ಮಂಡ್ಯ: ಕಾಂಗ್ರೆಸ್ (Congress) ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈಗ ಎರಡನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಕಸರತ್ತು ನಡೆಸಿದೆ. ಒಂದಕ್ಕಿಂತ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿರೋ ಕ್ಷೇತ್ರದ ಹೆಸರುಗಳನ್ನು ಕಾಂಗ್ರೆಸ್ ಹಾಗೆ ಉಳಿಸಿಕೊಂಡಿದೆ. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದ (Madduru Constituency) ಟಿಕೆಟ್ ಹಂಚಿಕೆ ಕಾಂಗ್ರೆಸ್ಗೆ ಬಿಸಿತುಪ್ಪವಾಗಿದೆ. ಕದಲೂರು ಉದಯ್ ಗೌಡ (Kadaluru Uday Gowda) ಹಾಗೂ ಗುರುಚರಣ್ (Gurucharan) ನಡುವೆ ಟಿಕೆಟ್ಗಾಗಿ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಗುರುಚರಣ್ ಮಾಜಿ ಸಿಎಂ ಎಸ್ಎಂ ಕೃಷ್ಣ (Former CM SM Krishna) ಅವರ ತಮ್ಮನ ಮಗ. ಎಸ್ಎಂ ಕೃಷ್ಣ ಬಳಿಕ ಗುರುಚರಣ್ ಮದ್ದೂರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕದಲೂರು ಉದಯ್ ಒಂದು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿದ ಪ್ರಮುಖರ ಗುಂಪಿನಲ್ಲಿ ಕದಲೂರು ಉದಯ್ ಗೌಡ ಗುರುತಿಸಿಕೊಂಡಿದ್ದರು. ಮೈತ್ರಿ ಸರ್ಕಾರ ಪತನದ ವೇಳೆ ಮಾಜಿ ಸಚಿವ ಸಿಪಿ ಯೋಗಿಶ್ವರ್ ಬಣದಲ್ಲಿ ಕದಲೂರು ಉದಯ್ ಕಾಣಿಸಿಕೊಂಡಿದ್ದಾರೆ.
ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ಮನೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಸೇರಿರುವ ಕದಲೂರು ಉದಯ್ ಗೌಡ ಮದ್ದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉದಯ್ ಗೌಡ ಕೆಸಿನೋ ಕಿಂಗ್ ಎಂದೇ ಈ ಭಾಗದಲ್ಲಿ ಖ್ಯಾತರಾಗಿದ್ದಾರೆ.
ಇಬ್ಬರಲ್ಲಿ ಯಾರಿಗೆ ಸಿಗುತ್ತೆ ಟಿಕೆಟ್?
ಒಂದು ವೇಳೆ ಕದಲೂರು ಉದಯ್ ಗೌಡಗೆ ಟಿಕೆಟ್ ನೀಡಿದ್ರೆ ಮಾಜಿ ಸಿಎಂ ಎಸ್ಎಂ ಕೃಷ್ಣ ಕುಟುಂಬವನ್ನು ಕಡೆಗಣಿಸುವಂತಾಗುತ್ತದೆ. ಎಸ್ಎಂ ಕೃಷ್ಣ ಬಿಜೆಪಿ ಸೇರಿದ್ರೂ ಗುರುಚರಣ್ ಮಾತ್ರ ಕಾಂಗ್ರೆಸ್ನಲ್ಲಿದ್ದಾರೆ. ಎಸ್ಎಂ ಕೃಷ್ಣ ಮಂಡ್ಯ ಭಾಗದಲ್ಲಿ ತಮ್ಮದೇ ಪ್ರಭಾವವನ್ನು ಹೊಂದಿದ್ದಾರೆ.
ಇದನ್ನೂ ಓದಿ: HD Revanna ಆರೋಪ ಬೆನ್ನಲ್ಲೇ ಸ್ವಯಂ ವರ್ಗಾವಣೆ ಕೋರಿದ DySP
ಒಂದು ವೇಳೆ ಗುರುಚರಣ್ ಅವರಿಗೆ ಟಿಕೆಟ್ ತಪ್ಪಿದ್ರೆ ಮೂಲ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಸಂದೇಶ ರವಾನಿಸಿದಂತಾಗುತ್ತದೆ.
ವಲಸಿಗರಿಗೆ ಟಿಕೆಟ್ ನೀಡಿದ್ರೆ ಮದ್ದೂರು ಭಾಗದಲ್ಲಿ ಭಿನ್ನಮತ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ