Karnataka Politics: ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (BJP MP V Srinivas Prasad) ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿದರು. ಗುಜರಾತ್ ವಿಧಾನಸಭಾ ಚನಾವಣೆ ಫಲಿತಾಂಶ (Gujarat Election Results), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarajun Kharge) ಹಾಗೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಭೇಟಿಯಾಗಿರುವ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದರು. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರುತ್ತದೆ. ಉತ್ತರಪ್ರದೇಶ ಹಾಗೂ ಗುಜರಾತ್ ಮಾದರಿ ಚುನಾವಣೆ ಯಶಸ್ಸು ಕಂಡಿದೆ. ಅಭ್ಯರ್ಥಿಗಳ ಆಯ್ಕೆ ಬಹುಮುಖ್ಯ. ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಸ್ಥಾನ ಮುನ್ನಡೆಸುವ ಸಾಮರ್ಥ್ಯ ಮಲ್ಲಿಕಾರ್ಜುನ ಖರ್ಗೆಗೆ ಇಲ್ಲ. ಖರ್ಗೆಗೆ ಯಾವ ಹೋರಾಟದ ಹಿನ್ನೆಲೆ ಇದೆ ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ರಾಜಕೀಯವಾಗಿ ಯಾವುದೇ ರೀತಿಯ ಹೋರಾಟ ಮಾಡಿ ಬಂದವರಲ್ಲ. ಯಾವುದೇ ಸಿಎಂಗಳು ಬಂದಾಗಲೂ ಅವರನ್ನು ಓಲೈಸಿ ಮಂತ್ರಿ ಸ್ಥಾನ ಪಡೆಯುತ್ತಿದ್ದರು.
ಕಾಂಗ್ರೆಸ್ನ ದೌರ್ಭಾಗ್ಯ
ಮಲ್ಲಿಕಾರ್ಜುನ ಖರ್ಗೆ ಓರ್ವ ಒಳ್ಳೆಯ ರಾಜಕೀಯ ತಂತ್ರಗಾರ (He is clever manipulator). ಈಗ ಕಾಂಗ್ರೆಸ್ ಪಕ್ಷಕ್ಕೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಖರ್ಗೆ ಸಿಕ್ಕಿದ್ದಾರೆ. ಅನ್ನ ಹಳಸಿತ್ತು. ನಾಯಿ ಹಸಿದಿತ್ತು ಅನ್ನೋ ಗಾದೆಯಂತಾಗಿದೆ ಕಾಂಗ್ರೆಸ್ ಸ್ಥಿತಿ. ಅಷ್ಟಕ್ಕೂ ಯುದ್ಧ ಮಾಡಲು ಅವರ ಕೈಗೆ ಏನು ಕೊಟ್ಟಿದೆ. ರಟ್ಟಿನ ಗುರಾಣಿ, ಮರದ ಕತ್ತಿ. ಇಂತಹವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದಿರೋದು ಕಾಂಗ್ರೆಸ್ನ ದೌರ್ಭಾಗ್ಯ ಎಂದರು.
ಈಗ ಇಬ್ಬರೂ ಒಂದಾಗುತ್ತಾರಂತೆ
ಸಿದ್ದರಾಮಯ್ಯ-ವಿಶ್ವನಾಥ್ ಒಂದಾಗಿರೋದಕ್ಕೆ ಕಿಡಿಕಾರಿದ ಶ್ರೀನಿವಾಸ್ ಪ್ರಸಾದ್, ಅವರ ಬಗ್ಗೆ ನಾನು ಪ್ರತಿಕ್ರಿಯೆ ಕೊಡದೇ ಇರೋದೆ ಒಳ್ಳೆಯದು. ಸಿದ್ದರಾಮಯ್ಯ ಮತ್ತು ವಿಶ್ಚನಾಥ್ ಪರಸ್ಪರ ಏನೇನು ಮಾತನಾಡಿದ್ದಾರೆ ಒಮ್ಮೆ ನೆನಪಿಸಿಕೊಳ್ಳಲಿ. ವಿಶ್ವನಾಥ್ ಸಿದ್ದರಾಮಯ್ಯ ಬಗ್ಗೆ ಎಂತೆಂಥಾ ಕಟು ಶಬ್ದಗಳನ್ನು ಬಳಸಿದ್ದರು. ವಿಶ್ವನಾಥ್ ಬಗ್ಗೆ ಕೇಳಿದರೆ ಸಿದ್ದರಾಮಯ್ಯ ಪಾದರಕ್ಷೆ ಕಳಚಿ ತೋರಿಸಿದ್ರು. ಈಗ ಇಬ್ಬರೂ ಒಂದಾಗುತ್ತಾರೆಂದರೆ ಅದಕ್ಕೆ ಏನು ಹೇಳೋದು ಎಂದರು.
ಇದನ್ನೂ ಓದಿ: Srirangapatna | Jamia Masjid: ಹಸಿರು ಬಾವುಟ ಕಿತ್ತ ಪ್ರಕರಣ; ಮುಸ್ಲಿಮರ ಪರವಾಗಿ ಪೊಲೀಸರ ಬೆದರಿಕೆ ಆರೋಪ, ಎಫ್ಐಆರ್ ದಾಖಲು
ರಾಜ್ಯದಲ್ಲಿ ಬಿಜೆಪಿ ಸಮೀಕ್ಷೆ
ಈಗಾಗಲೇ ಕೇಂದ್ರದ ವರಿಷ್ಠರು 2-3 ಸಮೀಕ್ಷೆ ನಡೆಸಿದ್ದಾರೆ. ಮುಂದಿನ ವರ್ಷ ಏಪ್ರಿಲ್ ಒಳಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕರ್ನಾಟಕದ ಚುನಾವಣೆ ಮೇಲೆ ವರಿಷ್ಠರು ಕಟ್ಟೆಚ್ಚರ ವಹಿಸಿದ್ದಾರೆ. ಅಭ್ಯರ್ಥಿಗಳ ಅಯ್ಕೆ ಮೇಲೂ ಕಣ್ಗಾವಲು ವಹಿಸಿದ್ದಾರೆ ಎಂದರು.
ಅವರ ಹೆಸರೇ ಉಡಾಫೆ ಸಿದ್ದರಾಮಯ್ಯ
ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಮನೆಯಲ್ಲಿ ಕುಳಿತರೂ ಗೆಲ್ಲುತ್ತೇವೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದರು. ಇದು ಉಡಾಫೆ ಮಾತು. ಅವರ ಹೆಸರೇ ಉಡಾಫೆ ಸಿದ್ದರಾಮಯ್ಯ. ಲೋಕಸಭಾ ಚುನಾವಣೆಯಲ್ಲೂ ಹೀಗೆ ಮೇಜು ಕುಟ್ಟಿ ಹೇಳಿದ್ರು. 2ನೇ ಬಾರಿ ಮೋದಿ ಪ್ರಧಾನಿ ಆಗಲ್ಲ ಎಂದು ಹೇಳಿದ್ದರು. ಆದರೆ ಆಗಿದ್ದೇನು ಲೋಕಸಭೆಯಲ್ಲಿ ಅವರಿಗೆ ಸಿಕ್ಕಿದ್ದು ಒಂದು ಸ್ಥಾನ ಮಾತ್ರ. ಹೇಳಿದಷ್ಟು ಸ್ಥಾನಗಳು ಕಾಂಗ್ರೆಸ್ ಪಡೆಯುವಷ್ಟು ಸದೃಢವಾಗಿಲ್ಲ ಎಂದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: JDS Pancharatna Yatra: ಸೈಕ್ಲೋನ್ ಎಫೆಕ್ಟ್, ಜೆಡಿಎಸ್ ರಥಯಾತ್ರೆ; ಹೊಸ ವೇಳಾಪಟ್ಟಿ ಹೀಗಿದೆ
ಏಕರೂಪ ನಾಗರಿಕ ಸಂಹಿತೆ
ಅಶಾಂತಿ ಸೃಷ್ಟಿಯಾಗದಂತೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಿ. ರಾಜ್ಯಸಭೆಯಲ್ಲಿ ಖಾಸಗಿ ಮಸೂದೆ ರೂಪದಲ್ಲಿ ಇದು ಮಂಡನೆಯಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸುದೀರ್ಘ ಪ್ರಕ್ರಿಯೆಗಳಿವೆ. ಕೇಂದ್ರ ಇದಕ್ಕಾಗಿ ಸಮಿತಿ ರಚನೆ ಮಾಡಿದೆ. ಸಮಿತಿ ಏನು ವರದಿ ಕೊಡುತ್ತೆ ಅನ್ನೋದನ್ನ ನೋಡಬೇಕು. ಎಲ್ಲಾ ರಾಜ್ಯಗಳೊಂದಿಗೆ ಚರ್ಚೆ ಮಾಡಿ, ಜನರ ಅಭಿಪ್ರಾಯವನ್ನು ಪಡೆದು ಇದನ್ನು ಜಾರಿ ಮಾಡಲಿ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ