ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹಾಲಿನ ಕೊರತೆಯ (Milk Shortage) ಬಿಸಿ ಹೋಟೆಲ್ಗಳಿಗೆ ತಟ್ಟುತ್ತಿದೆ. ಬೇಡಿಕೆ ಅಷ್ಟು ನಂದಿನಿ ಹಾಲು (Nandini Milk) ಹಾಗೂ ಅದರ ಉತ್ಪನ್ನ ಸಮರ್ಪಕವಾಗಿ ಸಿಗುತ್ತಿಲ್ಲ. ಹೋಟೆಲ್ ಮಾತ್ರವಲ್ಲ ಗ್ರಾಹಕರಿಗೂ (Customer) ಈಗ ಹಾಲಿನ ಕೊರತೆ ಬಿಸಿ ಮುಟ್ಟಿದೆ. ಹೌದು, ರಾಜಧಾನಿ ಬೆಂಗಳೂರಿನ ಹೋಟೆಲ್ಗಳಿಗೆ (Hotel) ಬೇಡಿಕೆಯಷ್ಟು ನಂದಿನಿ ಹಾಲು ಸಿಗುತ್ತಿಲ್ಲ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೊರತೆ ಕಳೆದೊಂದು ವಾರದಿಂದ ಹೋಟೆಲ್ಗಳಿಗೆ ತಟ್ಟಲಾರಂಭಿಸಿದೆ. ಪ್ರತಿನಿತ್ಯ ಸುಮಾರು 6 ಲಕ್ಷ ಲೀಟರ್ ಹಾಲು ಮತ್ತು ಅದರ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದರೆ, ಕಳೆದ ಎರಡು ವಾರಗಳಿಂದ ಶೇಕಡ 20ರಷ್ಟು ಹಾಲಿನ ಕೊರತೆಯಾಗುತ್ತಿದೆ.
ಹೊರ ರಾಜ್ಯಗಳಿಗೆ ಹಾಲು ಸರಬರಾಜು ಮಾಡದಂತೆ ಪತ್ರ
ಬೆಂಗಳೂರಿನ ಹೋಟೆಲ್ಗಳಲ್ಲಿ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುವುದರಿಂದ ಹಾಲಿನ ಕೊರತೆ ಸಾಕಷ್ಟು ಸಂಕಷ್ಟ ತಂದಿದೆ. ಹೊರ ರಾಜ್ಯಗಳಿಗೆ ನಂದಿನಿ ಹಾಲು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಹೋಟೆಲ್ ಮಾಲೀಕರ ಸಂಘ ಕೆಎಂಎಫ್ ಪತ್ರ ಬರೆದಿದೆ.
ಇದನ್ನೂ ಓದಿ: Milk Price: ಯುಗಾದಿ ಮುನ್ನವೇ ರೈತರಿಗೆ ಬಂಪರ್ ಗಿಫ್ಟ್; ಹಾಲು ಖರೀದಿ ದರ ₹2.10 ಏರಿಕೆ
ದೇಶದಲ್ಲಿ ಚರ್ಮ ಗಂಟು ರೋಗ, ನೆರೆ ಪರಿಸ್ಥಿತಿಯಿಂದ ಉತ್ತರ ಭಾರತದ ರಾಜ್ಯಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ದಕ್ಷಿಣ ಭಾರತದಲ್ಲೂ ಹಾಲಿನ ಉತ್ಪಾದನೆ ಕೊಂಚ ಇಳಿಕೆಯಾಗಿದೆ. ಆದರೆ ಕರ್ನಾಟಕದಿಂದ ಉತ್ತರ ಭಾರತದ ರಾಜ್ಯಗಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಳುಹಿಸುತ್ತಿದ್ದು, ರಾಜ್ಯದಲ್ಲಿ ಅಭಾವ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಹೋಟೆಲ್ಗಳಿಗೆ 3 ಲಕ್ಷ ಲೀಟರ್, 3 ಲಕ್ಷ ಲೀಟರ್ ಮೊಸರು, 1.50 ಲಕ್ಷ ಕೆ.ಜಿ ಬೆಣ್ಣೆ ಮತ್ತು ತುಪ್ಪದ ಅಗತ್ಯವಿದೆ. ಹೊರ ರಾಜ್ಯಕ್ಕೆ ಕಳುಹಿಸುತ್ತಿರುವುದರಿಂದ ಅಭಾವ ಎದುರಾಗಿದೆ ಎನ್ನಲಾಗಿದೆ.
ಮಾರುಕಟ್ಟೆ ಕಳೆದುಕೊಳ್ಳುವ ಸ್ಥಿತಿಗೆ ತಲುಪುವ ಸಾಧ್ಯತೆ
ನಗರ ವಾಸಿಗಳು ಕೂಡ ನಂದಿನ ಹಾಲು ಮತ್ತು ನಂದಿನಿ ಉತ್ಪನ್ನಗಳು ಸಿಗದೆ ಕಂಗಾಲಾಗುವಂತೆ ಮಾಡಿದೆ. ಆದರೆ ರಾಜ್ಯದಲ್ಲೇ ಬೇಡಿಕೆ ಹೆಚ್ಚಾಗಿರುವಾಗ ಹೊರ ರಾಜ್ಯಗಳಿಗೆ ಸರಭರಾಜು ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎದ್ದಿದೆ. ಹೋಟೆಲ್ ಉದ್ಯಮದಲ್ಲಿ ನಂದಿನಿಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ.
ಆದರೆ ಈಗ ಹಾಲಿನ ಕೊರತೆಯಿಂದ ಅನಿವಾರ್ಯವಾಗಿ ಬೇರೆ ಹಾಲಿನ ಕಡೆಗೆ ಮುಖ ಮಾಡುವಂತಾಗಿದೆ. ಕೆಎಂಎಫ್ ರಫ್ತು ಕಡಿಮೆ ಮಾಡಿ, ಸ್ಥಳೀಯವಾಗಿ ಹಾಲು ಪೂರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಕಳೆದುಕೊಳ್ಳುವ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ.
ರಾಜಧಾನಿಯಲ್ಲಿ ಹಾಲಿನ ಕೊರತೆಗೆ ಕಾರಣವೇನು?
ಹೊರ ರಾಜ್ಯಗಳಲ್ಲಿ ಹಾಲು ಉತ್ಪಾದನೆ ಕುಸಿತವಾಗಿದೆ. ಅಲ್ಲದೆ ರಾಜ್ಯ ಸೇರಿದಂತೆ ದೇಶದಲ್ಲಿ ಸಾವಿರಾರರು ಜಾನುವಾರುಗಳು ಚರ್ಮ ಗಂಟು ರೋಗಕ್ಕೆ ಬಲಿಯಾಗಿವೆ. ಕೆಎಂಎಫ್ ತಮಿಳುನಾಡು, ಆಂಧ್ರಪ್ರದೇಶ, ಸೇರಿ ಬೇರೆ ರಾಜ್ಯಗಳಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಣೆ ಮಾಡಿದೆ. ಇತ್ತು ಗುಜರಾತ್, ಕರ್ನಾಟಕದಲ್ಲೂ ಹಾಲು ಉತ್ಪಾದನೆ ಕುಸಿತವಾಗಿದ್ದು, ಕೆಎಂಎಫ್ ಹಾಲು ಸಂಗ್ರಹದಲ್ಲೂ ಗಣನೀಯ ಇಳಿಕೆಯಾಗಿದೆ.
ಇದನ್ನೂ ಓದಿ: PM Modi: ಫೈಟರ್ ರವಿ ಯಾರು ಅಂತ ಮೋದಿಗೆ ಗೊತ್ತಿರಲಿಲ್ಲ, ಇದಕ್ಕೆ ಪ್ರಧಾನಿ ಜವಾಬ್ದಾರರಲ್ಲ; ಸಚಿವೆ ಶೋಭಾ ಕರಂದ್ಲಾಜೆ
ತಮಿಳುನಾಡು, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ, ಜಮ್ಮುಕಾಶ್ಮೀರ, ಅಸ್ಸಾಂ, ಮಿಜೋರಾಂ ಸೇರಿ ಅನೇಕ ರಾಜ್ಯಗಳಿಗೆ ಕೆಎಂಎಫ್ ಉತ್ಪನ್ನಗಳನ್ನು ರಪ್ತು ಮಾಡಲಾಗುತ್ತಿದೆ. ಅಲ್ಲದೆ, ಮಲೇಷ್ಯಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಜಾರ್ಜಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳಿಗೆ ಕೆಎಂಎಫ್ ಹಾಲು ಹಾಗೂ ಉತ್ಪನ್ನ ರಪ್ತು ಮಾಡಲಾಗುತ್ತಿದೆ.
ಕೆಎಂಎಫ್ ಉತ್ಪನ್ನಗಳ ಬೆಲೆ ಕಡಿಮೆ ಇರುವ ಕಾರಣ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಮೇವಿನ ಕೊರತೆ, ಬೇಸಿಗೆಯಲ್ಲಿ ಶೇ.10ರಷ್ಟು ಹಾಲಿನ ಪೂರೈಕೆ, ಸಂಗ್ರಹ ಇಳಿಕೆಯಾಗಿರುವುದು ಹಾಲಿನ ಕೊರತೆ ಹೆಚ್ಚಾಗಲು ಪ್ರಮುಖ ಕಾರಣಗಳಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ