ಚಾಮರಾಜನಗರ (ಏ.26): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಕ್ಕೆ ದೇಶವನ್ನೇ ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ವಿರಳವಾಗಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಕಳ್ಳರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಂಧದ ಮರಗಳ ಕದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.
ಚಾಮರಾಜನಗರದಲ್ಲಿ ಈವರೆಗೆ ಒಂದೇ ಒಂದು ಕೊರೋನಾ ವೈರಸ್ ಪ್ರಕರಣ ಪತ್ತೆ ಆಗಿಲ್ಲ. ಆದಾಗ್ಯೂ ಕೆಲ ಸಡಿಲಿಕೆಗಳನ್ನು ಹೊರತುಪಡಿಸಿದರೆ ಲಾಕ್ಡೌನ್ ಮುಂದುವರಿದೇ ಇದೆ. ಜನರ ಓಡಾಟ ಕೂಡ ವಿರಳವಾಗಿದೆ. ಈ ವೇಳೆ ಕೆಲವರು ಲಕ್ಷಾಂತರ ಮೌಲ್ಯದ ಗಂಧದ ಮರಗಳಿಗೆ ಕೊಡಲಿ ಏಟು ಹಾಕಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ದೇವಾಲಯದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ
ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಗಳು ಲಾಕ್ಡೌನ್ನಿಂದ ಖಾಲಿ ಖಾಲಿಯಾಗಿವೆ. ಹೀಗಾಗಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಕಡಿದು ಕದ್ದೊಯ್ಯಲಾಗಿದೆ. ಉಳಿದ ದಿನಗಳಲ್ಲಾಗಿದ್ದರೆ ಈ ಭಾಗದಲ್ಲಿ ವಾಹನ ಸಂಚಾರ ಇರುತ್ತಿತ್ತು. ಹೀಗಾಗಿ ಕಳ್ಳತನ ಸಾಧ್ಯವಾಗುತ್ತಿರಲಿಲ್ಲ.
ಸದ್ಯ ಮಹದೇಶ್ವರ ವನ್ಯಧಾಮದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ, ಕಳ್ಳರು ಎಂಟಕ್ಕೂ ಹೆಚ್ಚು ಗಂಧದ ಮರಗಳನ್ನು ಕಡಿದು ಕದ್ದೊಯ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
(ವರದಿ: ಎಸ್ಎಂ ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ