news18-kannada Updated:December 9, 2020, 12:32 PM IST
ಬಿ.ಸಿ. ಪಾಟೀಲ್.
ಬೆಂಗಳೂರು(ಡಿ.09): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ನಿನ್ನೆ ಭಾರತ್ ಬಂದ್ಗೆ ಕರೆ ನೀಡಿದ್ದವು. ನಿನ್ನೆ ಕರ್ನಾಟಕ ಸರಿ ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ಇಂದು ರೈತರು ಬೆಂಗಳೂರಿನಲ್ಲಿ ಬಾರುಕೋಲು ಚಳುವಳಿ ನಡೆಸಲು ಮುಂದಾಗಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ. ಈ ಕುರಿತು ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಬಾರುಕೋಲು ಹಿಡಿದು ಚಳುವಳಿ ಮಾಡುವಂತದ್ದು ಏನು ಆಗಿಲ್ಲ. ದೇಶ ಹಾಗೂ ರಾಜ್ಯದ ರೈತರಿಗಾಗಿ ಕಾಯ್ದೆ ತರಲಾಗಿದೆ. ಆದರೆ ರೈತರು ಈ ಚಳುವಳಿ ಮಾಡೋದು ಅನಗತ್ಯ ಎಂದು ಹೇಳಿದರು.
ಇನ್ನು, ಅಧಿವೇಶನ ಮುಗಿದ ಬಳಿಕ ರಾಜ್ಯ ಪ್ರವಾಸ ಮಾಡುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದರು. ನಾನು, ಪಶುಸಂಗೋಪನೆ, ಸಹಕಾರಿ, ಕಂದಾಯ ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಕಾಯ್ದೆ ಅನುಕೂಲಕತೆ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಡುತ್ತೇವೆ.
Sonia Gandhi Birthday: ಇಂದು ಸೋನಿಯಾ ಗಾಂಧಿ ಹುಟ್ಟುಹಬ್ಬ: ರೈತರ ಪ್ರತಿಭಟನೆ ಕಾರಣ ಈ ಬಾರಿ ಆಚರಣೆ ಬೇಡವೆಂದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ
ಈಗಾಗಲೇ ಒಂದು ಸಾರಿ ಪ್ರವಾಸ ಮಾಡಿದ್ದೇವೆ. ಆದರೆ ಎಲ್ಲಿಯೂ ಕೂಡ ಯಾವ ರೈತರಿಂದಲೂ ಕಾಯಿದೆ ಬಗ್ಗೆ ಅಪಸ್ವರ ಬಂದಿಲ್ಲ. ವಿಧಾನಸಭೆ ಅಧಿವೇಶನ ನಡೆಯುವಾಗ ಇಂತಹ ಪ್ರತಿಭಟನೆ ಸಹಜ. ಇದರಿಂದ ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಯಿದೆ ಬದಲಾವಣೆ ಇಲ್ಲ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ ಎಂದರು.
ಇನ್ನು, ರಾಹುಲ್ ಗಾಂಧಿ ಎಂದಾದರೂ ಹೊಲಕ್ಕೆ ಹೋಗಿ ಕೆಸರು ತುಳಿದಿದ್ದಾರಾ...? ಅವರಿಗೆ ಹೊಲ ಉಳುಮೆ, ಬಿತ್ತುವುದು ಏನಾದರೂ ಗೊತ್ತಿದೆಯಾ..? ಅವರಿಗೆ ಯಾವ ಬೆಳೆ ಅನ್ನೋದೇ ಗೊತ್ತಿಲ್ಲ. ರೈತರು ಬೆಳೆಯುವ ಬೆಳೆಗಳ ಬಗ್ಗೆ ಅವರ ಮುಂದೆ ಇಡಿ. ಅದನ್ನು ಗುರುತಿಸಲಿ ಸಾಕು. ಇವತ್ತಿಗೂ ರಾಹುಲ್ ಗಾಂಧಿ ಗೆ ಹಾಲು ಎಲ್ಲಿ ಬರುತ್ತೆ ಎಂಬುದೇ ಗೊತ್ತಿಲ್ಲ. ಅಕ್ಕಿ ಎಲ್ಲಿಂದ ಬರುತ್ತೆ ಎಂದು ಕೇಳಿದ್ರೆ ಭತ್ತದಿಂದ ಬರುತ್ತೆ ಎಂದು ಹೇಳಲು ಗೊತ್ತಿಲ್ಲ. ಪಾಪ ಅವರು ಎಲ್ಲೋ ಹೈಫೈ ನಲ್ಲಿ ಫಾರಿನ್ ಕಂಟ್ರೀಲಿ ಓದಿಕೊಂಡು ಬಂದಿದ್ದಾರೆ. ಹೀಗಾಗಿ ಅವರಿಗೆ ರೈತನ ಕಷ್ಟ ಏನು ಗೊತ್ತು ಎಂದು ರಾಹುಲ್ ಗಾಂಧಿ ವಿರುದ್ಧ ಬಿಸಿ ಪಾಟೀಲ್ ವ್ಯಂಗ್ಯ ಮಾಡಿದರು.
ಇನ್ನು, ರೈತರ ಹೋರಾಟದಲ್ಲಿ ಕಾಂಗ್ರೆಸ್ ನ ಚಳುವಳಿ ದ್ವಂದ್ವ ನಿಲುವಿನಿಂದ ಕೂಡಿದೆ. ಈ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ತಪ್ಪಿಗೆ ಸಿಲುಕಿದ್ದಾರೆ. ಹಿಂದೆ ಎಪಿಎಂಸಿ ಕಾಯಿದೆ ಬಗ್ಗೆ ಪತ್ರ ಬರೆದು ಇವಾಗ ತಪ್ಪಿಗೆ ಸಿಲುಕಿದ್ದಾರೆ. ಹೀಗಾಗಿ ಇವರದ್ದು ಬರೀ ರಾಜಕೀಯ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
Published by:
Latha CG
First published:
December 9, 2020, 12:31 PM IST