ಶಿವಮೊಗ್ಗ(ಡಿ.02): ಲವ್ ಜಿಹಾದ್ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ಗೆ ಹೋಲಿಸಿ ಮಾತನಾಡಿದ್ದಕ್ಕೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಮೊಮ್ಮಕ್ಕಳು ಇದ್ದಾರೋ ಗೊತ್ತಿಲ್ಲ. ಹೀಗಾಗಿ ಅವರಿಗೆ ಲವ್ ಜಿಹಾದ್ ಕಷ್ಟ ಗೊತ್ತಿಲ್ಲ ಎಂದು ಹೇಳಿದರು. ಕ್ರಾಸ್ ಬ್ರೀಡ್ ಪದ ಹೇಳೋಕೆ ನಾಚಿಕೆ ಆಗುತ್ತದೆ. ನಾವು ಕ್ರಾಸ್ ಬ್ರೀಡ್ ಎನ್ನುವ ಪದ ಬಳಸುವುದು ನಾಯಿಗಳಿಗೆ ಮಾತ್ರ, ಮನುಷ್ಯರಿಗೆ ನಾವು ಈ ರೀತಿಯ ಪದಗಳನ್ನು ಬಳಸುವುದಿಲ್ಲ ಎಂದಿದ್ದಾರೆ.
ಇಂದಿರಾಗಾಂಧಿ ಅವರು ಫಿರೋಜ್ ಗಾಂಧಿಯವರನ್ನು ಮದುವೆ ಆಗಿದ್ದನ್ನು ಕ್ರಾಸ್ ಬ್ರೀಡ್ ಅಂತೀರಾ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ. ರಾಜೀವ್ ಗಾಂಧಿ ಸೋನಿಯಾ ಗಾಂಧಿ ಮದುವೆ ಆದರು. ಇದನ್ನು ಕ್ರಾಸ್ ಬ್ರೀಡ್ ಅಂತೀರಾ, ಪ್ರಿಯಾಂಕಾ ಗಾಂಧಿ ರಾಬರ್ಟ್ ವಾದ್ರಾ ಅವರನ್ನು ಮದುವೆಯಾದರು. ಹಾಗಾದ್ರೆ ಇದನ್ನು ಕ್ರಾಸ್ ಬ್ರೀಡ್ ಅಂತಾ ಕರೆಯುತ್ತೀರಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ. ಮುಸ್ಲಿಂರನ್ನು ಸಂತೃಪ್ತಿ ಪಡಿಸಬಹುದು ಎಂಬ ಒಂದೇ ಕಾರಣಕ್ಕೆ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕ್ರಾಸ್ ಬ್ರೀಡ್ ಎನ್ನುವ ಪದವನ್ನು ದಯವಿಟ್ಟು ಸಿದ್ದರಾಮಯ್ಯ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾವು ಯಾರನ್ನು ವಿರೋಧಿಸಿ ಬಂದೆವೋ, ಅವರೇ ಈಗ ಬಿಎಸ್ವೈಗೆ ಗೆಳೆಯರಾಗಿದ್ದಾರೆ; ಹಳ್ಳಿಹಕ್ಕಿ ಬೇಸರ
ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತವಾದ ಸ್ಥಾನವಿದೆ. ನಿಮಗೆ ಹೆಣ್ಣು ಅಂದರೆ ಕೇವಲ ಕಾಮದ ವಸ್ತು ಅನಿಸುತ್ತೆ ಎಂದು ಕಿಡಿಕಾರಿದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯ ವಿರೋಧ ಪಕ್ಷದ ನಾಯಕರಾಗಿದ್ದೀರಾ, ಈ ರೀತಿಯ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೆ ಅಯೋಗ್ಯರು ಎಂದು ಕಿಡಿಕಾರಿದ ಅವರು, ಸಿದ್ದರಾಮಯ್ಯ ಇಡೀ ಸಮಾಜದ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಗೋ ಹತ್ಯೆ ನಿಷೇಧ ಕಾನೂನಿಗೆ ಬಗ್ಗೆ ಸಹ ಮಾತನಾಡಿದ್ದಾರೆ. ವಯಸ್ಸಾದ ಗೋವುಗಳನ್ನು ಬಿಜೆಪಿಯವರು ಮನೆಯಲ್ಲಿ ಇಟ್ಟುಕೊಳ್ಳುತ್ತಾರಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಗೋವುಗಳು ನಮಗೆ ತಾಯಿ ಇದ್ದ ಆಗೆ, ವಯಸ್ಸಾದ ಮೇಲೆ ಅವುಗಳನ್ನು ನೋಡಿಕೊಳ್ಳಬೇಕು. ಸಿದ್ದರಾಮಯ್ಯ ಅವರ ತಾಯಿಗೆ ವಯಸ್ಸಾಗಿದೆ ಅಲ್ಲವೇ, ಹಾಗಾದ್ರೆ ಅವರು ಅವರ ತಾಯಿನಾ ಏನು ಮಾಡುತ್ತಾರೆ, ತೆಗೆದುಕೊಂಡು ಹೋಗಿ ಎಲ್ಲಾದರೂ ಬಿಟ್ಟಿ ಬಂದಿದ್ದಾರಾ ಎಂದು ಪ್ರಶ್ನಿಸಿದರು.
ಗೋವುಗಳ ವಿಚಾರದಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯ ವಹಿಸಿದ್ದೇ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದ್ದೆ ಸಿದ್ದರಾಮಯ್ಯನವರಿಂದ. ಆರ್ ಎಸ್ ಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯೋಗ್ಯತೆಯೇ ಇಲ್ಲ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ