ಚಿಕ್ಕೋಡಿ(ಸೆ.24): ಸುರೇಶ್ ಅಂಗಡಿ ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಂಗಡಿ ಅವರ ಹುಟ್ಟೂರು ಕೆ.ಕೆ.ಕೊಪ್ಪ ಗ್ರಾಮದಲ್ಲಿ ನೀರವ ಮೌನ ಆವರಿಸಿರಿಸಿದೆ. ಸುರೇಶ್ ಹುಟ್ಟಿದ್ದು ಬೆಳೆದಿದ್ದು ಇದೆ ಕೆಕೆ ಕೊಪ್ಪ ಗ್ರಾಮದಲ್ಲಿ. ಕೊಪ್ಪ ಗ್ರಾಮದ ಚನ್ನಬಸಪ್ಪ ತಾಯಿ ಸೋಮವ್ವಾ ದಂಪತಿಗಳ 4 ನೆ ಪುತ್ರ ಸುರೇಶ್ ಅಂಗಡಿ. ಬಡ ಕುಟುಂಬದಿಂದಲೇ ಬೆಳೆದು ಬಂದಿರುವ ಅಂಗಡಿ, ತಮ್ಮ ಪ್ರಾಥಮಿಕ ಶಾಲೆಯನ್ನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಮುಗಿಸಿದ್ದಾರೆ. ಬಳಿಕ ಪ್ರೌಢ ಶಾಲೆ ಕಾಲೇಜು ಹಾಗೂ ಪಧವಿಯನ್ನ ಬೆಳಗಾವಿಯಲ್ಲಿ ಮುಗಿಸಿದ್ದಾರೆ. ಕೆ.ಕೆ.ಕೊಪ್ಪ ಗ್ರಾಮದಲ್ಲೆ ಹುಟ್ಟಿ ಬೆಳೆದಿರುವ ಸುರೇಶ್ ಅಂಗಡಿ ಸಾಕಷ್ಟು ಬಾಲ್ಯದ ನೆನಪುಗಳನ್ನ ಬಿಟ್ಟು ಅಗಲಿದ್ದಾರೆ. ಅಂಗಡಿ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮದಲ್ಲೆ ನೀರವ ಮೌನ ಮನೆ ಮಾಡಿತ್ತು. ಇವತ್ತು ಗ್ರಾಮದಲ್ಲಿನ ಅಂಗಡಿಯವ ಬಾಲ್ಯದ ಸ್ನೇಹಿತರು, ಹಿತೈಷಿಗಳು, ಹಾಗೂ ಗ್ರಾಮಸ್ಥರು ಸೇರಿ ಅಂಗಡಿ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ನಡೆಸಿದರು.
ಇನ್ನು ಇದೇ ವೇಳೆ ಸುರೇಶ್ ಅಂಗಡಿಯವರ ಕಾರ್ಯಗಳ ಮೆಲುಕು ಹಾಕಿದ್ದಾರೆ.
ಸುರೇಶ್ ಅಂಗಡಿ ಒಬ್ಬ ಸರಳ ವ್ಯಕ್ತಿತ್ವದ ರಾಜಕಾರಣಿ ಸದಾ ನಗುತ್ತಲೇ ನಮ್ಮೂರಿಗೆ ಬಂದಾಗ ನಮ್ಮ ಸಮಸ್ಯೆಗಳನ್ನ ಕೇಳುತ್ತಿದ್ದರು. ಪ್ರತಿ ಸಲ 15 ರಿಂದ 20 ದಿನಕ್ಕೊಮ್ಮೆಯಾದರೂ ಇಲ್ಲಿಗೆ ಬಂದು ಹೋಗುತ್ತಿದ್ದರು. ಸದಾ ಬಸವ ತತ್ವಗಳ ಆದರ್ಶದಲ್ಲೆ ತಮ್ಮ ಜೀವನವನ್ನು ನಡೆಸಿದ್ದಾರೆ. ನಮ್ಮೂರಿಗೆ ಒಂದು ಕಾಲೇಜು ಬೇಕು ಎಂದು ಹೇಳಿದಾಕ್ಷಣ ಕೂಡಲೇ ತಮ್ಮ ಸ್ವಂತ ಖರ್ಚಿನಲ್ಲೆ ಭೂಮಿ ಖರೀದಿಸಿ ತಾಲೂಕಿನಲ್ಲೇ ಪ್ರಥಮ ಸರ್ಕಾರಿ ಕಾಲೇಜನ್ನು ನಮ್ಮೂರಿನಲ್ಲಿ ಕಟ್ಟಿಸಿದ್ದಾರೆ. ಯಾರಿಗೂ ಸಹ ಕೆಟ್ಟದನ್ನ ಬಯಸದೆ ರಾಜಕೀಯ ಮಾಡಿದ್ದಾರೆ. ಇಂತಹ ಓರ್ವ ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡ ನಮ್ಮೂರಿಗೆ ತುಂಬಿಕೊಳ್ಳಲಾಗದ ನಷ್ಟ. ಇಂದು ನಮ್ಮೂರ ಮಗನನ್ನ ನಾವು ಕಳೆದುಕೊಂಡಿದ್ದೇವೆ ಎಂದು ನೆನಪುಗಳ ಮೆಲಕು ಹಾಕಿ ಮೌನ ಶ್ರದ್ಧಾಂಜಲಿ ಸಲ್ಲಿಸಿದರು.
ಸುರೇಶ್ ಅಂಗಡಿ ನಿಧನಕ್ಕೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚನೆ; ಪಕ್ಷಾತೀತವಾಗಿ ಕೇಂದ್ರ ಸಚಿವರ ಸ್ಮರಣೆ
ತಾಯಿ ನೋಡಲು ವಾರದ ಹಿಂದೆ ಬಂದಿದ್ದ ಅಂಗಡಿ
ಇನ್ನು ಸುರೇಶ್ ಅಂಗಡಿ ತಮ್ಮ ಕುಟುಂಬದ ಸಮೇತವಾಗಿ ಬೆಳಗಾವಿ ನಗರಕ್ಕೆ ಶಿಫ್ಟ್ ಆಗಿದ್ದಾರೆ. ಆದರೆ ತಾಯಿ ಮಾತ್ರ ಸ್ವಂತ ಊರಿನಲ್ಲೆ ಇರುತ್ತಿದ್ದರು. ತಾಯಿಯ ಮೇಲಿನ ಎಲ್ಲಿಲ್ಲದ ಪ್ರೀತಿ ಇತ್ತು. ಸುರೇಶ್ ಅಂಗಡಿ ಕನಿಷ್ಠ 15 ದಿನಕ್ಕೊಮ್ಮೆಯಾದ್ರು ಕೆ.ಕೆ. ಕೊಪ್ಪ ಗ್ರಾಮಕ್ಕೆ ತೆರಳಿ ತಾಯಿಯನ್ನ ಭೇಟಿಯಾಗಿ 1 ಗಂಟೆ ಕಾಲ ಕಳೆದು ಬರುತ್ತಿದ್ದರು. ಇನ್ನು ಅಂಗಡಿ ದೆಹಲಿಗೆ ತೆರಳುವ ದಿನದಂದು ತಾಯಿಯನ್ನ ಕೊನೆಯದಾಗಿ ಭೇಟಿ ಮಾಡಿದ್ದರು. ಅಧಿವೇಶನ ಶುರುವಾಗಲಿದೆ, ನಾನು ಒಂದು ತಿಂಗಳು ಮತ್ತೆ ಬರಲ್ಲ, ಅಧಿವೇಶನದ ಬಳಿಕ ಬರುತ್ತೇನೆ ಎಂದು ಹೇಳಿದ್ದರು. ಬಳಿಕ ಗ್ರಾಮದ ತಮ್ಮ ಗೆಳೆಯರನ್ನ ಭೇಟಿ ಮಾಡಿ ದೆಹಲಿಗೆ ತೆರಳಿದರು. ಆದರೆ ವಿಧಿ ಎಷ್ಟು ಕ್ರೂರಿ ಅಂದ್ರೆ ಹೋದ ಸುರೇಶ್ ಅಂಗಡಿಯನ್ನ ತಾಯಿಯನ್ನು ಕಾಣಲು ವಾಪಸ್ ಕಳಿಸಲೆ ಇಲ್ಲಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ