ಮಂಗಳೂರು: ಸರಕಾರದ ನಿಯಮದಂತೆ (Government Rules) ಜೂನ್ 1 ರಿಂದ ಎರಡು ತಿಂಗಳ ಕಾಲ ಕರಾವಳಿಯ ಕಡಲ ತೀರದಲ್ಲಿ ಮೀನುಗಾರಿಕಾ (Fishing) ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ. ಮೀನುಗಳ ಸಂತಾನೋತ್ಪತ್ತಿ ನಡೆಯುವ ಹಿನ್ನೆಲೆ ಜೂನ್ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಈ ಎರಡು ತಿಂಗಳ ಕಾಲ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಆಯಾಯ ಜಿಲ್ಲಾಡಳಿತಗಳು ನಿಷೇಧ ಹೇರಿವೆ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದ ಬೋಟ್ ಗಳು ಈಗಾಗಲೇ ದಡ ಸೇರಲು ಆರಂಭಿಸಿವೆ. ಬಂದರು ಪ್ರದೇಶಗಳಾದ ಮಂಗಳೂರಿನ ಹಳೆ ಬಂದರು ಹಾಗೂ ಉಡುಪಿಯ ಮಲ್ಪೆಯಲ್ಲಿ ಬೋಟ್ ಗಳು ಲಂಗರು ಹಾಕುತ್ತಿವೆ.
ಜನರಿಗೆ ಮೀನು ಸಿಗಲ್ವೇ?
ಮೀನುಗಾರಿಕೆ ನಿಷೇಧ ಸಮಯದಲ್ಲಿ ನಾಡ ದೋಣಿ ಮೀನುಗಾರಿಕಾ ಚಟುವಟಿಕೆ ಗರಿಗೆದರುತ್ತವೆ. ಹೆಚ್ಚಿನ ಪ್ರಮಾಣದ ಬಲೆ ಬಳಸದೇ ಸ್ಥಳೀಯವಾಗಿ ಮೀನುಗಾರಿಕೆ ನಡೆಸುತ್ತಾರೆ. ಆದರೆ, ತೀವ್ರ ಗಾಳಿ, ಮಳೆ ಸಮಯದಲ್ಲಿ ಜಿಲ್ಲಾಡಳಿತದ ಎಚ್ಚರಿಕೆ ಗಮನಿಸಿಕೊಂಡು ಚಟುವಟಿಕೆ ನಡೆಸಬೇಕಾಗುತ್ತದೆ.
ಹಾಗಾಗಿ ಜನರಿಗೆ ಮಳೆಗಾಲದಲ್ಲೂ ಮೀನು ಸಾಮಾನ್ಯವಾಗಿ ಸಿಗುತ್ತವೆ. ಇನ್ನು ಶೀತಲೀಕರಣದಲ್ಲಿ ಸಂಗ್ರಹಿಸಿ ಮೀನುಗಳನ್ನು ಈ ಸಮಯದಲ್ಲಿ ಮಾರಾಟ ಮಾಡಲಾಗುತ್ತದೆ.
ನಿಯಮ ಉಲ್ಲಂಘಿಸಿದ್ರೆ ಏನು ಕ್ರಮ?
ಇನ್ನು ಎರಡು ತಿಂಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ಹಾಕಲಾದ ನಿರ್ಬಂಧವನ್ನು ಉಲ್ಲಂಘಿಸಿದರೆ, ಕರ್ನಾಟಕ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಒಂದು ವರ್ಷದ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವ ಅವಕಾಶ ಸರಕಾರಕ್ಕೆ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ