ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಬರೆದಿರೋ ಪಠ್ಯವನ್ನು ತೆಗೆಯುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪುನರುಚ್ಛರಿಸಿದ್ದಾರೆ. ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ (Text Book Row) ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯವನ್ನು ಓದಿಲ್ಲ. ಆದರೆ ಅವರು ಬರೆದಿರೋ ಪಠ್ಯ ನಮ್ಮ ಮಕ್ಕಳು ಓದೋದು ಬೇಡ ಎಂದು ಹೇಳಿದರು.
ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆಯ ಪಠ್ಯವನ್ನು ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಅವರು ಯಾವ ಪಿಎಚ್ಡಿ ಮಾಡಿದ್ದಾರೆ? ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದರೆ ಅದನ್ನ ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸ್ ಅಪ್ ಯುನಿವರ್ಸಿಟಿಯಲ್ಲಿ ಓದೋರು ಇವರು. ಅಲ್ಲಿಯೋ ವಿಸಿಗಳು ನಮ್ಮ ಪಠ್ಯ ಓದೋಕೆ ಪಠ್ಯ ರಚನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ತೀವ್ರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: HD Revanna: ಕುಮಾರಸ್ವಾಮಿ ಅವರನ್ನು ನಾವೇ ನಮ್ಮ ಕೈಯಾರೆ ಸೋಲಿಸಿದೆವು: ಎಚ್ಡಿ ರೇವಣ್ಣ
ಇನ್ನು, ಚಕ್ರವರ್ತಿ ಸೂಲಿಬೆಲೆ ಭಗತ್ ಸಿಂಗ್, ಸುಖದೇವ ಬಗ್ಗೆ ಪಠ್ಯ ಬರೆದಿರೋದು ಸರ್ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವ ಇದೆ. ಅವರ ನಿಜವಾದ ಇತಿಹಾಸ ನಾವು ಹೇಳ್ತೀವಿ. ನಾನು ನಾಸ್ತಿಕ ಏಕೆ ಆಗಿದ್ದೇನೆ ಅಂತ ಭಗತ್ ಸಿಂಗ್ ಪುಸ್ತಕ ಇದೆ. ಅದನ್ನ ಚಕ್ರವರ್ತಿ ಸೂಲಿಬೆಲೆ ಓದಿ ಬಿಡಲಿ ಸಾಕು. ಇತಿಹಾಸ ತಿರುಚಲಾರದ ಪಾಠ ನಾವು ಇಡ್ತೀವಿ. ಚಕ್ರವರ್ತಿ ಸೂಲಿಬೆಲೆಗಿಂತ ಒಳ್ಳೆ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳೋ ವ್ಯಕ್ತಿ ಅಲ್ಲ. ಅವರು ಬರೆದಿರೋ ಪಠ್ಯ ನಾನು ಯಾಕೆ ಓದಲಿ. ನನಗೆ ಓದೋಕೆ ಸಾಕಷ್ಟು ಇದೆ. ಅವರು ಬರೆದಿರೋ ಪಠ್ಯ ನಾನು ಓದಿಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: Free Electricity: ಉಚಿತ ವಿದ್ಯುತ್ಗೆ ಬರೋಬ್ಬರಿ 2 ಕೋಟಿ ಅರ್ಜಿದಾರರು, 20 ದಿನದಲ್ಲಿ ನೋಂದಣಿ ಸಾಧ್ಯವೇ?
'ಯಾವುದು ಸತ್ಯ ಇಲ್ಲ ಅದೆಲ್ಲವನ್ನು ತೆಗೆಯುತ್ತೇವೆ'
ಇನ್ನು, ಯಾವುದು ಕೇಸರಿಕರಣ ಇದೆ. ಯಾವುದು ಸತ್ಯ ಇಲ್ಲ ಅದೆಲ್ಲವನ್ನು ತೆಗೆಯುತ್ತೇವೆ ಎಂದ ಪ್ರಿಯಾಂಕ್ ಖರ್ಗೆ, ಸಾಹಿತಿಗಳ ಹಿನ್ನೆಲೆ ಇಲ್ಲದೆ ಬರೆದವರ ಪಠ್ಯ ಯಾಕೆ ಓದಬೇಕು. ಆಡಳಿತ ಪಕ್ಷಕ್ಕೆ ಕ್ಲೋಸ್ ಇದ್ದ ಮಾತ್ರಕ್ಕೆ ಪಠ್ಯ ಹಾಕೋದು ಸರಿನಾ? ನಾವು ಅದರ ವಿರುದ್ದ ಇದ್ದೇವೆ. ಅದನ್ನು ಸರಿ ಮಾಡುತ್ತೇವೆ. ನಿಮ್ಮ ಮಕ್ಕಳು ವಾಟ್ಸ್ ಅಪ್ ಯುನಿವರ್ಸಿಟಿ ಓದಬೇಕಾ? ಒಳ್ಳೆ ಯುನಿವರ್ಸಿಟಿ ಓದಬೇಕಾ? ಎಂದು ಪ್ರಶ್ನಿಸಿದರು.
ಜಾತಿವಾರು ಜನಗಣತಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕ್ಯಾಬಿನೆಟ್ನಲ್ಲಿ ಅದನ್ನ ಚರ್ಚೆ ಮಾಡ್ತೀವಿ. ಕ್ಯಾಬಿನೆಟ್ನಲ್ಲಿ ಚರ್ಚೆ ಆಗಲಿ. ಬಳಿಕ ಸಿಎಂ, ಡಿಸಿಎಂ ನಿರ್ಧಾರ ಮಾಡ್ತಾರೆ. ಜಾತಿ ಗಣತಿ ಬಿಡುಗಡೆ ಮಾಡಿದ್ರೆ ರಾಜಕೀಯ ಸ್ಥಿತ್ಯಂತರ ಆಗುತ್ತೆ ಎಂಬ ಮಾತಿಗೆ ಉತ್ತರಿಸಿ, ನಾನು ಜಾತಿಗಣತಿ ಸಮೀಕ್ಷೆ, ಅಂಕಿ ಅಂಶಗಳನ್ನ ನೋಡಿಲ್ಲ. ಎಸ್ಸಿ ಸಮುದಾಯ ಹೆಚ್ಚು, ಬೇರೆ ಸಮುದಾಯ ಕಡಿಮೆ ಇದೆ ಅನ್ನೋ ಅಂಕಿ ಅಂಶ ಗೊತ್ತಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ