ರಾಮನಗರ (ಜು.31)ಚನ್ನಪಟ್ಟಣದ (Chennapattana) ಗೌಡಗೆರೆಯಲ್ಲಿರೋ ಚಾಮುಂಡೇಶ್ವರಿ (Chamundeshwari) ತಾಯಿಗೆ ಮಹಾಮಸ್ತಕಾಭಿಷೇಕ ಅದ್ದೂರಿಯಾಗಿ ನಡೆಯಿತು. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿರುವ ಗೌಡಗೆರೆಯ 64 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ವಿಶ್ವದ ಅತಿದೊಡ್ಡ ಚಾಮುಂಡೇಶ್ವರಿ ವಿಗ್ರಹ ಎಂಬ ಖ್ಯಾತಿ ಪಡೆದಿದೆ. 37,247 ಕೆ.ಜಿ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಮಾಡಲಾಯಿತು. 45 ಬಗೆಯ ವಿವಿಧ ದ್ರವ್ಯಗಳಿಂದ ನಡೆಯಿತು. ಮೊಟ್ಟಮೊದಲ ಬಾರಿಗೆ ನಡೆದ ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ ಕಂಡು ಭಕ್ತರು (Devotes) ಪುನೀತರಾದರು.
ಮಹಾಮಸ್ತಕಾಭಿಷೇಕದಲ್ಲಿ ರಾಜಕಾರಣಿಗಳು ಭಾಗಿ
ಪಂಚಲೋಹದ ವಿಗ್ರಹ ಆಗಿರುವ ಚಾಮುಂಡೇಶ್ವರಿ ವಿಗ್ರಹ ವೀಕ್ಷಣೆ ಮಾಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸಿಎಂ ಬಸವರಾಜ್ ಬೊಮ್ಮಾಯಿ ಬರಬೇಕಿತ್ತು. ಆದರೆ ಕಾರಣಾಂತರದಿಂದ ಬರಲಿಲ್ಲ. 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಯಿಯ 16 ಕೆ.ಜಿ ಚಿನ್ನದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಸಚಿವ ಅಶ್ವಥ್ ನಾರಾಯಣ ಸಹ ಭಾಗಿಯಾಗಿದ್ದರು.
ಇನ್ನು ಈ ಸಂದರ್ಭದಲ್ಲಿ ಯೋಗೇಶ್ವರ್ ಮಾತನಾಡಿ ಇದೇ ಮೊದಲ ಬಾರಿಗೆ ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ಹೊರತಾಗಿ ನಮ್ಮೂರಿನ ಚಾಮುಂಡೇಶ್ವರಿ ಗೆ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಇದಕ್ಕೆ ನಾನು ಚಾಲನೆ ಕೊಡುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದರು.
ಚನ್ನಪಟ್ಟಣದ ಚಾಮುಂಡೇಶ್ವರಿ ವಿಶ್ವಪ್ರಸಿದ್ಧಿ
35 ಸಾವಿರ ಕೆ.ಜಿ ತೂಕವುಳ್ಳ, 68 ಅಡಿ ಎತ್ತರದ, ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆಯಿಂದ ತಯಾರಾಗಿ, 18 ಭುಜಗಳುಳ್ಳ ಸೌಮ್ಯ ರೂಪದಲ್ಲಿ ನಿಂತಿರುವ ಚಾಮುಂಡಿ ತಾಯಿಯ ವಿಗ್ರಹವನ್ನ ನೋಡಲು ಕಣ್ಣೆರಡು ಸಾಲೋದಿಲ್ಲ.ಇದು ವಿಶ್ವದಲ್ಲಿಯೇ ಅತೀ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ಎಂದೇ ಖ್ಯಾತಿ ಪಡೆದಿದೆ. ಕಳೆದ 4 ವರ್ಷಗಳಿಂದ ನಡೆಯುತ್ತಿದ್ದ ವಿಗ್ರಹ ತಯಾರಿ ಕಾರ್ಯ ಪೂರ್ಣಗೊಂಡು ಈ ಹಿಂದಿನ ಭೀಮನ ಅಮಾವಾಸ್ಯೆಯ ಶುಭದಿನದಂದೇ ಲೋಕಾರ್ಪಣೆಗೊಂಡಿದೆ. ತಾಯಿಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಸಹಸ್ರಾರು ಭಕ್ತರು.
ಇದನ್ನೂ ಓದಿ: Independence Day 2022: ಪ್ರತಿಯೊಂದು ಮನೆ ಮೇಲೆ ಹಾರಲಿ ತ್ರಿವರ್ಣ ಧ್ವಜ; ಎಲ್ಲೆಲ್ಲೂ ಹರಡಲಿ ಅಮೃತ ಮಹೋತ್ಸವದ ಸಂಭ್ರಮ
ಭೀಮನ ಅಮಾವಾಸ್ಯೆಯಂದು ಲೋಕಾರ್ಪಣೆ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಇತಿಹಾಸ ನಿರ್ಮಿಸಿದೆ. ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರು ಈ ಮಹಾಕಾರ್ಯವನ್ನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಗ್ರಹವನ್ನ ಸ್ಥಾಪನೆ ಮಾಡಲು ಮುಂದಾಗಿದ್ದ ಮಲ್ಲೇಶ್ ಅವರಿಗೆ ಭಕ್ತರಿಂದ ದಾನಗಳು ಹರಿದುಬರಲು ಪ್ರಾರಂಭವಾಯ್ತು. ಅದಕ್ಕಾಗಿ ಬಹಳ ದೊಡ್ಡಮಟ್ಟದಲ್ಲಿಯೇ ತಾಯಿಯ ವಿಗ್ರಹವನ್ನ ಸ್ಥಾಪನೆ ಮಾಡಿ ಈ ಸ್ಥಳವನ್ನ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾದರು. ಸತತ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಈ ಮಹಾಕಾರ್ಯ ಮುಗಿದು ಈ ಹಿಂದಿನ ಭೀಮನ ಅಮಾವಾಸ್ಯೆಯ ದಿನದಂದು ಲೋಕಾರ್ಪಣೆಯಾಗಿದೆ.
ಮುಸ್ಲಿಂ ಸಮುದಾಯದ ಕಾರ್ಮಿಕರಿಂದ ವಿಗ್ರಹ ನಿರ್ಮಾಣ
ಇನ್ನು ಬೆಂಗಳೂರಿನ ನಾಯಂಡಹಳ್ಳಿಯ ಮುಸ್ಲಿಂ ಸಮುದಾಯದ 20 ಜನ ಕಾರ್ಮಿಕರು ಈ ವಿಗ್ರಹವನ್ನ ತಯಾರು ಮಾಡಿರೋದು ಮತ್ತೊಂದು ವಿಶೇಷ. ಪಠಾಣ್ ಹಾಗೂ ಸಂಗಡಿಗರು ಸೇರಿ ಕಳೆದ 4 ವರ್ಷಗಳಿಂದ ಕಷ್ಟಪಟ್ಟು, ಭಕ್ತಿಯಿಂದ ತಯಾರಿಸಿದಕ್ಕೆ ಇವತ್ತು ಅಚ್ಚುಕಟ್ಟಾಗಿ ವಿಗ್ರಹ ಮೂಡಿಬಂದಿದೆ ಎನ್ನುತ್ತಾರೆ.
ಇನ್ನು ತಾಯಿಯ ವಿಗ್ರಹವನ್ನ ಕಣ್ತುಂಬಿಕೊಳ್ಳಲು ರಾಮನಗರ ಸೇರಿದಂತೆ ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಜನರು ಆಗಮಿಸುತ್ತಿದ್ದಾರೆ. ಮೊದಲೆಲ್ಲ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆವು. ಆದರೆ ಇವತ್ತು ನಮಗೆ ಗೌಡಗೆರೆಯಲ್ಲಿ ತಾಯಿಯ ದರ್ಶನ ಪಡೆದು ಖುಷಿಯಾಯ್ತು ಎನ್ನುತ್ತಾರೆ ಭಕ್ತರು.
ಇದನ್ನೂ ಓದಿ: Siddaramotsava: ಮುಂದಿನ ಸಿಎಂ ಸಿದ್ದರಾಮಯ್ಯ; ಡಿಕೆಶಿಗೆ ಬ್ಯಾನರ್ ಮೂಲಕ ಟಕ್ಕರ್ ಕೊಟ್ಟ ಸಿದ್ದು ಬೆಂಬಲಿಗರು
ಒಟ್ಟಾರೆ ವಿಶ್ವದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವೆಂಬ ಖ್ಯಾತಿಗೆ ಬೊಂಬೆನಗರಿಯ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ವಿಗ್ರಹ ಸಾಕ್ಷಿಯಾಗಿದೆ. ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರವರ ಈ ಮಹಾಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಸತತವಾಗಿ ನಾಲ್ಕು ವರ್ಷಗಳಿಂದ ಪಟ್ಟ ಶ್ರಮಕ್ಕೆ ಬೆಲೆ ಸಿಕ್ಕಿದೆ. ಇನ್ನು ಪ್ರತಿದಿನವೂ ಸಹ ಬರುವ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಆಯೋಜನೆ ಮಾಡಲಾಗಿದೆ. ಒಟ್ಟಾರೆ ಬೊಂಬೆನಗರಿಯ ಗೌರವ ಮತ್ತೊಂದು ಹಂತಕ್ಕೆ ತಲುಪಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ