ಮಂಗಳೂರು: ಧರ್ಮ ಧರ್ಮಗಳ ನಡುವೆ ಸಾಮರಸ್ಯ (Communal Harmony) ಮೂಡಬೇಕು ಎಂಬ ಮಾತು ಕೇಳುತ್ತಲೆ ಇರುತ್ತೆ. ಆದರೆ ಹೀಗೆ ಸಾಮರಸ್ಯ ಮೂಡಿಸಲು ನಾವೇನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಆದರೆ ನೀವು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada New) ಈ ಸರ್ಕಾರಿ ಶಾಲೆಗೆ ಬಂದರೆ ಈ ಪ್ರಶ್ನೆಯೇ ಹುಟ್ಟುವುದಿಲ್ಲ. ಕಾರಣ ಇಲ್ಲಿಯ ಮುಖ್ಯೋಧ್ಯಾಪಕರು!
ಹೌದು. ವಿದ್ಯಾರ್ಥಿ ದಿನಗಳಿಂದಲೇ ಕೋಮು ಸೌಹಾರ್ದತೆ ಮೂಡಿದರೆ ಮುಂದೆ ಧರ್ಮ-ಕೋಮುಗಳ ನಡುವೆ ಕಲಹಗಳಿಗೆ ಆಸ್ಪದವೇ ಇರುವುದಿಲ್ಲ. ಇದೇ ಕಾರಣಕ್ಕೆ 12 ವರ್ಷಗಳಿಂದ ಮಂಗಳೂರಿನಿಂದ 48 ಕಿಲೋ ಮೀಟರ್ ದೂರದಲ್ಲಿರುವ ಕಟ್ಟದಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ಡಿಸೋಜ ಅವರು ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಧಾರ್ಮಿಕ ಕೇಂದ್ರಗಳಿಗೆ ಮಕ್ಕಳ ಪ್ರವಾಸ!
ಎಡ್ವರ್ಡ್ ಡಿಸೋಜ ಅವರು ತಮ್ಮ ಶಾಲೆಯ ಮಕ್ಕಳನ್ನು ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಕರೆದೊಯ್ಯುತ್ತಾರೆ. ಅಲ್ಲಿಯ ಆಚಾರ, ವಿಚಾರ, ಸಂಪ್ರದಾಯಗಳನ್ನು ಸ್ವತಃ ಆಯಾ ಧಾರ್ಮಿಕ ಕೇಂದ್ರಗಳಲ್ಲಿಯೇ ತಿಳಿದುಕೊಂಡರೆ ಎಲ್ಲರೂ ನಮ್ಮವರೇ ಎಂಬ ಭಾವ ಮಕ್ಕಳಲ್ಲಿ ಮೂಡುತ್ತದೆ ಎಂಬ ಯೋಚನೆ ಕಟ್ಟದಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ಡಿಸೋಜ ಅವರದ್ದು.
15 ಮಕ್ಕಳ ಟ್ರಿಪ್ ಶುರುವಾಗಿದ್ದು ಮಸೀದಿಯಿಂದ!
ಏಪ್ರಿಲ್ 12 ರಂದು ಇದೇ ರೀತಿ 15 ಮಕ್ಕಳನ್ನು ವಿವಿಧ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ದಿದ್ದಾರೆ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ಡಿಸೋಜ. ಈ 15 ವಿದ್ಯಾರ್ಥಿಗಳ ಧಾರ್ಮಿಕ ಸೌಹಾರ್ದತೆಯ ಪ್ರವಾಸ ಶುರುವಾಗಿದ್ದೇ ಗುರುವಾಯನಕೆರೆಯ ಮಸೀದಿಯಿಂದ. ಈ ಮಸೀದಿಯಲ್ಲಿ ನಮಾಜ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ವಿದ್ಯಾರ್ಥಿಗಳು ಮುಖತಃ ತಿಳಿದುಕೊಂಡಿದ್ದಾರೆ. ಮಸೀದಿಯಿಂದ ವಿದ್ಯಾರ್ಥಿಗಳು ಮುಂದೆ ಹೊರಟಿದ್ದೇ ಹಳೇಕೋಟೆಯಲ್ಲಿರುವ ಶಿರಡಿ ಸತ್ಯ ಸಾಯಿ ಕೇಂದ್ರಕ್ಕೆ!
ಇದನ್ನೂ ಓದಿ: Mangaluru Mobile Theft Helpline: ಮೊಬೈಲ್ ಕಳ್ಳತನವಾದ್ರೆ ಈ ನಂಬರ್ಗೆ ಮೆಸೇಜ್ ಮಾಡಿ
ಬೆಳ್ತಂಗಡಿ ಚರ್ಚ್ ಆದ್ಮೇಲೆ ಶ್ರೀ ರಾಮ ಕೇಂದ್ರ!
ನಂತರ ಅಲ್ಲಿಂದ ಬೆಳ್ತಂಗಡಿಯ ಸೈರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ನ ಸೇಂಟ್ ಲಾರೆನ್ಸ್ ಕ್ಯಾಥೆಡ್ರಲ್ಗೆ ವಿದ್ಯಾರ್ಥಿಗಳ ಪ್ರವಾಸ ಮುಂದುವರೆದಿದೆ. ಅಲ್ಲಿ ಮಕ್ಕಳು ಬೆಳ್ತಂಗಡಿ ಡಯಾಸಿಸ್ನ ಬಿಷಪ್ ಲಾರೆನ್ಸ್ ಮುಕ್ಕುಜಿ ಅವರೊಂದಿಗೆ ಸಂವಾದ ನಡೆಸಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳು ಕನ್ಯಾಡಿಯ ಶ್ರೀ ರಾಮ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಶ್ರೀ ರಾಮ ಕೇಂದ್ರದಲ್ಲಿ ಹಿಂದೂ ಧರ್ಮದ ಒಳನೋಟಗಳನ್ನು ಅರಿತುಕೊಂಡಿದ್ದಾರೆ.
ಮಂಜುನಾಥ ಸ್ವಾಮಿಯ ದರ್ಶನ
ಮುಂದೆ ಅಲ್ಲಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಕ್ಷೇತ್ರ ದರ್ಶನ ಪೂರ್ಣಗೊಂಡಿದೆ. ಕಳೆದ ವರ್ಷಗಳಲ್ಲಿ ನಡೆಸಿದ ಇದೇ ಧಾರ್ಮಿಕ ಪ್ರವಾಸದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಸಂವಾದವನ್ನು ಸಹ ವಿದ್ಯಾರ್ಥಿಗಳು ನಡೆಸಿದ್ದರು.
ಇದನ್ನೂ ಓದಿ: Dakshina Kannada: ಫಸ್ಟ್ ಕ್ಲಾಸ್ನಲ್ಲಿ ಪಿಯುಸಿ ಪಾಸ್ ಆದ ಗ್ರಾಮ ಪಂಚಾಯತ್ ಅಧ್ಯಕ್ಷೆ!
ಎಲ್ಲರ ಪ್ರೋತ್ಸಾಹವೇ ಕಾರಣವಂತೆ
ಶಾಲೆಯ ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಮತ್ತು ಪೋಷಕರು ಈ ಧಾರ್ಮಿಕ ಪ್ರವಾಸಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ಮುಖ್ಯಾಧ್ಯಾಪಕರ ಡಿಸೋಜಾ ಖುಷಿ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ