ಚಾಮರಾಜನಗರ: ಮಲೈಮಹದೇಶ್ವರ ಬೆಟ್ಟದ (Male Mahadeshwara Temple) ದೀಪದಗಿರಿ ಒಡ್ಡುವಿನಲ್ಲಿ 108 ಅಡಿ ಎತ್ತರದ ಮಹದೇಶ್ವರಸ್ವಾಮಿ ಪ್ರತಿಮೆಯನ್ನ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಭಕ್ತರಿಗೆ ಅರ್ಪಿಸಿದ್ದಾರೆ. ಕ್ರೇನ್ ಮೂಲಕ ಪ್ರತಿಮೆ ಬಳಿಗೆ ತೆರಳಿ ಹುಲಿ ಮೇಲೆ ಕುಳಿತ ಮಹದೇಶ್ವರಸ್ವಾಮಿಯ ಪ್ರತಿಮೆಯ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸುತ್ತೂರು ಮಠದ (Suttur Mutt) ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ (V Somanna), ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಮುಖ್ಯಮಂತ್ರಿ ಬೊಮ್ಮಾಯಿ ಭಾಗಿಯಾಗಿದ್ದರು. ಆದರೆ ಆಹ್ವಾನ ಇದ್ದರೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಮಾತ್ರ ಗೈರಾಗಿದ್ದರು. ಆದರೆ ಮಾದಪ್ಪನ ದರ್ಶನಕ್ಕೆ ಯಡಿಯೂರಪ್ಪ ಬರಲಿಲ್ಲ ಯಾಕೆ ಅಂತ ಗೊತ್ತಿಲ್ಲ. ಆದರೆ ಸಚಿವ ವಿ. ಸೋಮಣ್ಣ ಮೇಲಿನ ಸಿಟ್ಟು ಅನ್ನೋದು ಬಿಜೆಪಿ (BJP) ವಲಯದಲ್ಲೇ ಕೇಳಿ ಬರುತ್ತಿರುವ ಮಾತಾಗಿದೆ.
ಮಾದಪ್ಪ ಯಡಿಯೂರಪ್ಪರನ್ನ ಕರೆಸಿಕೊಳ್ಳಲಿಲ್ಲ
ಕಾರ್ಯಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಸೋಮಣ್ಣ ಅವರು, ಮಾದಪ್ಪ ತನಗೆ ಬೇಕಾದವರನ್ನು ಕರೆಯಿಸಿಕೊಳ್ಳುತ್ತಾನೆ ಎಂದು ಹೇಳಿದ್ದರು. ಆದರೆ ಇಂದು ಮಾದಪ್ಪ ಯಡಿಯೂರಪ್ಪರನ್ನ ಕರೆಸಿಕೊಳ್ಳಲಿಲ್ಲ.
ಇದನ್ನೂ ಓದಿ: KSRTC Strike: ಸಾರಿಗೆ ಮುಷ್ಕರ ವಿಚಾರದಲ್ಲೇ ಗೊಂದಲ! ಒಂದು ಬಣದಿಂದ ವಾಪಸ್, ಮತ್ತೊಂದು ಬಣದಿಂದ ಕರೆ!
ತುಮಕೂರಲ್ಲಿ ಬಿಜೆಪಿ ವಿಜಯಸಂಕಲ್ಪದಲ್ಲಿದ್ದ ಯಡಿಯೂರಪ್ಪ ಮಾದೇಶ್ವರಬೆಟ್ಟಕ್ಕೆ ಹೋಗಲಿಲ್ಲ. ಇದು ಸೋಮಣ್ಣ ಮತ್ತು ಯಡಿಯೂರಪ್ಪ ಮಧ್ಯೆ ಇರುವ ಶೀತಲ ಸಮರಕ್ಕೆ ಸಾಕ್ಷಿಯಾಯಿತು. ಆದರೆ ಯಾವ ಸಮರನೂ ಇಲ್ಲ ಎನ್ನುವ ಸಿದ್ಧ ಉತ್ತರವನ್ನು ಮಾಜಿ ಸಿಎಂ ಯಡಿಯೂರಪ್ಪ ನೀಡಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸೋಮಣ್ಣ ಕಂಕಣ ಬದ್ಧವಾಗಿ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಮಹದೇಶ್ವರ ಪೌರಣಿಕ, ಐತಿಹಾಸಿಕ ದೃಷ್ಟಿಯಿಂದ ಪವಿತ್ರ ಕ್ಷೇತ್ರ. ಮಹದೇಶ್ವರ ಬೆಟ್ಟ ಇಡೀ ದಕ್ಷಿಣ ಕರ್ನಾಟಕದಲ್ಲಿ ಜಾತಿ, ಮತ ಬೇಧವಿಲ್ಲದೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಕ್ಷೇತ್ರ. ವರ್ಷದಲ್ಲಿ ಎರಡರಿಂದ ಮೂರು ಲಕ್ಷ ಜನರು ಕಾಲ್ನಡಿಗೆ ಮೂಲಕ ಬರುತ್ತಾರೆ.
ಪ್ರಾಧಿಕಾರದ ಹಲವು ಕೆಲಸ ನೆನೆಗುದ್ದಿಗೆ ಬಿದ್ದಿತ್ತು. ಸೋಮಣ್ಣ ಉಸ್ತುವಾರಿ ಸಚಿವರಾದ ನಂತರ ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ. ಮಲೆ ಮಹದೇಶ್ವರ ಸಂಪೂರ್ಣ ಆಶೀರ್ವಾದ ಸೋಮಣ್ಣರಿಗೆ ಸಿಗುತ್ತೆ. ಮಹದೇಶ್ಚರರ ಪ್ರತಿಮೆ ಈ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿಹಿಡಿಯುತ್ತಿದೆ. ಈ ತಿಂಗಳಲ್ಲಿ ಎರಡು ಬಾರಿ ಬಂದಿದ್ದೇನೆ. ಮಹದೇಶ್ವರರೇ ನಮ್ಮನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇವತ್ತು ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ವಿಚಾರದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನ. ಈ ಪ್ರತಿಮೆಯನ್ನು ನೋಡುತ್ತಿದ್ದರೆ ಸಾಕ್ಷಾತ್ ಮಹದೇಶ್ವರರೇ ಇಲ್ಲಿ ಬಂದು ನಿಂತಿದ್ದಾರೆ ಅನ್ನಿಸುತ್ತದೆ.
ನಾನು ಒಂದು ತಿಂಗಳಲ್ಲಿ ಎರಡು ಬಾರಿ ಬೆಟ್ಟಕ್ಕೆ ಬಂದಿದ್ದೇನೆ. ಇದು ನನ್ನ ಸೌಭಾಗ್ಯ, ನಾನು ಮಹದೇಶ್ವರರಲ್ಲಿ ವೈಯಕ್ತಿಕವಾಗಿ ಏನು ಬೇಡಿಕೊಂಡಿಲ್ಲ. ಸಮಸ್ತ ಕನ್ನಡಿಗರ ಬದುಕು ಬಂಗಾರವಾಗಲಿ, ಬಡವರ ಬದುಕು ಹಸನಾಗಲಿ. ನಾಡು ಸುಭೀಕ್ಷವಾಗಿರಲಿ ಎಂದು ಕೇಳಿಕೊಂಡಿದ್ದೇನೆ. ಇದರಲ್ಲೇ ನನ್ನ ಸುಖ ಸಾಧನೆ ಇದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಕೋಲಾರದಿಂದ ಹಿಂದೆ ಸರಿದ 'ಟಗರು'! ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಅಂತ ಅಶೋಕ್ ಟಾಂಗ್
ಅದೇನೇ ಇರಲಿ, ಮಾದಪ್ಪನ ದರ್ಶನ ಪಡೆದು ಸಿಎಂ ವಿಶೇಷ ಪೂಜೆ ಸಲ್ಲಿಸಿದ್ದಾರೆ. 530 ಕೆಜಿ ಬೆಳ್ಳಿಯ ರಥವನ್ನೂ ಲೋಕಾರ್ಪಣೆ ಮಾಡಿದ್ದಾರೆ. ದೀರ್ಘ ದಂಡ ನಮಸ್ಕಾರ ಹಾಕಿದ ಸಿಎಂ ಬಿಜೆಪಿ ಗೆಲ್ಲಿಸಪ್ಪಾ, ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಪ್ಪಾ, ಸಮಸ್ಯೆಗಳನ್ನೆಲ್ಲಾ ಬಗೆಹರಿಸಪ್ಪಾ ಅಂತ ಕೈಮುಗಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ