ಮಂಗಳೂರು ದೋಣಿ ದುರಂತ; 6 ಮಂದಿ ಮೀನುಗಾರ ಮೃತದೇಹ ಪತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Mangalore Boat Tragedy : ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ‌ ಭೇಟಿ ನೀಡಿದರು.

  • Share this:

ಮಂಗಳೂರು(ಡಿಸೆಂಬರ್​. 02): ಅರಬ್ಬಿ ಸಮುದ್ರದಲ್ಲಿ ನಡೆದ ಮೀನುಗಾರಿಕಾ ದೋಣಿ ದುರಂತ ಪ್ರಕರಣದಲ್ಲಿ ಆರು ಮಂದಿ ಮೀನುಗಾರರ ಶವಗಳು ಪತ್ತೆಯಾಗಿದೆ. ಮುಳುಗು ತಜ್ಞರು, ಸ್ಥಳೀಯ ಮೀನುಗಾರರ ಕಾರ್ಯಾಚರಣೆಯಿಂದ ಶವ ದೊರಕಿದೆ. ಮೀನುಗಾರಿಕಾ ಸಚಿವರು ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸೋಮವಾರ ತಡರಾತ್ರಿ ಅರಬ್ಬಿಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಮೀನುಗಾರಿಕಾ ಬೋಟ್‌ನಿಂದ ನಾಪತ್ತೆಯಾಗಿದ್ದ ಆರು ಜನರ ಮೃತದೇಹಗಳು ಪತ್ತೆಯಾಗಿವೆ. ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇಂದು ಸಹ ಮೀನುಗಾರರು, ಮುಳುಗುತಜ್ಞರು ಕಾರ್ಯಾಚರಣೆ ನಡೆಸಿ ಸಮುದ್ರದ ಆಳದಲ್ಲಿ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡಿದ್ದ ನಾಲ್ವರ ಮೃತದೇಹ ಪತ್ತೆ ಮಾಡಿದ್ದಾರೆ. ಮಂಗಳೂರಿನ ಬೇಂಗ್ರೆ ನಿವಾಸಿಗಳಾದ  ಪ್ರೀತಂ, ಪಾಂಡುರಂಗ, ಚಿಂತನ್, ಅನ್ಸರ್, ಜೀಯಾ, ಹಸೈನಾರ್ ಎಂದು ಗುರುತಿಸಲಾಗಿದೆ. 


ಸೋಮವಾರ ಮುಂಜಾನೆ ಶ್ರೀರಕ್ಷಾ ಹೆಸರಿನ ಈ ಬೋಟ್ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. 25 ಜನ ಮೀನುಗಾರರಿದ್ದ ಈ ಬೋಟ್ ತಡರಾತ್ರಿ ಮೀನುಗಾರಿಕೆ ಮುಗಿಸಿ ವಾಪಾಸು ಬರುವಾಗ ಅವಘಡಕ್ಕಿಡಾಗಿ ಪಲ್ಟಿಯಾಗಿತ್ತು. 19 ಜನ ಮೀನುಗಾರರು ದುರ್ಘಟನೆಯಲ್ಲಿ ಬಚಾವಾಗಿದ್ದರೆ, ಆರು ಜನ ಕಣ್ಮರೆಯಾಗಿದ್ದರು. ಇಂದು ಕೂಡಾ ಕಾರ್ಯಾಚರಣೆ ನಡೆಸುವ ಸಲುವಾಗಿ ಮಂಗಳೂರು ಮೀನುಗಾರಿಕಾ ಬಂದರನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕರಾಳ ದಿನವನ್ನಾಗಿ ಆಚರಿಸಿ ಮೀನುಗಾರರು ತಮ್ಮ ತಮ್ಮ ಬೋಟ್ ಮೂಲಕ ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದರು.


ಇದನ್ನೂ ಓದಿ : ಚಿಕ್ಕೋಡಿ ಜಿಲ್ಲಾ ರಚನೆಗೆ ವರಸೆ ಬದಲಿಸಿದ ಬಿಜೆಪಿ ನಾಯಕರು; ಜಿಲ್ಲೆ ರಚನೆಗೆ ಹಿಂದೇಟು


ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಆಸ್ಪತ್ರೆಗೆ ಮೀನುಗಾರಿಕಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ‌ ಭೇಟಿ ನೀಡಿದರು.


ದುರಂತ ಹೇಗಾಯ್ತು ಎನ್ನುವುದರ ಬಗ್ಗೆ ತನಿಖೆಗೆ ಆದೇಶಿಸಿದ್ದು, ಮುಖ್ಯಮಂತ್ರಿಯವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು. ಮೃತರ ಕುಟಂಬಕ್ಕೆ ತಲಾ 6 ಲಕ್ಷ ಪರಿಹಾರ ಇಲಾಖೆಯಿಂದ ನೀಡಲಾಗುವುದು, ಹೆಚ್ಚಿನ ಪರಿಹಾರವನ್ನೂ‌ ನಾಳೆ ಮೃತರ ಕುಟುಂಬಕ್ಕೆ ನೀಡಲಾಗುವುದು ಎಂದು ಹೇಳಿದರು.

Published by:G Hareeshkumar
First published: