ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಕಾಂಗ್ರೆಸ್ (Congress) ಟಿಕೆಟ್ನ್ನು ಮಾರಾಟ ಮಾಡಿದ್ದಾರೆ ಎಂದು ಮಾಜಿ ಶಾಸಕ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವ (Mohiuddin Bava) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೇ ಕ್ಷಣದಲ್ಲಿ ತನಗೆ ಟಿಕೆಟ್ ಕೈತಪ್ಪಿ ಇನಾಯತ್ ಅಲಿಗೆ (Inayat Ali) ಕಾಂಗ್ರೆಸ್ ಟಿಕೆಟ್ ಒಲಿದ ಪರಿಣಾಮ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮೊಯ್ದೀನ್ ಬಾವ, ಆರು ತಿಂಗಳ ಹಿಂದೆ ಜಿಲ್ಲೆಗೆ ಬಂದ ಗುತ್ತಿಗೆದಾರನಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳು ಇದ್ದರು. ರಾಹುಲ್ ಗಾಂಧಿಯವರು ಕಳಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ಅಂತ ಹೇಳಿದ್ದರು ಎಂದ ಮೊಯ್ದೀನ್ ಬಾವ, ಯಾವುದೇ ಪ್ರಭಾವ ಇಲ್ಲದೇ ಟಿಕೆಟ್ ಕೊಡೋದಾಗಿ ಹೇಳಿದ್ದರು. ಸಿಇಸಿ ಚೇರ್ ಮೆನ್ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು. 78% ಜನರು ನನಗೆ ಆಶೀರ್ವಾದ ಮಾಡಿದ್ದರು, 7% ಈಗಿನ ಅಭ್ಯರ್ಥಿ ಪರ ಇತ್ತು. ಹೀಗಾಗಿ ಮೋಹನ್ ಪ್ರಕಾಶ್ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಅಂದಿದ್ರು. ಆದರೆ ರಾಹುಲ್ ಗಾಂಧಿ ಕೋಲಾರಕ್ಕೆ ಬಂದಾಗ ಮತ್ತೆ ಇನಾಯತ್ ಆಲಿ ಲಾಬಿ ಮಾಡಿದರೂ ರಾಹುಲ್ ಗಾಂಧಿ ಗಮನ ಕೊಟ್ಟಿಲ್ಲ. ಇದಾದ ಬಳಿಕ ಡಿಕೆಶಿಯವರು ಖರ್ಗೆ ಅವರ ಜೊತೆ ಹೋಗಿ ನನ್ನ ಹೆಸರು ತಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Election Boycott: ಸುಳ್ಯ ಶಾಸಕ ಅಂಗಾರ ವಿರುದ್ಧ ಭುಗಿಲೆದ್ಧ ಆಕ್ರೋಶ; ಹತ್ತಾರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರದ ವಾರ್ನಿಂಗ್!
ಕಾಂಗ್ರೆಸ್ ಪಕ್ಷಕ್ಕೆ ಇದು ಶೇಮ್!
ವಾಮಮಾರ್ಗ ಉಪಯೋಗಿಸಿ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ಮೊಯ್ದೀನ್ ಬಾವ, ಒಬ್ಬ ಗುತ್ತಿಗೆದಾರನನ್ನು ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇದು ಟಿಕೆಟ್ ಮಾರಾಟ, ಕಾಂಗ್ರೆಸ್ ಪಕ್ಷಕ್ಕೆ ಇದು ಶೇಮ್. ಡಿಕೆ ಶಿವಕುಮಾರ್ ನನ್ನನ್ನ ವೈರಿಯಾಗಿ ಕಾಡಿ ಇನಾಯತ್ ಆಲಿಗೆ ಟಿಕೆಟ್ ಕೊಟ್ಟಿದ್ದಾರೆ. ಇನಾಯತ್ ಆಲಿ ಬಿಜೆಪಿ ವಿರುದ್ದ ಹೋರಾಟ ಮಾಡಿಲ್ಲ, ನನ್ನ ಅಭಿಮಾನಿಗಳಿಗೆ ಹೊರಗಡೆಯಿಂದ ಜನ ತಂದು ದುಡ್ಡಿನ ಆಮಿಷ ಒಡ್ಡಿದರು ಎಂದು ಆರೋಪಿಸಿದರು.
ಕಾಂಗ್ರೆಸ್ ಮುಳುಗಿಸಿದ ಎಂಎಲ್ಸಿ ಟಿಕೆಟ್ ತಪ್ಪಿಸಿದ್ದಾರೆ!
ಇನ್ನು, ಇನಾಯತ್ ಆಲಿ ಎರಡು ಕೋಟಿ ರೂ. ನ್ಯಾಶನಲ್ ಹೆರಾಲ್ಟ್ಗೆ ಕೊಟ್ಟಿದ್ದಾರಂತೆ. ಇದನ್ನು ಡಿಕೆಶಿ ಸಿಇಸಿ ಸಭೆಯಲ್ಲಿ ರಾಹುಲ್ ಗಾಂಧಿ ಎದುರಲ್ಲೇ ಹೇಳಿದ್ದಾರೆ ಎಂದ ಮೊಯ್ದೀನ್ ಬಾವ, ಕರಾವಳಿ ಭಾಗದ ಕೆಲವರು ವ್ಯವಸ್ಥೆ ಮಾಡಿ ನನ್ನ ಟಿಕೆಟ್ ತಪ್ಪಿಸಿದ್ದಾರೆ. ಏಕೈಕ ಶಾಸಕರಾಗಿ ಮೆರೆಯಬೇಕೆಂಬ ವ್ಯಕ್ತಿ ಟಿಕೆಟ್ ತಪ್ಪಿಸಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಳುಗಿಸಿದ ಎಂಎಲ್ಸಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಶಾಸಕ ಯುಟಿ ಖಾದರ್ ಮತ್ತು ಎಂಎಲ್ಸಿ ಮಂಜುನಾಥ ಭಂಡಾರಿ ವಿರುದ್ದ ಆರೋಪ ಮಾಡಿದರು.
ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?
ಕಾಂಗ್ರೆಸ್ಗೆ ಗುಡ್ಬೈ, ಜೆಡಿಎಸ್ಗೆ ಜೈ!
ಇನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದ ಮೊಯ್ದೀನ್ ಬಾವ, ಕಾರ್ಯಕರ್ತರ ಒತ್ತಾಯದ ಹಿನ್ನೆಲೆ ನಾನು ಜೆಡಿಎಸ್ ಸೇರುತ್ತಿದ್ದೇನೆ. ಮಾನ್ಯ ಕುಮಾರಣ್ಣ ಮತ್ತು ದೇವೇಗೌಡರ ಆಶೀರ್ವಾದ ನನಗೆ ಇದೆ. ಇಂದು ಮಂಗಳೂರು ಉತ್ತರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸ್ತೇನೆ ಎಂದು ಹೇಳಿದರು.
ರಾತ್ರಿ ಎರಡು ಗಂಟೆಯವರೆಗೆ ಖರ್ಗೆಯವರ ಮನೆ ಬಳಿ ಇದ್ದರೂ ಏನೂ ಪ್ರಯೋಜನವಾಗಿಲ್ಲ, ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಇದ್ದಾಗ ಎಲ್ಲಾ ಸರಿ ಇತ್ತು. ಏಕಾಂಕಿಯಾಗಿ ಶಾಸಕನಾಗಬೇಕು ಎಂಬ ವ್ಯಕ್ತಿ ಟಿಕೆಟ್ ತಪ್ಪಿಸಿದ್ದಾರೆ. ಯುಟಿ ಖಾದರ್ಗೆ ನಾನು ಸರ್ವೇ ಪ್ರಕಾರ ಟಿಕೆಟ್ ಕೊಡಿ ಅಂತ ಕೋರಿಕೊಂಡೆ, ಆದರೆ ಅವರು ನನ್ನ ಪರವಾಗಿ ನಿಲ್ಲಲೇ ಇಲ್ಲ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ