Fraud Case: ಪರಿಚಿತನ ಸೋಗಲ್ಲಿ ಮೋಸ ಮಾಡಿದ ಖದೀಮ, ಹೋಟೆಲ್ ಹುಡುಗನ ಚಿನ್ನ, ಹಣ ಪಡೆದು ಎಸ್ಕೇಪ್
ಇದು "ಉಂಡು ಹೋದ, ಕೊಂಡು ಹೋದ." ಕಥೆ. ಪರಿಚಯ ಎಂದು ಚಿನ್ನದ ಸರ ರಿಪೇರಿ ಜೊತೆಗೆ ಹೊಸ ಚೈನ್ ಮಾಡಲು ಹಣವನ್ನು ನೀಡಿದ್ದ. ಚಿನ್ನ ಹಾಗೂ ಹಣದೊಂದಿಗೆ ಅಸಾಮಿ ಎಸ್ಕೇಪ್ ಆಗಿದ್ದಾನೆ. ಕಷ್ಟಪಟ್ಟು ಹೋಟೆಲ್ನಲ್ಲಿ ದುಡಿದು ಕೂಡಿಟಿದ್ದ ಹಣ ಚಿನ್ನ ಕಳೆದುಕೊಂಡು ಈ ಹುಡುಗ ಕಣ್ಕಣ್ಣು ಬಿಡುತ್ತಿದ್ದಾನೆ. ಇದು ನೀವು ಓದಿ, ಎಚ್ಚೆತ್ತುಕೊಳ್ಳಲೇ ಬೇಕಾದ ಸುದ್ದಿ...
ಹಾಸನ: ನಗರದಲ್ಲೊಂದು “ಉಂಡು ಹೋದ. ಕೊಂಡು ಹೋದ” ಎಂಬತಾ ಘಟನೆ ನಡೆದಿದೆ. ಪರಿಚಯ ಎಂದು ಚಿನ್ನದ ಸರ (Gold Chain) ರಿಪೇರಿ (Repair) ಜೊತೆಗೆ ಹೊಸ ಚೈನ್ (New Chain) ಮಾಡಲು ಹಣವನ್ನು ನೀಡಿದ್ದ. ಚಿನ್ನ (Gold) ಹಾಗೂ ಹಣದೊಂದಿಗೆ (Money) ಅಸಾಮಿ ನಾಪತ್ತೆಯಾಗಿದ್ದಾನೆ (Escape). ಹಾಸನ (Hassan) ಮೂಲದ ಮಂಜುನಾಥ್ ಎಂಬಾತ ಕಳೆದ ಹತ್ತು ವರ್ಷಗಳಿಂದ ನಗರದ ಎಂ.ಜಿ.ರಸ್ತೆಯಲ್ಲಿರುವ ಪವಿತ್ರ ಫಾಸ್ಟ್ ಫುಡ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇದೇ ಹೋಟೆಲ್ಗೆ ಹಾಸನದ ವಾಸಿಯಾದ ಧರಣೇಶ್ ಊಟ ತಿಂಡಿಗೆಂದು ಬರುತ್ತಿದ್ದನು. ರೆಗ್ಯುಲರ್ ಕಸ್ಟಮರ್ ಆದ್ದರಿಂದ ಮಂಜುನಾಥ್ಗೆ ಧರಣೇಶ್ ಚೆನ್ನಾಗಿಯೇ ಪರಿಚಯವಾಗಿದ್ದಾನೆ. ಈ ವೇಳೆ ನಗರದ ದೊಡ್ಡಗರಡಿ ಬೀದಿಯಲ್ಲಿರುವ ಬೆಳ್ಳಿಶ್ರೀ ಕಾಂಪ್ಲೆಕ್ಸ್ನಲ್ಲಿ ನನ್ನದು ಗಿರವಿ ಅಂಗಡಿ ಇದೆ ಎಂದು ಹೇಳಿದ್ದನು. ಇತ್ತೀಚಿಗೆ ಮಂಜುನಾಥ್ ಸಹೋದರಿಯ 40 ಗ್ರಾಂ ಮಾಂಗಲ್ಯದ ಸರ ತುಂಡಾಗಿತ್ತು. ಧರಣೇಶ್ ಚೆನ್ನಾಗಿ ಪರಿಚಯ ಎಂಬ ಕಾರಣಕ್ಕೆ ರಿಪೇರಿ ಮಾಡಿಕೊಡುವಂತೆ ಮಾಂಗಲ್ಯದ ಸರ ನೀಡಿದ್ದನು. ಈಗ ಇದೇ ಎಡವಟ್ಟಾಗಿ ಹೋಗಿದೆ. ಮಂಜುನಾಥ್ಗೆ ಮೋಸ ಮಾಡಿ, ಧರಣೇಶ್ ಎಸ್ಕೇಪ್ ಆಗಿದ್ದಾನೆ.
50 ಸಾವಿರ ರೂಪಾಯಿ ಪಡೆದಿದ್ದ ಆರೋಪಿ
ಮೂರ್ನಾಲ್ಕು ದಿನಗಳ ನಂತರ ಹೋಟೆಲ್ ಊಟಕ್ಕೆ ಬಂದಿದ್ದ ಧರಣೇಶ್ ಸರ ರಿಪೇರಿ ಮಾಡಲು ಆಗಲ್ಲ. ಇದರ ಬದಲು ಹೊಸ ಮಾಂಗಲ್ಯ ಸರ ಮಾಡಿಸಿ ಎಂದು ಹೇಳಿದ್ದ. ಇದಕ್ಕೆ ಒಂದೂವರೆ ಲಕ್ಷ ಹಣ ಖರ್ಚಾಗುತ್ತದೆ ಎಂದಿದ್ದು, ಇದಕ್ಕೆ ಮಂಜುನಾಥ್ ಓಕೆ ಎಂದಿದ್ದನು. ಮಾರನೇ ದಿನವೇ ಧರಣೇಶ್ ಹೋಟೆಲ್ಗೆ ಬಂದಿದ್ದು ಸರವನ್ನು ಕರಗಿಸಿ ತಂದು ತೋರಿಸಿದ್ದನು. ಈ ವೇಳೆ ಮುಂಗಡವಾಗಿ ಐವತ್ತು ಸಾವಿರ ಹಣವನ್ನು ಮಂಜುನಾಥ್ ನೀಡಿದ್ದನು. ಇದಾದ ಒಂದು ವಾರದ ಬಳಿಕ ಚಿನ್ನದ ಸರ ರೆಡಿ ಬಾಕಿ ಹಣ ನೀಡುವಂತೆ ಫೋನ್ ಮಾಡಿದ್ದನು.
ಮತ್ತೊಮ್ಮೆ 1 ಲಕ್ಷ ರೂಪಾಯಿ ಹಣ ಪಡೆದ ಖದೀಮ
ಅಂಗಡಿಗೆ ತೆರಳಿದ ಮಂಜುನಾಥ್ ಒಂದು ಲಕ್ಷ ರೂ ಹಣ ನೀಡಿ ಬಂದಿದ್ದ. ಫೆ.1 ರಂದು ಧರಣೇಶ್ಗೆ ಮಂಜುನಾಥ್ ಕರೆ ಮಾಡಿದ್ದಾನೆ. ಈ ವೇಳೆ ಸ್ವಿಚ್ ಆಫ್ ಬಂದಿದೆ. ಎಷ್ಟೇ ಭಾರಿ ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅಂಗಡಿ ಬಳಿ ತೆರಳಿ ವಿಚಾರಿಸಿದಾಗ ಧರಣೇಶ್ ಅಸಲಿ ಬಣ್ಣ ಬಯಲಾಗಿದೆ.
ಧರಣೇಶ್ ಇಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೇ ಎಂದು ಮಾಲೀಕರು ತಿಳಿಸಿದ್ದಾರೆ. ಅಲ್ಲದೇ ನೀವು ಸರ ಹಣ ನೀಡಿರುವುದು ನನಗೆ ತಿಳಿದಿಲ್ಲ ಇದಕ್ಕೂ ನಮಗು ಸಂಬಂಧವಿಲ್ಲ ಎಂದಿದ್ದಾರೆ. ಗಾಬರಿಗೊಂಡ ಮಂಜುನಾಥ್ ಧರಣೇಶ್ ಮನೆ ವಿಳಾಸ ಪಡೆದು ಹೋಗಿದ್ದು, ಆತ ಮನೆಯಲ್ಲಿ ಇರಲ್ಲಿಲ್ಲ.
ಅವರ ತಂದೆಯನ್ನು ವಿಚಾರಿಸಿದ ವೇಳೆ ಅವನು ಮನೆಗೆ ಬಂದು ಒಂದು ವಾರವಾಗಿದೆ ನಮಗೆ ಅದೇನು ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ. ಕೊನೆಗೆ ಸ್ನೇಹಿತರ ಬಳಿ ತನಗಾದ ಮೋಸದ ಬಗ್ಗೆ ತಿಳಿಸಿ ಧರಣೇಶ್ಗೆ ನೀಡಿರುವ ಹಣದ ವಿಡಿಯೋ ಹಾಗೂ ಆತ ನೀಡಿರುವ ಬಿಲ್ಗಳ ಸಮೇತ ಹಾಸನ ನಗರಠಾಣೆಗೆ ದೂರು ನೀಡಿದ್ದಾನೆ.
ಇದುವರೆಗೂ ಧರಣೇಶ್ ಮಾತ್ರ ಖಾಕಿ ಕೈಗೂ ಸಿಕ್ಕಿಲ್ಲ. ಇತ್ತ ಪರಿಚಯಸ್ಥ ಎಂದು ಹತ್ತಾರು ವರ್ಷದಿಂದ ಹೋಟೆಲ್ನಲ್ಲಿ ಕೆಲಸ ಮಾಡಿ ಕೂಡಿಟ್ಟ ಹಣ ಹಾಗೂ ಸಹೋದರಿಯ ಚಿನ್ನದ ಸರ ನೀಡಿ ಕಳೆದುಕೊಂಡು ಕಣ್ಕಣ್ಣು ಬಿಡುತ್ತಿದ್ದಾನೆ.
ಹೇಗಾದರೂ ಮಾಡಿ ನನ್ನ ಹಣ ಹಾಗೂ ಚಿನ್ನದ ಸರ ಕೊಡಿಸಿ ಎಂದು ಪೊಲೀಸ್ ಠಾಣೆ ಅಲೆಯುತ್ತಿದ್ದಾನೆ. ಯಾರೇ ಆಗಲಿ ಹಣ, ಚಿನ್ನ ನೀಡುವ ಮೊದಲು ಅಂಗಡಿ, ಆತನ ಬಗ್ಗೆ ವಿಚಾರಿಸಿ ನೀಡಬೇಕು ಇಲ್ಲವಾದಲ್ಲಿ ಪಂಗನಾಮ ಗ್ಯಾರೆಂಟಿ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ