ರಾಮನಗರ(ಜ.13): ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಎಳ್ಳು ಬೆಲ್ಲ, ಕಬ್ಬನ್ನು ಸವಿಯುವ ಹಬ್ಬ. ಈ ಸಂಕ್ರಾಂತಿ ಹಬ್ಬ ಬಂತು ಅಂದ್ರೆ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಕರಿ ಕಬ್ಬಿಗೆ ತುಂಬಾ ಬೇಡಿಕೆ ಇದೆ. ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತಿದ್ದರೂ ಸಹ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕರ ಆಯ್ಕೆ ಮಾತ್ರ ಈ ಕರಿ ಕಬ್ಬು. ಆದ್ರೆ ಈ ರೀತಿಯ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತೀ ವಿರಳ. ಆದ್ರೆ ಈ 2-3 ಗ್ರಾಮಗಳು ಮಾತ್ರ ಕರಿ ಕಬ್ಬು ಗ್ರಾಮ ಎಂದೇ ಹೆಸರುವಾಸಿ ಪಡೆದಿದೆ.
ಹೌದು, ರಾಮನಗರ ಜಿಲ್ಲೆಯ ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ತಾಲೂಕಿನ ಪಟ್ಲು, ತಿಟ್ಟಮಾರನಹಳ್ಳಿ, ಚಿಕ್ಕನದೊಡ್ಡಿ ಗ್ರಾಮದ ರೈತರು ನಂಬಿಕೊಂಡಿರುವುದು ಈ ಕರಿಕಬ್ಬು ಬೇಸಾಯವನ್ನೇ. ಇಡೀ ರಾಮನಗರ ಜಿಲ್ಲೆಯಲ್ಲಿ ಕರಿ ಕಬ್ಬನ್ನು ಬೆಳೆಯುವ ಗ್ರಾಮಗಳು ಎಂಬ ಹಿರಿಮೆಯನ್ನು ಈ ಗ್ರಾಮಗಳು ಹೊಂದಿವೆ. ಈ ಗ್ರಾಮಗಳ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದಲ್ಲೂ ಬಹು ಬೇಡಿಕೆ ಇದೆ.
ಈ ಕಬ್ಬಿನ ಬೇಡಿಕೆ ರಾಜ್ಯವನ್ನೂ ದಾಟಿ ನೆರೆಯ ಕೇರಳ, ತಮಿಳುನಾಡು, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ. ಈ ಗ್ರಾಮಗಳ ಬಹುತೇಕ ರೈತರು ಕರಿ ಕಬ್ಬಿನ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು 40-50 ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಈ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಗ್ರಾಮಸ್ಥರು ಬೆಳೆದಿದ್ದು ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
Chikmagalur Murder: ಕಡೂರಿನಲ್ಲಿ ಊರ ಮಧ್ಯೆ ಅಪ್ಪನನ್ನು ಕತ್ತಿಯಿಂದ ಕೊಚ್ಚಿ ಕೊಂದ ಮಗ!
ಆದ್ರೆ ಈ ಭಾರೀ ಕರಿ ಕಬ್ಬಿನ ಬೆಳೆಯಲ್ಲಿ ವ್ಯತ್ಯಯವಾಗಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಪ್ರೇತ್ಸಾಹ ಧನವನ್ನು ನೀಡಿದ್ರೆ, ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.
ಅಂದ ಹಾಗೆ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕ ಕರಿ ಕಬ್ಬನ್ನು ಬೆಳೆಯಲಾಗುತ್ತದೆ. ಈ ಕಬ್ಬನ್ನು ಈ ಗ್ರಾಮಗಳಲ್ಲಿ ಮಾತ್ರ 40 ರಿಂದ 50 ವರ್ಷಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ. ಸಂಕ್ರಾಂತಿ ಹಬ್ಬದ ವೇಳೆ ಎಳ್ಳು ಬೆಲ್ಲದ ಜೊತೆಗೆ ಈ ಕರಿ ಕಬ್ಬಿನ ಒಂದು ತುಂಡನ್ನ ನೀಡುವುದು ಹಾಗೂ ಈ ಹಬ್ಬದ ಸಂದರ್ಭದಲ್ಲಿ ಒಂದು ಗೇಣು ಕರಿ ಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಕೂಡ ಜನರಲ್ಲಿ ಇದೆ.
ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು 1 ರಿಂದ 2 ಲಕ್ಷ ಖರ್ಚಾಗುತ್ತದೆ. 3 ಲಕ್ಷಕ್ಕೂ ಹೆಚ್ಚು ಲಾಭ ದೊರೆಯುತ್ತದೆ ಎಂಬುದು ಕಬ್ಬು ಬೆಳೆಗಾರರ ಮಾತು. ಆದರೆ ಈ ಬಾರಿ ಕೊರೋನಾದಿಂದಾಗಿ ಅದು ಸಹ ಮಂದಗತಿಯಾಗಿದೆ. ಸಂಕ್ರಾಂತಿ ಸಮಯದಲ್ಲಿ ಮಾತ್ರ ಈ ಕಬ್ಬು ಚೆನ್ನಾಗಿ ಬರುತ್ತದೆ. ಹೀಗಾಗಿ ಸಂಕ್ರಾಂತಿ ಸಮಯದಲ್ಲಿ ಈ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇದೆ.
(ವರದಿ : ಎ.ಟಿ.ವೆಂಕಟೇಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ