ರಾಜ್ಯದಲ್ಲಿ ಕಾವು ಪಡೆಯುತ್ತಿರುವ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಕೇವಲ ಸಿನಿತಾರೆಯರ ಹೆಸರು ಬೆಳಕಿಗೆ ಬರುತ್ತಿದೆ. ಅದರಲ್ಲಿಯೂ ಕೇವಲ ನಟಿಮಣಿಯರ ಹೆಸರು ಮಾತ್ರ ಬಹಿರಂಗವಾಗುತ್ತಿದ್ದು, ಕೇವಲ ಚಿತ್ರೋದ್ಯಮವನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿನಿರಂಗ ಹಾಗೂ ಹೆಣ್ಣು ಮಕ್ಕಳು ಬಿಟ್ಟು ಬೇರೆ ಯಾರು ಈ ದಂಧೆಯಲ್ಲಿ ಇಲ್ಲವಾ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ. ಈ ಕುರಿತು ಶಾಸಕರ ಭವನದಲ್ಲಿ ಮಾಧ್ಯಮದೆದುರು ಮಾತನಾಡಿದ ಅವರು, ಡ್ರಗ್ಸ್ ನಂಟು ಕೇವಲ ಚಿತ್ರರಂಗದೊಂದಿಗೆ ಮಾತ್ರ ಬೆಸೆದು ಕೊಂಡಿದೆಯಾ? ರಾಜಕಾರಣಿಗಳು ಮತ್ತು ಅವರ ಮಕ್ಕಳು, ಪೊಲೀಸರು ಹಾಗೂ ಮಾಧ್ಯಮದವರು ಇದರಲ್ಲಿ ಇಲ್ಲವೇ ಎಂದು ಕೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಸಚಿವರು ಕೂಡ ಈ ಪ್ರಕರಣವನ್ನು ಕೈ ಬಿಡದಂತೆ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ, ಈ ಪ್ರಕರಣವನ್ನು ಪೋಲಿಸ್ ಅಧಿಕಾರಿಗಳು ಮಾತ್ರ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ ಎಂದು ಆರೋಪ ಮಾಡಿದರು.
ಪ್ರಕರಣವನ್ನು ಕೇವಲ ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಿ ವಿಚಾರಣೆ ನಡೆಸಲಾಗಿದೆ. ಯಾಕೆ ಈ ಪ್ರಕರಣದಲ್ಲಿ ಸಿನಿಮಾ ಮಂದಿ ಬಿಟ್ಟು ಬೇರೆಯಾರಿಲ್ಲವೇ, ಅವರನ್ನು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಸವಾಲ್ ಹಾಕಿದರು.
ಇಂದ್ರಜಿತ್ ಲಂಕೇಶ್ ಹೇಳಿಕೆ ಬಳಿಕ ಈ ಪ್ರಕರಣ ಕುರಿತು ಪೊಲೀಸರು ಇದರ ವಿಚಾರಣೆ ಮುಂದಾಗಿದ್ದಾರೆ. ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು. ಡ್ರಗ್ಸ್ ಜಾಲ ಈ ಮಟ್ಟಿಗೆ ಹರಡಲು ಕಾರಣ ಯಾರು? ಯಾಕೆ ಈ ಮುಂಚೆಯೇ ಈ ಬಗ್ಗೆ ತನಿಖೆ ನಡೆಸಿಲ್ಲ. ಈ ಹಿನ್ನೆಲೆ ದಂಧೆಯಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧವೂ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಈ ಪ್ರಕರಣದಲ್ಲಿ ಯಾರ್ಯಾರು ಇದ್ದಾರೆ ಎಂದು ತಿಳಿಯಲು ನ್ಯಾಯಾಂಗ ತನಿಖೆಯಾಗ ಬೇಕು. ಹಾಲಿ ನ್ಯಾಯಾಧೀಶರಿಂದ ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ನ್ಯಾಯಾಂಗ ಇದನ್ನು ಸುಮೋಟೋ ಎಂದು ಪರಿಗಣನೆ ಮಾಡಿ ತನಿಖೆ ನಡೆಸಬೇಕು. ಹಾಗಾದಲ್ಲಿ ಈ ತನಿಖೆ ಎಲ್ಲಾ ಆಯಾಮಗಳಿಂದ ನಡೆಯಲು ಸಾಧ್ಯ. ಈ ಮೂಲಕ ಈ ದಂಧೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದು ಹೊರಬರಲಿದೆ ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಅವರು, ನಟಿಯರ ತನಿಖೆ ನಡೆಸುತ್ತಿರುವ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಸಿನಿಮಾದವರೊಂದಿಗೆ ಮಾತ್ರ ಇದನ್ನು ತಳುಕು ಹಾಕುವುದು ಸರಿಯಲ್ಲ. ವಿದೇಶಿ ಪ್ರಜೆಗಳು ಇದರಲ್ಲಿ ಸೇರಿದ್ದಾರೆ. ಎಲ್ಲಾ ರಂಗದಲ್ಲಿಯೂ ಡ್ರಗ್ಸ್ ದಂಧೆ ಹರಡಿದೆ. ಈ ಕುರಿತು ತನಿಖೆಯಾಗಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಎನ್ಇಪಿ ಜಾರಿ ಮಾಡಬೇಕಾದ ಜವಬ್ದಾರಿ ಉನ್ನತ ಶಿಕ್ಷಣ ಪರಿಷತ್ ಮೇಲಿದೆ. ಈ ಉನ್ನತ ಶಿಕ್ಣ ಪರಿಷತ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ವಿ ರಂಗನಾಥ್ ಉಪಾಧ್ಯಕ್ಷರಾಗಿದ್ದಾರೆ. ಆದರೆ , ಅವರು ಆರ್ಥಿಕ ಅಪರಾಧದ ಹಿನ್ನೆಲೆ ಇರುವ ಸಂಸ್ಥೆಯೊಂದಕ್ಕೆ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ ಅವರು ಯಾವುದಾದರೂ ಒಂದು ಕಡೆ ಇರುವುದು ಉತ್ತಮ. ಅವರೇ ಈ ಹುದ್ದೆಗೆ ರಾಜೀನಾಮೆ ನೀಡಲಿ ಅಥವಾ ಸರ್ಕಾರ ಅವರನ್ನು ಉನ್ನತ ಶಿಕ್ಷಣ ಪರಿಷತ್ನಿಂದ ಬಿಡುಗಡೆಗೊಳಿಸಲಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ