ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಾಜಕೀಯ ಮುಖಂಡರು (Political Leaders) ಮತ ಬ್ಯಾಂಕ್ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಎಂದಿನಂತೆ ಈ ಬಾರಿಯೂ ಗಿಫ್ಟ್ ಪಾಲಿಟಿಕ್ಸ್ (Gift Politics) ಆರಂಭಗೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ಮತದಾರರಿಗೆ ಕಾಣಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಆಪ್ತರು ಸ್ಥಳೀಯರಿಗೆ ಮಿಕ್ಸರ್ ಗ್ರೈಂಡರ್ ನೀಡಿದ್ದರು. ಗಿಫ್ಟ್ ಹಂಚಿಕೆ ವಿಡಿಯೋ ಮಾಡಿದ್ದ ಕಮಲ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿಯ ಸಚಿವ ನಾರಾಯಣಗೌಡರು, ಕೆ.ಆರ್.ಪೇಟೆ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ಮಾರ್ಟ್ ಟಿವಿ (SmartTV) ವಿತರಣೆ ಮಾಡಿದ್ದಾರೆ. ಗಿಫ್ಟ್ ಸ್ವೀಕರಿಸಿರುವ ಗ್ರಾಮ ಪಂಚಾಯ್ತಿ ಸದಸ್ಯರು ಮತ್ತೊಮ್ಮೆ ನಾರಾಯಣಗೌಡರು ಎಂದು ಜೈಕಾರ ಹಾಕಿದ್ದಾರೆ.
ಕೆ.ಆರ್. ಪೇಟೆ ತಾಲೂಕಿನ ಪ್ರತಿಯೊಬ್ಬ ಗ್ರಾಮ ಪಂಚಾಯಿತಿಯ ಗೆದ್ದ ಮತ್ತು ಸೋತ ಪ್ರತಿ ಸದಸ್ಯರಿಗೆ ಸ್ಮಾರ್ಟ್ ಟಿವಿ ಗಿಫ್ಟ್ ನೀಡಲಾಗಿದೆ. ಬೆಲೆ ಬಾಳುವ ಟಿವಿ ಪಡೆದ ಸದಸ್ಯರು ಖುಷಿಯಿಂದ ನಾರಾಯಣಗೌಡರಿಗೆ ಉಘೇ ಉಘೇ ಎಂದಿದ್ದಾರೆ.
ಕೆಆರ್ ಪೇಟೆ ಜೆಡಿಎಸ್ನಲ್ಲಿ ಭಿನ್ನಮತ
ಚುನಾವಣೆ ಹೊಸ್ತಿಲಿನಲ್ಲಿ ಕೆಆರ್ ಪೇಟೆ ಜೆಡಿಎಸ್ನಲ್ಲಿ (KR Pete JDS Ticket Fight) ಭಿನ್ನಮತದ ಅಲೆ ಕಾಣಿಸಿಕೊಂಡಿದೆ. ಕೆಆರ್.ಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಉಂಟಾಗಿದ್ದು, ಶೀಳನೆರೆ ಗ್ರಾಮದ ಕಾರ್ಯಕರ್ತ ಮರಡಹಳ್ಳಿ ಯೋಗೇಶ್, ಕಿಕ್ಕೇರಿ ಸುರೇಶ್ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಎಚ್.ಟಿ.ಮಂಜು ಬದಲಿಗೆ ಮಾಜಿ ಸಚಿವ ಹೆಚ್ಡಿ ರೇವಣ್ಣ (Former Minister HD Revanna) ಅವರಿಗೆ ಟಿಕೆಟ್ ನೀಡುತ್ತಿರೋದಕ್ಕೆ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಅಸಮಾಧಾನಗೊಂಡಿದ್ದಾರೆ. ಮತ್ತೊಂದು ಬಣ ಬಿ.ಎಲ್.ದೇವರಾಜುಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದೆ.
ಶಿವರಾಜ್ ತಂಗಡಗಿಗೆ ಕ್ಲಾಸ್
ಚುನಾವಣೆ ಹಿನ್ನೆಲೆ ಜನಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನಿರಲೂಟಿ ಗ್ರಾಮಕ್ಕೆ ಬಂದ ಮಾಜಿ ಸಚಿವ ಶಿವರಾಜ್ ತಂಗಡಗಿ (Former Minister Shivaraj Tangadagi) ಅವರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಸ್ಥಳೀಯರು, ಅವಶ್ಯವಿದ್ದಾಗ ಕರೆ ಸ್ವೀಕರಿಸಲ್ಲ. ನಮಗೆ ಬಿಜೆಪಿ ಅವರೇ ಸಹಾಯ ಮಾಡುತ್ತಾರೆ ಎಂದು ಬೇಸರ ಹಾಕಿದ್ದಾರೆ.
ಮಿಸ್ ಕಾಲ್ ಬಂದಿದ್ದರೂ ನಾನು ವಾಪಸ್ ಕರೆ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಶಿವರಾಜ್ ತಂಗಡಗಿ ಅವರನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ ವಿರುದ್ಧ ದೂರು ದಾಖಲು
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಬೃಹತ್ ಹಗರಣಗಳು ನಡೆದಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್ ಆರ್ (Ramesh NR) ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ.
ಇದನ್ನೂ ಓದಿ: G Parameshwar: ಕಾಂಗ್ರೆಸ್ನಲ್ಲಿ ಭಾರೀ ಬಂಡಾಯ; ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ?
ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ,, ನಕಲಿ ದಾಖಲೆ, ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ 10 ಪ್ರತ್ಯೇಕ ದೂರು ನೀಡಿಲಾಗಿದ್ದು, 3,728 ಪುಟಗಳ ದಾಖಲೆ, 62 ಗಂಟೆಗಳ ವಿಡಿಯೋ ತುಣುಕು, 900ಕ್ಕೂ ಅಧಿಕ ಛಾಯಾಚಿತ್ರಗಳನ್ನು ಸಾಕ್ಷಿಯಾಗಿ ನೀಡಲಾಗಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ