜಿಲ್ಲೆಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗಳ ಜಿಲ್ಲಾಧಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ (K Sudhakar) ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿದ್ದೇವೆ. ಮಂಕಿಪಾಕ್ಸ್ ಪ್ರಕರಣ ಕಂಡು ಬಂದರೆ ರೋಗಿಗಳನ್ನು ಪ್ರತ್ಯೇಕಿಸಿ, ಅಗತ್ಯ ಚಿಕಿತ್ಸೆ ನೀಡುವ ಕುರಿತು ಸೂಚಿಸಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (World Health Organization) ಸಹ ಇದನ್ನು ಆರೋಗ್ಯ ತುರ್ತು ಪರಿಸ್ಥಿತಿ (Emergency Situation) ಎಂದು ಘೋಷಣೆ ಮಾಡಿದೆ ಎಂದ್ರು.
ಜನರ ಆತಂಕ ಪಡುವ ಅಗತ್ಯವಿಲ್ಲ- ಸುಧಾಕರ್
ಮಂಕಿಫಾಕ್ಸ ಕೊರೋನಾದಂತೆ ವೇಗವಾಗಿ ಹರಡುವುದಿಲ್ಲ. ಹುಣ್ಣುಗಳಿಂದ ಹಾಗೂ ರೋಗಿಗಳ ಬಳಸಿದ ವಸ್ತುಗಳ ಬಳಕೆಯಿಂದ ಮಂಕಿಪಾಕ್ಸ್ ಹರಡುತ್ತದೆ. ಪ್ರಕರಣ ಕಂಡು ಬಂದ ಕೂಡಲೇ ರೋಗಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿದರೆ ತೊಂದರೆ ಇಲ್ಲ. ಈ ಕಾಯಿಲೆಯಿಂದ ಸಾವು ನೋವು ತೀರಾ ಕಡಿಮೆ ಇದ್ದು, ಜನರ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಶೀಘ್ರವೇ ಉ. ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಆಗಬೇಕಿದೆ. ಆದರೆ ಕಳೆದ 50-60ವರ್ಷದಲ್ಲಿ ಆಗಿರಲಿಲ್ಲ. ಬಿಜೆಪಿ ಕಳೆದ ಎರಡು ವರ್ಷದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮಾಡಿದೆ. ಸರ್ಕಾರಕ್ಕೆ ಹಣಕಾಸಿನ ನಿರ್ಬಂಧ ಇರುತ್ತದೆ.
ಇದನ್ನೂ ಓದಿ: CET Result: ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ- ಅಶ್ವತ್ಥ ನಾರಾಯಣ
ಇನ್ನು ಕೋವಿಡ್ ಬಂದಿದ್ದರಿಂದಲೇ ಆರೋಗ್ಯ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಸಾಧ್ಯವಾಯಿತು. ವೈದ್ಯರ ನೇಮಕಾತಿಯಂತ ಪ್ರಕ್ರಿಯೆ ನಡೆದಿವೆ. ಈ ಹಿಂದಿನಗಿಂತಲೂ ಕಳೆದ ಎರಡು ವರ್ಷದಲ್ಲಿ ಆರೋಗ್ಯ, ವೈದ್ಯಕೀಯ ಸೇವೆ ಉತ್ತಮವಾಗಿದೆ. ಆದಷ್ಟು ಬೇಗ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರಿಸಲಿದ್ದೇವೆ," ಎಂದರು.
75 ದೇಶಗಳಲ್ಲಿ ಮಂಕಿಫಾಕ್ಸ್
ಮಂಕಿಪಾಕ್ಸ್ ಸೋಂಕು 75ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಕಾರಣ, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜಾಗತಿಕವಾಗಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐವರು ಮೃತಪಟ್ಟಿದ್ದಾರೆ. ಹಲವು ರಾಷ್ಟ್ರಗಳಿಗೆ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಇದು ಹರಡುತ್ತಿರುವ ವಿವಿಧ ವಿಧಾನಗಳ ಬಗ್ಗೆ ನಮಗೆ ಗೊತ್ತಿರುವುದು ತೀರಾ ಕಡಿಮೆ. ತುರ್ತು ಸ್ಥಿತಿ ಎಂಬುದಾಗಿ ಘೋಷಿಸಲು ರೂಪಿಸಿರುವ ಅಂತರರಾಷ್ಟ್ರೀಯ ಆರೋಗ್ಯ ಮಾನದಂಡಗಳ ಅನ್ವಯವೇ ಈ ಘೋಷಣೆ ಮಾಡಲಾಗಿದೆ’ ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಹೇಳಿದ್ದಾರೆ.
ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ
ಪುರುಷರ ಜತೆ ಪುರುಷ ಲೈಂಗಿಕ ಕ್ರಿಯೆ ನಡೆಸುವ ಸಮುದಾಯಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ದೇಶಗಳು ನಿಗಾ ವಹಿಸಬೇಕು ಎಂದು ಸೂಚಿಸಿರುವ ಡಬ್ಲ್ಯುಎಚ್ಒ, ಇಂತಹ ಸಮುದಾಯಗಳ ಆರೋಗ್ಯ, ಮಾನವ ಹಕ್ಕುಗಳು ಹಾಗೂ ಘನತೆಯನ್ನು ಕಾಯುವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.ಮಂಕಿಪಾಕ್ಸ್ ಅನ್ನು ಆರೋಗ್ಯ ತುರ್ತುಸ್ಥಿತಿ ಎಂದು ವರ್ಗೀಕರಿಸುವ ಬಗ್ಗೆ ತುರ್ತು ಸಮಿತಿ ಸದಸ್ಯರು ಒಮ್ಮತಕ್ಕೆ ಬಾರದಿದ್ದರೂ, ಟೆಡ್ರೊಸ್ ಈ ಘೋಷಣೆ ಮಾಡಿದ್ದಾರೆ. ಡಬ್ಲ್ಯುಎಚ್ಒ ಮುಖ್ಯಸ್ಥರು ಇಂತಹ ನಿರ್ಧಾರ ತೆಗೆದುಕೊಂಡಿದ್ದು ಇದೇ ಮೊದಲು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ