ಮಂಡ್ಯ (ನ. 1): ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಈಗ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ಚುನಾವಣೆಯಲ್ಲಿ ಮಂಡ್ಯ ಮೂಲದ ವ್ಯಕ್ತಿಯೊಬ್ಬರ ಹೆಸರು ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ, ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಮಂಡ್ಯ ಮೂಲದ ಈ ವ್ಯಕ್ತಿಗೆ ಅಮೆರಿಕದ ರಾಜಕೀಯದಲ್ಲಿ ಅತಿದೊಡ್ಡ ರಾಜಕೀಯ ಸ್ಥಾನಮಾನ ಹುದ್ದೆ ದೊರಕಲಿದೆ ಎಂದು ಹೇಳಲಾಗುತ್ತಿದೆ. ಮಂಡ್ಯ ಮೂಲದ ಆ ವ್ಯಕ್ತಿ ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮಂಡ್ಯದ ಆ ವ್ಯಕ್ತಿಯ ಹೆಸರು ಡಾ. ವಿವೇಕ್ ಮೂರ್ತಿ. ಇವರು ಕರ್ನಾಟಕದ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಗ್ರಾಮದವರು. ಇವರ ತಾತ ಮತ್ತು ತಂದೆ ಇದೇ ಗ್ರಾಮದವರಾಗಿದ್ದು ಇವರು ಕೂಡ ಇಂದಿಗೂ ಈ ಗ್ರಾಮದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಡಾ. ವಿವೇಕ್ ಹೆಚ್ ಮೂರ್ತಿ ಅವರು 37ನೇ ವಯಸ್ಸಿಗೆ ಅಮೆರಿಕದ ಸರ್ಜನ್ ಜನರಲ್ ಆಗಿದ್ದವರು. ಈಗ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಈ ಚುನಾವಣೆಯಲ್ಲಿ ಬಿಡೆನ್ ಗೆದ್ದರೆ ವಿವೇಕ್ ಮೂರ್ತಿಗೆ ಅಮೆರಿಕದಲ್ಲಿ ಅತಿದೊಡ್ಡ ರಾಜಕೀಯ ಸ್ಥಾನ ಮಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ನಮ್ಮೂರಿನ ಮೂಲದ ವ್ಯಕ್ತಿಯೊಬ್ಬ ದೂರದ ಅಮೆರಿಕದಲ್ಲಿ ಅದರಲ್ಲೂ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ರಾಜಕೀಯದಲ್ಲಿ ಮಿಂಚಲು ಹೊರಟಿರುವ ವೈದ್ಯನ ಈ ಸಾಧನೆಯನ್ನು ಶ್ಲಾಘಿಸುತ್ತಿದ್ದಾರೆ ಹಲ್ಲೆಗೆರೆಯ ಜನರು.
ಇದನ್ನೂ ಓದಿ: Karnataka Weather: ಇನ್ನೆರಡು ದಿನ ಕರಾವಳಿ, ಉತ್ತರ ಕರ್ನಾಟಕದಲ್ಲಿ ಮಳೆ ಸಾಧ್ಯತೆ
ಇನ್ನು, ಅಮೆರಿಕದಲ್ಲಿರುವ ಡಾ. ವಿವೇಕ್ ಮೂರ್ತಿ ಈ ಊರಿನೊಡನೆ ಇಂದಿಗೂ ಕೂಡ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ. ಪ್ರತಿ ಎರಡು -ಮೂರು ವರ್ಷಕ್ಕೊಮ್ಮೆ ಊರಿಗೆ ಬರುವ ಇವರು ಈ ಊರಿನಲ್ಲಿದ್ದು ಹೋಗ್ತಾರೆ. ಅಲ್ಲದೆ, ಈ ಊರಿನ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದು, ಊರಿನಲ್ಲಿ ಒಂದೆರಡು ದೇವಾಲಯ ಕಟ್ಟಿಸಿದ್ದಾರೆ. ಮತ್ತೊಂದು ಸರ್ವಧರ್ಮ ಶಾಂತಿಯ ತೋಟದ ನಿರ್ಮಾಣಕ್ಕೆ ಕೂಡ ಸಿದ್ದತೆ ನಡೆಸಿದ್ದಾರೆ. ಇದರ ಜೊತೆಗೆ ತಮ್ಮೂರು ಸೇರಿದಂತೆ ಸುತ್ತಮುತ್ತಲ ಸರ್ಕಾರಿ ಶಾಲೆಗೆ ಉಚಿತವಾಗಿ ಲಕ್ಷಾಂತರ ರೂ. ಮೌಲ್ಯದ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ಆಗಾಗ ಒಂದರಡು ವರ್ಷಕ್ಕೆ ಹೆಲ್ತ್ ಕ್ಯಾಂಪ್ ಆಯೋಜಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಇವರ ಈ ಸಮಾಜ ಸೇವೆಯನ್ನು ಈ ಊರಿನ ಗ್ರಾಮಸ್ಥರು ಕೊಂಡಾಡು ತ್ತಿದ್ದು, ತಮ್ಮೂರಿನ ಮಗನ ಈ ಸೇವೆಯ ಮತ್ತು ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಡಾ. ವೀವೇಕ ಮೂರ್ತಿ ಅವರ ತಾತ ಮತ್ತು ತಂದೆಗೆ ಸೇರಿದ ಮನೆ ಈ ಹಲ್ಲೆಗೆರೆ ಗ್ರಾಮದಲ್ಲಿದ್ದು, ಇಂದಿಗೂ ಈ ಮನೆಯಲ್ಲಿ ಇವರ ಚಿಕ್ಕಪ್ಪ ಹಾಗು ದೊಡ್ಡಪ್ಪ ಹಾಗೂ ಅವರ ಮಕ್ಕಳು ವಾಸವಾಗಿದ್ದಾರೆ. ಈ ಗ್ರಾಮಕ್ಕೆ ಮೂರ್ನಾಲ್ಕು ವರ್ಷಕ್ಕೆ ಬಂದು ಹೋಗುವ ಬಗ್ಗೆ ವಿವೇಕ ಮೂರ್ತಿಯ ಸಂಬಂಧಿಕರು ತಿಳಿಸಿದ್ದು, ಊರಿಗೆ ಬಂದಾಗ ಡಾ. ವಿವೇಕ್ ಮೂರ್ತಿ ಸರಳತೆಯಿಂದಲೆ ತಮ್ಮೊಂದಿಗೆ ಇದ್ದು ಎಲ್ಲರೊಂದಿಗೆ ಬೆರೆತು ಆತ್ಮೀಯವಾಗಿ ಕನ್ನಡದಲ್ಲೇ ಮಾತನಾಡಿ ಹೋಗುತ್ತಾರೆ. ಇವರು ದೂರದ ಅಮೇರಿಕಾದಲ್ಲಿದ್ದರೂ ಊರು, ರಾಜ್ಯ, ದೇಶ ಹಾಗೂ ಭಾಷೆಯ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ, ಸಕ್ಕರೆನಾಡು ಮಂಡ್ಯ ಮೂಲದ ವ್ಯಕ್ತಿಯೊಬ್ಬ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಸರ್ಜನ್ ಆಫ್ ಜನರಲ್ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗನಾಗಿದ್ದಾರೆ. ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಬಿಡೆನ್ ಪರ ರಾಜಕೀಯ ಪ್ರಚಾರ ಮಾಡ್ತಿದ್ದು ಅವರು ಗೆದ್ದು ಅಧ್ಯಕ್ಷರಾದರೆ ವಿವೇಕ್ ಮೂರ್ತಿಗೆ ಮತ್ತೊಂದು ದೊಡ್ಡ ರಾಜಕೀಯ ಹುದ್ದೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದು ಸಕ್ಕರೆನಾಡು ಮಂಡ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ