ಯಾದಗಿರಿ: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಬಗ್ಗೆ ಹೇಳಿಕೆ ನೀಡಿ ಕಾಂಗ್ರೆಸ್ಸಿಗರ (Congress) ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಮತ್ತೆ ಬೆಂಕಿಗೆ ತುಪ್ಪ ಸುರಿವಂತ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮತ್ತೆ ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ (Mekedatu Padayatra) ಬಗ್ಗೆ ಸಚಿವರು ವ್ಯಂಗ್ಯವಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಅತ್ತೆ-ಸೊಸೆ ಇದ್ದಂತೆ. ಅತ್ತೆ, ಸೊಸೆಯಾದವರು ತಾಯಿ, ಮಗಳಂತೆ ಇರಬೇಕು. ಅತ್ತೆ ಸಾಯಿಲಿ ಎಂದು ಸೊಸೆ ಕಾಯುತ್ತಿದ್ದಾರೆ. ಸೊಸೆ ಯಾವಾಗ ಊರಿಗೆ ಹೋಗ್ತಾಳೆ ಎಂದು ಅತ್ತೆ ಕಾಯ್ತಿರ್ತಾಳೆ. ಆ ರೀತಿ ಅವರ ಸಂಬಂಧ ಇದೆ ಎಂದು ಅತ್ತೆ-ಸೊಸೆ ಸಂಬಂಧಕ್ಕೆ ಹೋಲಿಸಿ ಕುಹಕವಾಡಿದರು.
ಇದನ್ನೂ ಓದಿ: ಅಂಬರೀಶ್ ಜೊತೆ ಸೇರಿಕೊಂಡು ಮಾಡಬಾರದ್ದನ್ನೂ ಮಾಡಿದ್ದೇನೆ: ಗುಟ್ಟು ಬಾಯ್ಬಿಟ್ಟ CM Bommai
ಕಾಂಗ್ರೆಸ್ ಎಂದೆಂದಿಗೂ ಅಧಿಕಾರಕ್ಕೆ ಬರಲ್ಲ
ಉದ್ಯೋಗ ಇಲ್ಲದವರು ಏನಾದರು ಮಾಡಬೇಕಲ್ಲ. ಕಾಂಗ್ರೆಸ್ನವರಿಗೆ ಯಾವುದೇ ಉದ್ಯೋಗ ಇಲ್ಲ, ಹಾಗಾಗಿ ಪಾದಯಾತ್ರೆ, ಪಾದಯಾತ್ರೆ ಅಂತ ಹೊರಟಿದ್ದಾರೆ. ಅಧಿಕಾರದಲ್ಲಿದ್ದಾಗ ಮೇಕೆದಾಟು ಮಾಡಬೇಡಿ ಅಂತ ಯಾರು ಹೇಳಿದ್ರು. ಈಗ ಮೇಕೆದಾಟು ಒಂದು, ಎರಡು ಅಂತ ಹೊರಟಿದ್ದಾರೆ. ಕಾಂಗ್ರೆಸ್ನವರು ಪಾದಯಾತ್ರೆಯಿಂದ ಅಧಿಕಾರದ ಕನಸು ಕಾಣ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದೆಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂ-ಮುಸ್ಲಿಂ ಗಲಾಟೆಗಳಿಗೆ ಕಾಂಗ್ರೆಸ್ ಕಾರಣ
ಕಾಂಗ್ರೆಸ್ನವರಿಗೆ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ. ಅವರ ಸರ್ಕಾರ ಇದ್ದಾಗ ಯೋಜನೆ ಯಾಕೆ ಜಾರಿ ಮಾಡಲಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ. ರಾಜ್ಯದಲ್ಲಿ ಹಿಜಾಬ್, ಹಿಂದೂ-ಮುಸ್ಲಿಂ ಗಲಾಟೆಗಳು ಆಗಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. ಹಿಂದೂ, ಮುಸ್ಲಿಂ ದೂರದೂರವಾಗಬೇಕು ಅಂತ ರಾಜಕೀಯ ಮಾಡ್ತಿದ್ದಾರೆ. ಮುಸ್ಲಿಂ ಓಟ್ ಬ್ಯಾಂಕ್ ಗಾಗಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಜಾತಿಗಳನ್ನು ಒಡೆದು ಅಧಿಕಾರ ಕಳೆದುಕೊಂಡಿದೆ. ಇದೀಗ ಹಿಂದುದೂ, ಮುಸ್ಲಿಂ ವಿವಾದ ಹೆಚ್ಚಿಸಿ, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ಮೇಲೆ ರಾಷ್ಟ್ರ ದ್ರೋಹಿ ಕೇಸ್ ಹಾಕಿ
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮೊದಲ ವ್ಯಕ್ತಿ ಡಿ.ಕೆ.ಶಿವಕುಮಾರ್, ಆತನ ಮೇಲೆ ರಾಷ್ಟ್ರ ದ್ರೋಹಿ ಕೇಸ್ ಹಾಕಿ ಒಳಗೆ ಹಾಕಬೇಕು ಎಂದು ಆಪಾದಿಸಿದರು. ಮತ್ತೆ ಕೇಸರಿ ಧ್ವಜ ಜಪ ಮಾಡಿದ್ದ ಸಚಿವ ಈಶ್ವರಪ್ಪ,ಸ್ವತಂತ್ರ ಹೋರಾಟದಲ್ಲಿ ಕೇಸರಿ ಧ್ವಜ ಇತ್ತು ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ನಾನು ಏನು ಮಾತನಾಡಿದ್ದೇನೆ ಎಂಬುವುದು ಸಿಎಂ ಬೊಮ್ಮಾಯಿಗೆ ಗೊತ್ತಿದೆ. ಅದನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಿಎಂ ಹೇಳಿ ಮನವೊಲಿಸಲಿದ್ದಾರೆ ಎಂದರು.
ಇದನ್ನೂ ಓದಿ: Mekedatu: "ಪಾದಯಾತ್ರೆ ಮಾಡಿದ್ರೆ ಸಿಎಂ ಆಗ್ತೀನಿ ಎನ್ನುವ ಭ್ರಮೆ ಬೇಡ" -ಡಿಕೆಶಿಗೆ ಪ್ರಹ್ಲಾದ್ ಜೋಶಿ ಟಾಂಗ್
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರು ಜೊತೆ ಮಾತನಾಡಿದ್ದೇನೆ. ಓಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಅನ್ನೋದು ನಮ್ಮ ನಿರ್ಧಾರ. ಈ ಬಗ್ಗೆ ಸಿಎಂ ಜೊತೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಯಾವಾಗ ಚುನಾವಣೆ ನಡೆಯುತ್ತದೆ ಅನ್ನೋದು ಈಗಲೇ ಹೇಳಲು ಆಗಲ್ಲ ಎಂದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಇಂದಿನಿಂದ ಪುನಾರಂಭಗೊಂಡಿದ್ದು, ಮಾ.3ರವರೆಗೆ ನಡೆಯಲಿದೆ. ಮಾ.4ರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಮಾ.3ರವರೆಗೆ ಮಾಡಲು ನಿರ್ಧರಿಸಿದ್ದಾರೆ. ಮಾ.3ರಂದು ಬಸವನಗುಡಿಯಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಯಾಗುವಂತೆ ಡಿಕೆ ಶಿವಕುಮಾರ್ ಕಡೆ ನೀಡಿದ್ದಾರೆ. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಆದಷ್ಟು ಮೆಟ್ರೋ ಬಳಸುವಂತೆ ಡಿಕೆಶಿ ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ