ಕೊಪ್ಪಳ (ನ.28): ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಜೋಡೆತ್ತುಗಳ ಹಾಗೆ ಇದ್ದವರು. ಇಂದು ಚಿರತೆಗಳ ಹಾಗೆ ಕಚ್ಚಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು (Minister Ramulu) ವ್ಯಂಗ್ಯವಾಡಿದ್ದಾರೆ. ಇಬ್ಬರು ನಾಯಕರಿಗೂ ಸಿಎಂ ಖುರ್ಚಿ (CM Chair) ಚಿಂತೆಯಾಗಿದೆ. ಆದರೆ ಸದ್ಯ ಅದು ಖಾಲಿ ಇಲ್ಲ, ಮುಂದೆಯೂ ಅದು ಬಿಜೆಪಿಯದ್ದೇ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕಾಂಗ್ರೆಸ್ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ
ನಗರದಲ್ಲಿಂದು ಮಹರ್ಷಿ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018 ರಲ್ಲಿ ಕಾಂಗ್ರೆಸ್ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿತ್ತು. ಅದರ ಪಾಪದ ಫಲವಾಗಿ ಸರ್ಕಾರ ಉರುಳಿತು. ಇವತ್ತು ಪರಿಸ್ಥಿತಿ ಬೇರೆ ಇದೆ. ಎಲ್ಲಾ ವಿಚಾರದಲ್ಲಿ ಬಿಜೆಪಿ ಮುಂದಿದೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ನ ಈ ಎರಡು ಚಿರತೆಗಳು ಏನೇ ಕಾದಾಟ ನಡೆಸಿದರೂ, ಇವರಿಗಂತು ಖುರ್ಚಿ ಸಿಗುವುದಿಲ್ಲ. ಬಿಜೆಪಿ 150 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದ್ದು, ಮತ್ತೆ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡಲಿದ್ದೇವೆ ಎಂದು ಘೋಷಿಸಿದರು.
ಸವಾಲು ಹಾಕಿದ್ದು ಕಾಂಗ್ರೆಸ್ ಪಕ್ಷಕ್ಕೆ ಹೊರತು ಸಿದ್ದರಾಮಯ್ಯಗೆ ಅಲ್ಲ
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಎಸ್.ಟಿ. ಸಮಾವೇಶದಲ್ಲಿ ತಾಕತ್ತು ಇದ್ದರೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದು ಕಾಂಗ್ರೆಸ್ ಪಕ್ಷಕ್ಕೆ ಹೊರತು ಸಿದ್ದರಾಮಯ್ಯ ಅವರಿಗೆ ಅಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.
ವೈಯಕ್ತಿಕವಾಗಿ ಯಾರಿಗೂ ನಾನು ಸವಾಲು ಹಾಕಿಲ್ಲ
ಸುದ್ದಿಗಾರರ ಜೊತೆ ಮಾತನಾಡಿ ಬಿಜೆಪಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದಿಲ್ಲ ಎಂದು ಕಾಂಗ್ರೆಸ್ ಅನೇಕ ಬಾರಿ ಟೀಕೆ ಮಾಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರದ ನಡುವೆ ತಾಕತ್ತು ಇದ್ದರೆ ಬನ್ನಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದೇನೆ.
ಆ ಪದವನ್ನು ವಾಪಸ್ ಪಡೆಯುತ್ತೇನೆ
ಹಿಂದುಗಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಂಡ ಸಿದ್ದರಾಮಯ್ಯನವರೇ ಇಲ್ಲಿ ಸೇರಿರುವ ಜನಸಾಗರ ನೋಡಿ ಎಂದು ಹೇಳಿದ್ದೇನೆ. ವೈಯಕ್ತಿಕವಾಗಿ ಯಾರಿಗೂ ನಾನು ಸವಾಲು ಹಾಕಿಲ್ಲ. ನಿಮ್ಮನ್ನು ನೋಡಿಕೊಳ್ಳುತ್ತೇನೆ ಎನ್ನುವ ಪದವನ್ನು ಸಿದ್ದರಾಮಯ್ಯ ಅವರಿಗೆ ಬಳಸಿಲ್ಲ. ಆಕಸ್ಮಿಕವಾಗಿ ಬಳಸಿದ್ದರೆ ಆ ಪದವನ್ನು ವಾಪಸ್ ಪಡೆಯುತ್ತೇನೆ’ ಎಂದರು.
ಮುಂಬರುವ ದಿನಗಳಲ್ಲಿ ಬಿಜೆಪಿ ಸಮಾವೇಶ
ನಾವು ಮಾಡುತ್ತಿರುವ ಸಮಾವೇಶಗಳಿಗೆ ಪೈಪೋಟಿಯಾಗಿ ಕಾಂಗ್ರೆಸ್ ಕೂಡ ಸಮಾವೇಶಗಳನ್ನು ನಡೆಸುತ್ತದೆ. ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ಮೈಸೂರು, ಚಾಮರಾಜನಗರ ಅಥವಾ ಚಿತ್ರದುರ್ಗದಲ್ಲಿ ಎಸ್ಸಿ ಸಮಾಜದ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಯಾವುದೇ ಸಮುದಾಯಗಳನ್ನು ತಿರಸ್ಕರಿಸಲ್ಲ
ಬಿಜೆಪಿ ಯಾವುದೇ ಸಮುದಾಯಗಳನ್ನು ತಿರಸ್ಕರಿಸುವುದಿಲ್ಲ. ನಮ್ಮ ಪಕ್ಷದ ಸಿದ್ದಾಂತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ದೇಶದ ಹಲವು ಕಡೆ ಜನ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದು, ರಾಜ್ಯದಲ್ಲಿಯೂ ಇದು ಮುಂದುವರಿಯಲಿದೆ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಸಮುದಾಯ ರಾಜಕಾರಣ ಮಾಡುತ್ತಿದೆ. ಆದರೆ, ನಾವು ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ: Fighter Ravi: ಸೈಲೆಂಟ್ ಸುನೀಲ ಬೆನ್ನಲ್ಲೇ ಮತ್ತೊಬ್ಬ ರೌಡಿಶೀಟರ್ ಬಿಜೆಪಿ ಸೇರ್ಪಡೆ, ಕಮಲ ಹಿಡಿದ ಫೈಟರ್ ರವಿ
ಯಾರಿಗೆ ಟಿಕೆಟ್ ಕೊಡಬೇಕು
ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಗುಜರಾತ್ನಲ್ಲಿ ಮಾಡಿದಂತೆ ರಾಜ್ಯದಲ್ಲಿಯೂ ಹೊಸಬರಿಗೆ ಅವಕಾಶ ಕೊಡಬಹುದು. ಈ ಕುರಿತು ಬಿ.ಎಲ್. ಸಂತೋಷ್ ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು.
ಜನಾರ್ದನ ರೆಡ್ಡಿ ಈ ಭಾಗದ ಹಿರಿಯ ನಾಯಕರು. ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ವೇದಿಕೆಯಲ್ಲಿ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಇದನ್ನು ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ