ಬೆಂಗಳೂರು (ಜ. 12): ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 7 ರಿಂದ 8 ಜನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಾಳೆ ಮಧ್ಯಾಹ್ನ 3.50ಕ್ಕೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯ ನಡೆಯಲಿದೆ. ಯಾರೆಲ್ಲಾ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಸಿಎಂ ಗುಟ್ಟು ಬಿಟ್ಟುಕೊಟ್ಟಿಲ್ಲ. ನಾಳೆ ಬೆಳಗ್ಗೆ ಅಥವಾ ಇಂದು ರಾತ್ರಿ ಅವರು ನೂತನ ಸಚಿವ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನಲೆ ನೂತನ ಸಚಿವರಾಗಲಿರುವ ಶಾಸಕರಿಗೆ ಮುಖ್ಯಮಂತ್ರಿಗಳೇ ಖುದ್ದು ಕರೆ ಮಾಡಿ ಆಹ್ವಾನ ನೀಡುತ್ತಿದ್ದಾರೆ. ಈ ಹಿನ್ನಲೆ ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವಾಕಾಂಕ್ಷಿಗಳಾದ ಸಿಪಿ ಯೋಗೇಶ್ವರ್, ಮುನಿರತ್ನ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಸುಳ್ಯ ಶಾಸಕ ಅಂಗಾರ, ಉಮೇಶ್ ಕತ್ತಿ ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ವಲಸಿಗರಲ್ಲಿ ಎಂಟಿಬಿ ನಾಗರಾಜ್, ಆರ್ ಶಂಕರ್ ಗೆ ಮಣೆಯಾಕುವ ಸಾಧ್ಯತೆ ಇದೆ. ಇನ್ನು ಉಳಿದಿರುವ ಒಂದು ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದ್ದು, ಇದಕ್ಕಾಗಿ ಮುನಿರತ್ನ ಮತ್ತು ಸಿ ಪಿ ಯೋಗಿಶ್ವರ್ ನಡುವೆ ಪೈಪೋಟಿ ನಡೆಸಿದ್ದಾರೆ.
ಒಂದು ಸ್ಥಾನಕ್ಕಾಗಿ ಇಬ್ಬರ ನಡುವೆ ಫೈಟ್
ಸರ್ಕಾರ ರಚನೆಗೆ ಮುನಿರತ್ನ, ಯೋಗೇಶ್ವರ್ ಇಬ್ಬರು ಕೂಡ ಪ್ರಧಾನ ಪಾತ್ರವಹಿಸಿದ ಹಿನ್ನಲೆ ಇಬ್ಬರಲ್ಲಿ ಯಾರಿಗೆ ಸಿಎಂ ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಮಾಹಿತಿ ನಿಗೂಢವಾಗಿದೆ. ಆದರೆ, ಮುಖ್ಯಮಂತ್ರಿಗಳು ಇಬ್ಬರು ನಾಯಕರನ್ನು ಕರೆಸಿ ತನ್ನ ಕಾವೇರಿ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಡುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನಲೆ ಇಬ್ಬರು ಕೂಡ ತಮಗೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆ ಮಧ್ಯಾಹ್ನ ಸಿಎಂ ಅವರನ್ನು ಭೇಟಿಯಾಗಿದ್ದ ಮುನಿರತ್ನ, ಸಿಪಿಯೋಗೇಶ್ವರ್ ಬಂದು ಹೋದ ಬಳಿಕ ಮತ್ತೊಮ್ಮೆ ಭೇಟಿ ಯಾಗಿ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ. ಈ ಹಿನ್ನಲೆ ಮುನಿರತ್ನ ಕೊನೆ ಕ್ಷಣದ ಲಾಬಿಗೆ ಮುಂದಾಗಿದ್ದಾರೆ.
ನಾಗೇಶ್ ಬದಲು ಕೋಟ ಶ್ರೀನಿವಾಸ್ ಪೂಜಾರಿಗೆ ಕೋಕ್ ಸಾಧ್ಯತೆ?
ಇನ್ನು ಸಚಿವ ಸಂಪುಟದಲ್ಲಿ ಅನೇಕ ಮಂದಿ ಮೇಲ್ಮನೆಯಿಂದ ಆಯ್ಕೆಯಾದ ಸಚಿವರ ಸಂಖ್ಯೆ ದೊಡ್ಡದಿದೆ. ಈಗಾಗಲೇ ಲಕ್ಷ್ಮಣ ಸವದಿ ವಿಧಾನ ಪರಿಷತ್ ಮೂಲಕ ಸಚಿವರು, ಡಿಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೋರ್ವ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮುಜರಾಯಿ ಸಚಿವರಾಗಿದ್ದಾರೆ ಈಗ ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಕೂಡ ವಿಧಾನ ಪರಿಷತ್ ಮೂಲಕವೇ ಸಚಿವರಾಗಲು ಸಿದ್ಧರಾಗಿದ್ದಾರೆ. ಇದೀಗ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಅವರಿಗೂ ಕೂಡ ಸಚಿವ ಸ್ಥಾನ ಖಚಿತವಾಗಿದೆ. ಪರಿಷತ್ ಸದಸ್ಯರು ಮಂತ್ರಿಯಾಗಿರುವ ಸಂಖ್ಯೆ ಹೆಚ್ಚಿರುವ ಹಿನ್ನಲೆ ಕೋಟಾ ಶ್ರೀನಿವಾಸ್ ಪೂಜಾರಿಗೆ ಕೊಕ್ ಕೊಟ್ಟು ಅವರ ಸ್ಥಾನಕ್ಕೆ ಎಸ್ ಅಂಗಾರಗೆ ಸಚಿವ ಸ್ಥಾನ ನೀಡುವ ಬಗ್ಗೆ ಚಿಂತನೆ ಕೂಡ ನಡೆಸಲಾಗಿದೆ ಎಂಬ ಸುದ್ದಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ