ಬೆಂಗಳೂರು: ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ. (Karnataka Assembly Election) ಮತದಾರರನ್ನು ಓಲೈಸಲು ಜನರು ಇನ್ನಿಲ್ಲದ ಕಸರತ್ತು ನಡೆಸಲು ಪ್ರಾರಂಭಿಸುತ್ತಾರೆ. ಈಗಾಗಲೇ ಒಂದು ಹಂತಕ್ಕೆ ಮತದಾರರನ್ನು ಓಲೈಸುವ ಪ್ರಕ್ರಿಯೆ ಅಲ್ಲಲ್ಲಿ ಶುರುವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪರಸ್ಪರ ರಾಜಕೀಯ ಕೆಸರೆರಚಾಟ, ಆಣೆ ಪ್ರಮಾಣ ಪಾಲಿಟಿಕ್ಸ್, (Karnataka Politics) ಜಾತಿ ಧರ್ಮದ ಓಲೈಕೆ, ಅಭಿವೃದ್ಧಿ, ಮುಂತಾದ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಪಕ್ಷಗಳ ಮುಖಂಡರುಗಳು ಆರೋಪ ಪ್ರತ್ಯಾರೋಪ, ವಾಗ್ವಾದಗಳನ್ನು ನಡೆಸುವ ಪರಿ ಹೆಚ್ಚಾಗಲಿದ್ದು, ಇನ್ನೊಂದೆಡೆ ಈಗಾಗಲೇ ಕೋಲಾರದಲ್ಲಿ (Kolar) ಈಗಾಗಲೇ ಆಣೆ ಪ್ರಮಾಣದ ಪಾಲಿಟಿಕ್ಸ್ ಶುರುವಾಗಿದೆ.
ಹೌದು.. ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರು 17 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರು. ಅವರು ಅಂದು ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದರು. ಆ ಬಳಿಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತ್ತು. ವಲಸಿಗ ಶಾಸಕರು ಬಿಜೆಪಿ ಸೇರಿದ್ದರೂ ಕೂಡ ಅವರು ಇಂದಲ್ಲ ನಾಳೆ ಮತ್ತೆ ಮಾತೃ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆ ಎಂದು ಅಂದಿನಿಂದ ಇಂದಿನವರೆಗೂ ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಲೇ ಇದೆ. ಈ ಮಧ್ಯೆ ನಾವು ಮತ್ತೆ ಆ ಪಕ್ಷಕ್ಕೆ ಹೋಗೋದಿಲ್ಲ, ಬಿಜೆಪಿಯಲ್ಲೇ ಇರುತ್ತೇವೆ ಎಂದು ಹಲವು ಮಂದಿ ವಲಸಿಗ ಶಾಸಕರು ಹೇಳಿದ್ದಾರೆ. ಇದರ ಜೊತೆ ಜೊತೆಗೆನೇ ಬಿಜೆಪಿ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿದ್ದ ಎಂಎಲ್ಸಿ ಎಚ್ ವಿಶ್ವನಾಥ್ ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್ ಪಡಸಾಲೆಯಲ್ಲಿ ಇಟ್ಟಾಗಿದೆ. ಹೀಗಾಗಿ ಇನ್ನುಳಿದ ಪ್ರಮುಖ ವಲಸಿಗ ಸಚಿವರ ನಡೆ ಬಗ್ಗೆಯೂ ಅನೇಕರಿಗೆ ಅನುಮಾನವಿದೆ.
ಆಣೆ ಪ್ರಮಾಣ ಮಾಡಿಸಿದ ಮುನಿರತ್ನ!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡೋ ಅಥವಾ ಟಿಕೆಟ್ ಸಿಗದ ಕಾರಣ ಅನೇಕರು ಮತ್ತೊಂದು ಪಕ್ಷಕ್ಕೆ ಜಂಪ್ ಮಾಡುವ ಪರಿಪಾಠ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಅದು ನಡೆಯುವ ಸಾಧ್ಯತೆ ಇದ್ದೇ ಇದೆ. ಈಗಾಗಲೇ ಅನೇಕ ಮಂದಿ ಕಾರ್ಯಕರ್ತರು, ನಾಯಕರು ಒಂದರಿಂದ ಮತ್ತೊಂದು ಪಕ್ಷಕ್ಕೆ ನೆಗೆದಿದ್ದಾರೆ. ಈ ಮಧ್ಯೆ ಅತ್ತ ಕೋಲಾರದಲ್ಲಿ ಇಂತಹ ಘಟನೆ ಸಂಭವಿಸಬಾರದು ಎಂದು ಸಚಿವ ಮುನಿರತ್ನ ಅವರು ಪಕ್ಷದ ಮುಖಂಡರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಟಿಕೆಟ್ಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ಒಂದು ವೇಳೆ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದೇ ಹೋದಲ್ಲಿ ಕಾಂಗ್ರೆಸ್ಗೋ ಅಥವಾ ಜೆಡಿಎಸ್ಗೋ ಜಂಪ್ ಆಗುವ ಬಗ್ಗೆಯೂ ಅನೇಕ ಮುಖಂಡರು ಪ್ಲಾನ್ ಹಾಕ್ಕೊಂಡಿದ್ದಾರೆ. ಹೀಗಾಗಿ ಇಂತಹ ಪರಿಸ್ಥಿತಿ ಬರಬಾರದು ಎನ್ನುವ ಮುಂದಾಲೋಚನೆಯಿಂದ ಸಚಿವ ಮುನಿರತ್ನ ಅವರು ಮಾಜಿ ಶಾಸಕ ಸೇರಿದಂತೆ ಆರು ಮಂದಿಯಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ರೆಸಾರ್ಟ್ನಲ್ಲಿ ಆಣೆ ಪ್ರಮಾಣ!
ಬಂಗಾರಪೇಟೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮಾಜಿ ಶಾಸಕರಾದ ಎಂ ನಾರಾಯಣ ಸ್ವಾಮಿ, ವೆಂಕಟ ಮುನಿಯಪ್ಪ, ಬಿವಿ ಮಹೇಶ್, ವಿ ಶೇಷು ಹಾಗೂ ಅಮರೇಶ್ ಸೇರಿದಂತೆ ಆರು ಮಂದಿ ಬಿಜೆಪಿಯಿಂದ ಟಿಕೆಟ್ಗೆ ಪೈಪೋಟಿ ನಡೆಸಿದ್ದು, ಒಂದು ವೇಳೆ ಸೀಟ್ ಸಿಗದೇ ಹೋದಲ್ಲಿ ಪಕ್ಷಾಂತರ ಆಗುವ ಭೀತಿ ಬಿಜೆಪಿ ನಾಯಕರಿಗೆ ಎದುರಾಗಿದೆ. ಹೀಗಾಗಿ ಸಚಿವ ಮುನಿರತ್ನ ಸಮ್ಮುಖದಲ್ಲಿ ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ನಿನ್ನೆ ಟಿಕೆಟ್ ಆಕಾಂಕ್ಷಿಗಳಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಪಕ್ಷಾಂತರ ಮಾಡೋದ್ರಲ್ಲಿ ಎಕ್ಸ್ಪರ್ಟ್ ಎಂ ನಾರಾಯಣಸ್ವಾಮಿ!
ಅಂದ ಹಾಗೆ ಮಾಜಿ ಶಾಸಕ ಎಂ ನಾರಾಯಣ ಸ್ವಾಮಿ 2018ರಲ್ಲಿ ಬಿಜೆಪಿಯಿಂದ ಟಿಕೆಟ್ ತಪ್ಪಿದ್ದಕ್ಕೆ ನೇರವಾಗಿ ಜೆಡಿಎಸ್ಗೆ ಪಕ್ಷಾಂತರ ಮಾಡಿದ್ದರು. ಬಳಿಕ ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಎಂ ನಾರಾಯಣ ಸ್ವಾಮಿ ಬಿಜೆಪಿಯಿಂದ ಟಿಕೆಟ್ ನಿರೀಕ್ಷಿಸಿದ್ದು, ಇದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹೀಗಾಗಿ ಒಂದು ವೇಳೆ ಟಿಕೆಟ್ ಸಿಗದೇ ಹೋದಲ್ಲಿ ಮತ್ತೆ ಜೆಡಿಎಸ್ಗೆ ಹೋಗುವ ಸಾಧ್ಯತೆ ಇದ್ದು, ಇದೇ ಭೀತಿಯಿಂದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು, ‘ಕೋಲಾರಮ್ಮ ದೇವಿ ಆಣೆ ಪಕ್ಷಕ್ಕೆ ದ್ರೋಹ ಮಾಡಲ್ಲ, ಪಕ್ಷ ಬಿಟ್ಟು ಹೋಗಲ್ಲ’ ಎಂದು ಆಣೆ ಮಾಡಿಸಿದ್ದಾರೆ.
ಈ ವೇಳೆ ಸಂಸದ ಮುನಿಸ್ವಾಮಿ, ವರ್ತೂರು ಪ್ರಕಾಶ್, ವೆಂಕಟ ಮುನಿಯಪ್ಪ. ಬಿ.ವಿ ಮಹೇಶ್, ಸಂಪಂಗಿ, ಮಂಜುನಾಥ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ