ಕೊಡಗು(ನ.01): ಮಾಜಿ ಸಿಎಂ ಸಿದ್ದರಾಮಯ್ಯ ರಾತ್ರಿ ನಿದ್ದೆ ಮಾಡುವುದಕ್ಕಿಂತ ಹಗಲು ನಿದ್ದೆ ಮಾಡುವುದೇ ಜಾಸ್ತಿ. ಈ ಸಂದರ್ಭದಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾಗುತ್ತಾರೆ ಎನ್ನುವ ಹಗಲುಗನಸನ್ನು ಯಾವಾಗ ಕಂಡರೋ ಗೊತ್ತಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ. ಆ ಮೂಲಕ ಮಾಜಿ ಸಿಎಂ ಹಗಲುಗನಸು ಕಾಣುತ್ತಿದ್ದಾರೆ ಎಂದು ಕುಟುಕಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 65 ನೇ ಕನ್ನಡ ರಾಜ್ಯೋತ್ಸದಲ್ಲಿ ಭಾಗಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಬದಲಾಗುವುದಿಲ್ಲ. ಮುಂದೆಯೂ ಸಿಎಂ ಆಗಿ ಅವರೇ ಇರುತ್ತಾರೆ ಎಂದರು.
ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದಿಲ್ಲ ಎಂದು ನಿಮ್ಮ ಶಾಸಕರು, ಸಂಸದರೇ ಹೇಳುತ್ತಿದ್ದಾರೆ ಎಂದು ಮಾಧ್ಯಮದವರು ಮರುಪ್ರಶ್ನಿಸುತ್ತಿದ್ದಂತೆ, ಯತ್ನಾಳ್ ಹೇಳಿರುವುದು ತಮ್ಮ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಸಿಕ್ಕುತ್ತಿಲ್ಲ ಎನ್ನೋ ಅಸಮಾಧಾನದ ಅರ್ಥದಲ್ಲಿ ಅಷ್ಟೇ. ನನ್ನ ಕ್ಷೇತ್ರಕ್ಕೂ ಸರಿಯಾಗಿ ಅನುದಾನ ಬರದಿದ್ದಲ್ಲಿ ನಾನೂ ಕೂಡ ಅನುದಾನಕ್ಕಾಗಿ ಹೇಳುತ್ತೇನೆೆ ಎಂದು ಸಮರ್ಥಿಸಿಕೊಂಡರು.
ಎಂ.ಇ.ಎಸ್ ನವರಿಗೂ ಸ್ವಾತಂತ್ರ್ಯವಿದೆ, ಅವರ ಭಾವನೆ ವ್ಯಕ್ತಪಡಿಸಲು; ಡಿಸಿಎಂ ಅಶ್ವಥ್ ನಾರಾಯಣ್
ಇನ್ನು ಸ್ಟಾರ್ ಪ್ರಚಾರಕರ ಕ್ಯಾಂಪೇನ್ ಇಂದ ಮತಗಳು ಬರುವುದಿಲ್ಲ ಎನ್ನೋ ಬಿಜೆಪಿ ನಾಯಕರ ಹೇಳಿಕೆಯನ್ನು ಸಿದ್ದರಾಮಯ್ಯನವರ ಹೇಳಿಕೆ ಎಂದು ಅರ್ಥೈಸಿಕೊಂಡ ವಿ ಸೋಮಣ್ಣ ಕಾಂಗ್ರೆಸ್ ನವರೊಂದಿಗೆ ಸ್ಟಾರ್ ಪ್ರಚಾರಕರು ಬಂದರೆ ಮತಗಳಾಗಿ ಪರಿವರ್ತನೆಯಾಗುತ್ತದೆಯೋ ಎಂದು ವ್ಯಂಗ್ಯವಾಡಿದರು. ಇನ್ನು ಆರ್ ಆರ್ ನಗರ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ವಿ ಸೋಮಣ್ಣ, ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಸಂಕಷ್ಟದ ಸಂಧರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಬಿಜೆಪಿಿ ಸರ್ಕಾರಗಳು ಹೇಗೆ ಕೆಲಸ ಮಾಡಿವೆ ಎನ್ನೋದು ಜನರ ಭಾವನೆಯಲ್ಲಿವೆ. ಹೀಗಾಗಿ ಜನರು ಬಿಜೆಪಿಗೆ ಮತಹಾಕಿ ಗೆಲ್ಲಿಸಲಿದ್ದಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ