MLC Election: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ಪಕ್ಷಗಳ ಮುಖಂಡರು ಭರ್ಜರಿ ಪ್ರಚಾರದಲ್ಲಿ (Election Campaign) ತೊಡಗಿದ್ದಾರೆ. ರಾಜ್ಯ ರಾಜಕಾರಣದ ಘಟಾನುಘಟಿ ನಾಯಕರು ಇಂದು ವಿವಿಧ ಜಿಲ್ಲೆಗಳಲ್ಲಿ ಅಬ್ಬರ ಪ್ರಚಾರ ನಡೆಸಿ ಮತಯಾಚಿಸಿದರು. ವಿರೋಧಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಯಾರು, ಯಾರ ಬಗ್ಗೆ, ಏನು ಹೇಳಿದ್ದಾರೆ ಎಂಬ ಸಂಗತಿ ಇಲ್ಲಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರುಶುರಾಂಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಚಿವ ಶ್ರೀ ಬಿ. ರಾಮುಲು (B. Sriramulu) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದರು.
ಹಿಂದೂಗಳು ಭಯೋತ್ಪಾದಕರ ರೀತಿಯಲ್ಲಿ ಕಾಣುತ್ತಾರೆ
ನಳೀನ್ ಕುಮಾರ್ ಕಟೀಲ್ ಭಯೋತ್ಪಾದಕ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟರು. ಉತ್ತರ ಕುಮಾರನ ಮಾತಿನಂತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿದ್ದರಾಮಯ್ಯಗೆ ಹಿಂದೂಗಳು ಭಯೋತ್ಪಾದಕರ ರೀತಿಯಲ್ಲಿ ಕಾಣುತ್ತಾರೆ. ಹಿಂದುತ್ವದ ಪರ, ಹಿಂದೂಗಳ ಪರ ಮಾತನಾಡಿದರೆ ಭಯೋತ್ಪಾದಕರ ರೀತಿ ಕಾಣುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಅಧಿಕಾರ ಇದಿದ್ದರೆ, ಬೇರೆ ರಾಷ್ಟ್ರದ ಸ್ಥಿತಿ ಆಗುತ್ತಿತ್ತಯ. ಪ್ರಧಾನಿ ಮೋದಿ ಇರುವುದರಿಂದ ದೇಶ ಸುಭದ್ರವಾಗಿದ್ದೇವೆ ಎಂದರು.
ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ..!
ಇನ್ನು ಸಚಿವ ಕೆ.ಎಸ್.ಈಶ್ವರಪ್ಪರನ್ನು ಪೆದ್ದ ಎಂದು ಕರೆದಿರುವ ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ. ಅವರು ಒಬ್ಬ ವಕೀಲರು, ಬುದ್ದಿಜೀವಿಗಳು. ಮಾತನಾಡುವುದೇ ಅಭ್ಯಾಸವಾಗಿದೆ, ಸ್ವಯಂ ಘೋಷಿತ ಬುದ್ದಿವಂತ ಎಂದು ವ್ಯಂಗ್ಯವಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ 10% ಸರ್ಕಾರ ಎಂದು ನಾವು ಹೇಳಿದ್ದೆವು. ಕಾಂಗ್ರೆಸ್ ನಾಯಕರು ಪರ್ಸೆಂಟೇಜ್ ಪಿತಾಮಹರು. ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಜನ ಕಿಮ್ಮತ್ತು ಕೊಡಲ್ಲ ಎಂದು ಕುಹಕವಾಡಿದರು.
ಆ ಕೊಳಕು ನಮಗೆ ಬೇಡ
ಇನ್ನು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ಪರೋಕ್ಷವಾಗಿ ತೀವ್ರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ದೊಡ್ಡ ಸಾಹುಕಾರ್ ದೊಡ್ಡ ಸಾಹುಕಾರ್ ಅಂತಾರೆ, ಯಾವ ಸಾಹುಕಾರ್. ಫಸ್ಟ್ ಎಲೆಕ್ಷನ್, ನಂಟಿಸ್ತನ ವಿಶ್ವಾಸವನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಲ್ಲ. ಯಾರನ್ನೂ ಕೂಡ ಭೇಟಿಗೆ ಅವಕಾಶ ಕೊಡಬೇಡಿ, ನಮ್ಮ ವೋಟ್ ಕಾಪಾಡಿ ಸಾಕು. ಬಿಜೆಪಿಯವರಿಗೂ ಸಹ ಒಂದು ದೊಡ್ಡ ಪ್ರಾಣಸಂಕಟವಾಗಿದೆ. ಬೆಳಗಾವಿ ಜಿಲ್ಲೆಯ ದುಷ್ಟ ರಾಜಕಾರಣಕ್ಕೆ ಕೊನೆ ಎಳಿತಾರೆ ಅಂತಾ ತಿಳಿದಿದ್ದೇನೆ. ಬಿಜೆಪಿಯವರು ಇದಕ್ಕೆ ಕೊನೆ ಹಾಡಲಿಲ್ಲ ಅಂದ್ರೆ ಅವರಿಗೂ ಭವಿಷ್ಯ ಇಲ್ಲ. ಸದ್ಯ ನಮ್ಮಲ್ಲಿ ಕ್ಲೀನ್ ಆಗಿದೆ, ಆ ಕೊಳಕು ನಮಗೆ ಬೇಡ ಎಂದರು. ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಕೊಳಕು ಎನ್ನುವ ಮೂಲಕ ವಾಗ್ದಾಳಿ ನಡೆಸಿದರು. ಬಹಳ ಜನ ಆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರೋರಿದ್ದಾರೆ ಎಂದರು.
ಇದನ್ನೂ ಓದಿ: Belagavi: ಆ ‘ಕೊಳೆ’ ನಮ್ಮಿಂದ ದೂರ ಹೋಯ್ತು: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ
ಈಶ್ವರಪ್ಪ ತಮಾಷೆ ಮಾಡಿದ್ದಾರೆ ಅಷ್ಟೇ
ಇನ್ನು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಿದರು. ಮುಂದೆ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಅನ್ನೋ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್ವೈ, ಈಶ್ವರಪ್ಪ ತಮಾಷೆ ಮಾಡಿದ್ದಾರೆ ಎನ್ನುವ ಮೂಲಕ ತೆರೆ ಎಳೆದರು. ಪರಿಷತ್ ಚುನಾವಣೆಯ 25 ಸ್ಥಾನಗಳಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡ್ತೀವಿ, 20ರಲ್ಲಿ ನೂರಕ್ಕೆ ನೂರು 15 ಸ್ಥಾನಗಳನ್ನ ಗೆಲ್ತಿವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ತಿಂಗಳಿನಿಂದ ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತಿನಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ